ಗೆದ್ದವರನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡಿ ಪೈಪೋಟಿ ನೀಡಿ: ಯಶ್
ರಾಕಿಂಗ್ ಸ್ಟಾರ್ ಯಶ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಪ್ರತಿಭೆ ಇಂದು ಚಂದನವನದ ಟಾಪ್ ಸ್ಟಾರ್ ಆಗಿ ನಿಂತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಸಹ ಯಶ್ ಖ್ಯಾತಿ ಗಳಿಸಿದ್ದಾರೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಜಿಎಫ್ ಚಿತ್ರ ಸರಣಿ ಮೂಲಕ ಕನ್ನಡ ಚಿತ್ರರಂಗ ಯಶಸ್ಸಿನ ಉತ್ತುಂಗಕ್ಕೇರಿದ್ದು, ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಬೇಕೆಂಬ ಹಠ ತೊಟ್ಟಿದ್ದ ಯಶ್ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.
ಕೆಜಿಎಫ್ ಚಿತ್ರ ಬರುವುದಕ್ಕೂ ಮುನ್ನ ಕನ್ನಡ ಚಿತ್ರರಂಗದಿಂದ ದೇಶಾದ್ಯಂತ ಸದ್ದು ಮಾಡುವ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಟ್ರೋಲ್ ಮಾಡುತ್ತಿದ್ದವರೆಲ್ಲಾ ಇಂದು ಸ್ಯಾಂಡಲ್ವುಡ್ ಇತರೆ ಚಿತ್ರರಂಗಗಳನ್ನು ಮೀರಿಸುವಂತಹ ಚಿತ್ರಗಳನ್ನು ನಿರ್ಮಿಸುತ್ತಿರುವುದನ್ನು ಕಂಡು ಬೆರಗಾಗಿದ್ದಾರೆ ಹಾಗೂ ಈ ಬೃಹತ್ ಬದಲಾವಣೆಯನ್ನು ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು, ಈ ಯಶಸ್ಸಿಗೆ ಕಾರಣಕರ್ತರಾದ ಹಲವಾರು ಕಲಾವಿದರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹೆಸರಾಂತ ಫಿಲ್ಮ್ ಕಂಪ್ಯಾನಿಯನ್ ಸಂದರ್ಶನ ನಡೆಸಿದೆ. ಹೌದು, ರಾಕಿಂಗ್ ಸ್ಟಾರ್ ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಎಂಬ ಹೆಸರಿನಡಿಯಲ್ಲಿ ಈ ಸಂದರ್ಶನವನ್ನು ನಡೆಸಲಾಗಿದ್ದು ಯಶ್ ಮನಬಿಚ್ಚಿ ಮಾತನಾಡಿದ್ದಾರೆ. ಕೇವಲ ತಮ್ಮ ಚಿತ್ರದ ಕುರಿತು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಇತರೆ ಚಿತ್ರಗಳು ಹಾಗೂ ಇತರೆ ಚಿತ್ರರಂಗಗಳ ಬಗ್ಗೆಯೂ ಸಹ ಯಶ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದೇ ವೇಳೆ ಬೇರೆ ಚಿತ್ರರಂಗಗಳ ಬಗ್ಗೆ ಹಗುರವಾಗಿ ಮಾತನಾಡುವವರಿಗೂ ಸಹ ಯಶ್ ಸಂದೇಶವನ್ನು ರವಾನಿಸಿದ್ದಾರೆ.

ಹೊಟ್ಟೆಕಿಚ್ಚು ಪಡಬಾರದು
ಬೇರೆ ಚಿತ್ರರಂಗಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಬೇರೆ ಚಿತ್ರರಂಗಗಳನ್ನು ಟ್ರೋಲ್ ಮಾಡುವುದನ್ನು ಬೆಂಬಲಿಸಬಾರದು ಎಂದಿರುವ ಯಶ್ ಒಳ್ಳೆ ಚಿತ್ರಗಳನ್ನು ಮಾಡುವ ಕಲಾವಿದನನ್ನು ಹಾಗೂ ಒಳ್ಳೆ ಚಿತ್ರಗಳನ್ನು ಮಾಡುವ ಚಿತ್ರರಂಗಳನ್ನು ಗೌರವಿಸಬೇಕು ಎಂದಿದ್ದಾರೆ. ಇದೇ ವೇಳೆ ಬೇರೆ ಚಿತ್ರರಂಗದ ಬಗ್ಗೆ ಹೊಟ್ಟೆಕಿಚ್ಚು ಪಡಬಾರದು, ನಾವೇ ಬೆಸ್ಟ್ ಎಂದು ಸುಮ್ಮನೆ ಕೂರಬಾರದು, ಹೋಗಿ ಪೈಪೋಟಿ ನೀಡಬೇಕು, ಈಗಿನ ತಲೆಮಾರಿನ ಯುವಕರು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಯಶ್ ಹೇಳಿದರು.

