ತನಗಾಗಿ 500 ಕಿ.ಮೀ ನಡೆದು ಬಂದವರನ್ನು ಅಪ್ಪಿಕೊಂಡ ದರ್ಶನ್
ನಟ ದರ್ಶನ್, ತಮ್ಮ ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾರೆಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಸಿನಿಮಾ ತಾರೆಯರನ್ನು ಸೆಲೆಬ್ರಿಟಿಗಳೆಂದು ಸಂಭೋಧಿಸುವ ಕಾಲದಲ್ಲಿ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಸಂಭೋಧಿಸುತ್ತಾರೆ ದರ್ಶನ್.
ದರ್ಶನ್ ಹೋದಲ್ಲಿ ಬಂದಲ್ಲೆಲ್ಲ ಅಭಿಮಾನಿಗಳ ಸಾಗರವೇ ಸೇರುತ್ತದೆ. ಅದಿರಲಿ, ದರ್ಶನ್ ಮನೆಯ ಮುಂದೆ ಪ್ರತಿದಿನವೂ ಒಬ್ಬರಲ್ಲ ಒಬ್ಬರು ಅಭಿಮಾನಿಗಳು ಬರುತ್ತಲೇ ಇರುತ್ತಾರೆ, ಭೇಟಿಗೆ ಯತ್ನ ಮಾಡುತ್ತಲೇ ಇರುತ್ತಾರೆ.
ಇದೀಗ ದರ್ಶನ್ ಅವರನ್ನು ಹುಡುಕಿಕೊಂಡು 500 ಕಿ.ಮೀ ದೂರವನ್ನು ಕಾಲ್ನಡಿಗೆಯ್ಲಿ ನಡೆದುಕೊಂಡೇ ಬಂದಿದ್ದಾರೆ ಇಬ್ಬರು ಅಭಿಮಾನಿಗಳು. ಈ ಇಬ್ಬರೂ ಅಭಿಮಾನಿಗಳನ್ನು ದರ್ಶನ್ ಆತ್ಮೀಯವಾಗಿ ಸ್ವಾಗತಿಸಿ ಚಿತ್ರತೆಗೆಸಿಕೊಂಡಿದ್ದಾರೆ. ಆ ಚಿತ್ರ ಇದೀಗ ವೈರಲ್ ಆಗಿದೆ.

ಇಬ್ಬರು ದರ್ಶನ್ ಅಭಿಮಾನಿಗಳು ಸುಮಾರು 500 ಕಿ.ಮೀ ದೂರದಿಂದ ನಡೆದುಕೊಂಡು ಬಂದು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಉತ್ತರ ಕರ್ನಾಟಕದವರು ಎನ್ನಲಾಗುತ್ತಿದೆ. ಅವರು ಈ ಸಾಹಸ ಮಾಡಿರುವುದು ದರ್ಶನ್ರ ಮುಂಬರುವ ಸಿನಿಮಾ 'ಕ್ರಾಂತಿ'ಯ ಪ್ರಚಾರಕ್ಕಾಗಿಯಂತೆ. ದರ್ಶನ್ ಮನೆಗೆ ಬಂದ ಅಭಿಮಾನಿಗಳನ್ನು ಭೇಟಿಯಾಗಿರುವ ದರ್ಶನ್ ಅವರೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ.
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಅಭಿಮಾನಿಗಳು ಈಗಾಗಲೇ ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ, ಗಾಡಿಗಳ ಮೇಲೆ ಚಿತ್ರಗಳನ್ನು ಅಂಟಿಸಿ, ಫ್ಲೆಕ್ಸ್ಗಳನ್ನು ಹಾಕಿ ಸಿನಿಮಾದ ಪ್ರಚಾರವನ್ನು ಜೋರಾಗಿ ಮಾಡುತ್ತಿದ್ದಾರೆ.
'ಕ್ರಾಂತಿ' ಸಿನಿಮಾವು ಶಿಕ್ಷಣದ ವಿಷಯದ ಕತೆಯನ್ನು ಹೊಂದಿದ್ದು, ದರ್ಶನ್ ನಟನೆಯ ಹಿಟ್ ಸಿನಿಮಾ 'ಯಜಮಾನ' ಅನ್ನು ನಿರ್ಮಿಸಿದ್ದ ತಂಡವೇ 'ಕ್ರಾಂತಿ' ನಿರ್ಮಾಣಕ್ಕೆ ಕೈ ಹಾಕಿದೆ. ದರ್ಶನ್ರ ಗೆಳೆಯ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಶೈಲಜಾ ನಾಗ್. ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











