ಯಕ್ಷಗಾನ ಪ್ರದರ್ಶನ ಆಯೋಜಿಸಿರುವ ಮಂಗಳಮುಖಿಯರು: ಸಾವಿರಾರು ಜನರಿಗೆ ಅನ್ನದಾನಕ್ಕೆ ಏರ್ಪಾಟು!
ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರ ಪೈಕಿ ಮಂಗಳಮುಖಿಯರು ಕೂಡಾ ಒಬ್ಬರು. ಮಂಗಳಮುಖಿಯರೆಂದರೆ ಮುಖ ಸಿಂಡರಿಸುವ, ಅವರ ಬಗ್ಗೆ ತಾತ್ಸರ ಮನೋಭಾವ ಹೊಂದಿರುವವರೇ ಅಧಿಕವಾಗಿದ್ದಾರೆ. ಆದರೆ ಮಂಗಳೂರಿನ ಮಂಗಳಮುಖಿಯರ ಒಂದು ತಂಡ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದೆ. ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿರುವ ಯಕ್ಷಗಾನವನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿಯರ ತಂಡ ಆಯೋಜಿಸಿದೆ.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಮಂಗಳಮುಖಿಯರು ಯಕ್ಷಗಾನವನ್ನು ಆಯೋಜಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಐದು ಮಂದಿ ಮಂಗಳಮುಖಿಯರೇ ಸೇರಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಹೀಗೆ ಮಂಗಳಮುಖಿಯರು ಯಕ್ಷಗಾನ ಆಯೋಜಿಸಿರುವುದು ಇದೇ ಮೊದಲು!
'ಪುಷ್ಪ' ಚಿತ್ರದ ಶ್ರೀವಲ್ಲಿ ಹಾಡಿಗೆ ಕುಣಿದ ಯಕ್ಷಗಾನ ಕಲಾವಿದನ ವಿಡಿಯೋ ವೈರಲ್: ನೆಟ್ಟಿಗರು ಗರಂ
ಮಂಗಳೂರು ನಗರದ ಕೋಡಿಕಲ್ ಕಟ್ಟೆಯ ಮೈದಾನದಲ್ಲಿ ಫೆ.25ರಂದು ಈ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟರ ಮುಂದಾಳತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರು 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ. ಸುಮಾರು 1,500ರಷ್ಟು ಜನ ಸೇರುವ ನಿರೀಕ್ಷೆಯಿದ್ದು, ಅಷ್ಟೂ ಮಂದಿ ಯಕ್ಷಗಾನ ಆಸಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಅಶೋಕನಗರ, ದಂಬೇಲ್ನಲ್ಲಿ ವಾಸವಿರುವ ಮಂಗಳಮುಖಿಯರು
ಅಶೋಕನಗರ, ದಂಬೇಲ್ನಲ್ಲಿ ವಾಸವಿರುವ ಮಂಗಳಮುಖಿಯರು ಈ ಯಕ್ಷಗಾನವನ್ನು ಆಯೋಜಿಸಿದ್ದಾರೆ. ಈ ಐವರು ಯಾವುದೇ ದೇಣಿಗೆ ಪಡೆಯದೆ ತಾವು ಕೆಲಸ ಮಾಡಿ ಸಂಪಾದನೆ ಮಾಡಿ ಉಳಿಸಿದ ಹಣ ದೇವಿಯ ಸೇವೆಗೆ ವಿನಿಯೋಗಿಸಲು ಮುಂದಾಗಿದ್ದಾರೆ. ಈ ಮುಂಗಳಮುಖಿಯರ ನಡೆಗೆ ಮೆಚ್ಚುಗೆ ಸಾರ್ವಜನಿಕರಿಂದ ಭಾರೀ ವ್ಯಕ್ತವಾಗಿದೆ.