ನಮ್ಮನ್ನು ಹೀಯಾಳಿಸಿದ್ರು ಎಂದು ನಾವೂ ಹೀಯಾಳಿಸಬಾರದು
ಇನ್ನೂ ಮುಂದುವರಿದು ಮಾತನಾಡಿದ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದರು. ಕನ್ನಡ ಸಿನಿ ರಸಿಕರು ಬೇರೆ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಬಾರದು, ನಾವು ಹಿಂದೆ ಉಳಿದಿದ್ದಾಗ ಹೀಯಾಳಿಸಿದ್ರು ಎಂಬ ಕಾರಣಕ್ಕೆ ನಾವು ಬೆಳೆದು ಗೌರವ ಪಡೆದುಕೊಂಡ ನಂತರ ಬೇರೆ ಚಿತ್ರರಂಗವನ್ನು ಹೀಯಾಳಿಸುವುದು ಸರಿಯಲ್ಲ, ನಾವು ಎಲ್ಲರನ್ನೂ ಗೌರವಿಸಬೇಕು ಎಂದು ಯಶ್ ಹೇಳಿದರು.

ಬಾಲಿವುಡ್ ಗೌರವಿಸಿ
ಮಾತು ಮುಂದುವರಿಸಿದ ಯಶ್ ಬಾಲಿವುಡ್ ಅನ್ನು ಗೌರವಿಸಿ ಎಂದರು. ದಕ್ಷಿಣ ಹಾಗೂ ಉತ್ತರ ಭಾರತದ ಚಿತ್ರರಂಗಗಳು ಎಂಬುದನ್ನು ಬಿಡಿ, ಆ ರೀತಿ ಮಾತನಾಡಬೇಡಿ, ನಾವು ಇದನ್ನೆಲ್ಲಾ ನಿಲ್ಲಿಸುವುದು ಯಾವಾಗ, ನಮ್ಮ ಗುರಿ ಬೇರೆ ದೇಶಗಳ ಜತೆ ಪೈಪೋಟಿ ನೀಡುವುದಾಗಿರಬೇಕು, ಪೈಪೋಟಿ ನೀಡಿ ಭಾರತ ಬಂದಿದೆ ಎಂದು ಪ್ರಪಂಚಕ್ಕೆ ಹೇಳಿ ಎಂದು ಯಶ್ ಹೇಳಿದರು.

ಬಾಲಿವುಡ್ ತುಂಬಾ ಕಲಿಸಿಕೊಟ್ಟಿದೆ
ಇನ್ನು ಬಾಲಿವುಡ್ ಚಿತ್ರರಂಗ ಈ ಹಿಂದೆ ಹಲವು ವಿಚಾರಗಳನ್ನು ಕಲಿಸಿಕೊಟ್ಟಿದೆ ಹಾಗೂ ಅವರು ಸದ್ಯಕ್ಕೆ ಕೆಟ್ಟ ಹಂತದಲ್ಲಿದ್ದಾರೆ ಎಂದೂ ಸಹ ಯಶ್ ಹೇಳಿದರು. ಯಶ್ ಈ ರೀತಿ ಇತರೆ ಚಿತ್ರರಂಗವನ್ನು ಗೌರವಿಸಿ ಎಂದು ಸಂದೇಶ ನೀಡಿದ್ದನ್ನು ಕಂಡ ಅಲ್ಲಿದ್ದ ಸಿನಿ ರಸಿಕರು ಶಿಳ್ಳೆ ಚಪ್ಪಾಳೆ ಹಾಕಿ ಪ್ರಶಂಸಿಸಿದರು.


Click it and Unblock the Notifications