ಶ್ರೀ ದೇವಿ ಮಹಾತ್ಮೆ ಪ್ರಸಂಗ
ಯಕ್ಷಗಾನ ಪ್ರದರ್ಶನಗಳಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಪ್ರಸಂಗ ಅತೀ ವಿಶೇಷವಾಗಿದೆ. ಕರಾವಳಿಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ಯ ಹರಕೆಯ ಸೇವೆಯಾಟವಾಗಿ ಶ್ರೀ ದೇವಿ ಮಹಾತ್ಮೆ ಪ್ರದರ್ಶನವಾಗುತ್ತದೆ. ಮಹಿಷಾಸುರನ ಆರ್ಭಟ, ರಾಕ್ಷಸರೊಂದಿಗೆ ಸೆಣಸಾಡುವ ದೇವಿ ಎಲ್ಲವೂ ಕತ್ತಲ ರಾತ್ರಿಯಲ್ಲಿ ಹೊಸ ಲೋಕವನ್ನೇ ತೆರೆದಿಡುತ್ತದೆ. ಶ್ರೀ ದೇವಿ ಮಹಾತ್ಮೆ ಪ್ರಸಂಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಪ್ರದರ್ಶನಕ್ಕೊಳಪಡುವ ಯಕ್ಷಗಾನ ಪ್ರಸಂಗವಾಗಿದೆ. ಪ್ರತೀ ದಿನವೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಜಿಲ್ಲೆಯ ಯಾವುದಾದರೂ ಒಂದು ಭಾಗದಲ್ಲಿ ನಡೆಯಲ್ಪಡುತ್ತದೆ. ಕಟೀಲು ದುರ್ಗಾಪರಮೇಶ್ವರಿ ಮೇಳದ ಆರು ಮೇಳಗಳಲ್ಲಿ ಆರು ಮೇಳವೂ ದೇವಿ ಮಹಾತ್ಮೆ ಪ್ರಸಂಗ ಆಡಿದ ಇತಿಹಾಸವೂ ಕರಾವಳಿಯಲ್ಲಿದೆ. ಅಷ್ಟರಮಟ್ಟಿಗೆ ದೇವಿ ಮಹಾತ್ಮೆ ಪ್ರಸಂಗ ಜನರಿಗೆ ಭಕ್ತಿ ಶ್ರದ್ದೆಯ ಜೊತೆ ದೇವಿಯ ನೈಜ ಕಥಾನಕವನ್ನು ಜನರ ಮುಂದಿಡುತ್ತದೆ.

ಒಂದೂವೆರೆ ಸಾವಿರ ಜನರಿಗೆ ಅನ್ನದಾನ
ದೇವಿಗೆ ಪ್ರೀಯವಾದ ಶುಕ್ರವಾರದ ಶುಭದಿನದಂದೇ ಮಂಗಳಮುಖಿಯರ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಪ್ರಸಂಗದ ಪ್ರಾಯೋಜಕರು ವಾರಗಳ ಕಾಲ ವ್ರತವನ್ನು ಮಾಡುತ್ತಾರೆ. ಮೈ ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಮಧು-ಮಾಂಸದಿಂದ ದೂರವಿದ್ದು ದೇವಿಯ ಆರಾಧನೆ ಮಾಡುತ್ತಾರೆ. ಯಕ್ಷಗಾನ ಪ್ರದರ್ಶನ ಸಂಧರ್ಭದಲ್ಲಿ ಮಂಗಳಮುಖಿಯರ ಜ ಒಂದೂವರೆ ಸಾವಿರ ಜನರಿಗೆ ಅನ್ನದಾನ ಮಾಡುವ ಯೋಚನೆಯನ್ನು ಮಾಡಿದ್ದು,ಇದಕ್ಕಾಗಿ ಭರ್ಜರಿ ತಯಾರಿಯನ್ನು ಮಾಡಿಕೊಂಡಿದ್ದಾರೆ. ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವರಿಗೆ ಈ ಸಂಧರ್ಭದಲ್ಲಿ ಪೂಜೆಯೂ ನಡೆಯಲಿದ್ದು, ಶುದ್ಧ ಮನಸ್ಸಿನೊಂದಿಗೆ ಮಂಗಳಮುಖಿಯರು ಸೇವೆ ಸಲ್ಲಿಸಲಿದ್ದಾರೆ

ದುಡಿಮೆಯ ಹಣದಲ್ಲಿ ಯಕ್ಷಗಾನ ಆಯೋಜಿಸಲಾಗಿದೆ
ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಅತೀ ಹೆಚ್ಚಾಗಿ ಹರಕೆಯ ಸೇವೆಯಾಟವಾಗಿ ಆಡಿಸುತ್ತಾರೆ. ಹಲವು ಮಂದಿ ಇದನ್ನು ವೈಭಯುತವಾಗಿಯೂ ಅವರ ಅಂತಸ್ತಿಗೆ ಅನುಗುಣವಾಗಿಯೂ ಆಡಿ ತೋರಿಸುತ್ತಾರೆ. ಮಂಗಳೂರಿನ ಮಂಗಳಮುಖಿಯರ ಈ ತಂಡ ಅಕ್ರಮವಾಗಿ ಭಿಕ್ಷಾಟನೆ ಮಾಡದೇ ಸ್ವ ಉದ್ಯೋಗ ಮಾಡಿ ಸಂಪದಾನೆ ಮಾಡೋದು ವಿಶೇಷವಾಗಿದೆ. ಇದಕ್ಕಾಗಿಯೇ ಒಂದು ತಂಡವನ್ನು ಕಟ್ಟಿಕೊಂಡು, ಸ್ವ ಉದ್ಯೋಗವನ್ನು ಮಾಡುತ್ತಾ ಇವರು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಮಂಗಳೂರಿನ ಮಂಗಳಮುಖಿಯರು ಆಯೋಜಿಸಿರುವ ಯಕ್ಷಗಾನ ಪ್ರದರ್ಶನ ಮಂಗಳೂರಿಗರ ಕುತೂಹಲವನ್ನು ಇಮ್ಮಡಿಗೊಳಿಸಿದೆ.


Click it and Unblock the Notifications











