ಮಾ.28ಕ್ಕೆ ನಿಮ್ಮ ಮುಂದೆ 'ಉಳಿದವರು ಕಂಡಂತೆ'
ಯಾವುದೇ ಗಿಮ್ಮಿಕ್ಕು, ಅಬ್ಬರದ ಪ್ರಚಾರವಿಲ್ಲದೆ ಚಿತ್ರರಸಿಕರಲ್ಲಿ ಕುತೂಹಲ ಕೆರಳಿಸಿರುವ ಚಿತ್ರ ರಕ್ಷಿತ್ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ 'ಉಳಿದವರು ಕಂಡಂತೆ'. ಈ ಚಿತ್ರದ ಶೀರ್ಷಿಕೆಯೂ ಒಂಥರಾ ಗಾಂಧಿನಗರ ಎಂದಿನ ಶೈಲಿಗಿಂತ ಭಿನ್ನವಾಗಿರುವುದು ಗಮನಸೆಳೆಯುವ ಅಂಶಗಳಲ್ಲಿ ಒಂದು.
ಈ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಮಾರ್ಚ್ 28ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಬಗ್ಗೆ ಈಗಾಗಲೆ ಟ್ವಿಟ್ಟರ್ ನಲ್ಲಿ ಸುದ್ದಿ ಲೀಕ್ ಆಗಿದೆ. ಅದು ರೀ ಟ್ವೀಟ್ ಸಹ ಆಗಿ ಭಾರಿ ಸದ್ದು ಮಾಡಿದೆ. ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ, ಬೆಂಗಳೂರಿನಲ್ಲಿ ಯಾವುದು ಮೇನ್ ಥಿಯೇಟರ್ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. [ಶೀತಲ್ ಶೆಟ್ಟಿ ಸಂದರ್ಶನ]
ಉಳಿದವರು ಕಂಡಂತೆ ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹಾಡುಗಳು ಚಿತ್ರರಸಿಕರು ಮತ್ತೆ ಮತ್ತೆ ಗುನುಗುವಂತಿವೆ. ಈ ಚಿತ್ರದ ಆಂಡ್ರಾಯ್ಡ್ ಆಪ್ ಸಹ ಬಿಡುಗಡೆಯಾಗಿದ್ದು ಅಭಿಮಾನಿಗಳು ಅಲ್ಲಿಂದಲೂ ಚಿತ್ರದ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ.ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕನ್ನಡ ಸಿನಿಪ್ರೇಮಿಗಳನ್ನು ಸಾಕಷ್ಟು ಆಕರ್ಷಿಸುತ್ತಿದೆ. ಹೇಮಂತ್, ಸುನಿ ಹಾಗೂ ಅಭಿ ಚಿತ್ರದ ನಿರ್ಮಾಪಕರು. ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಚಿತ್ರದ ಪಾತ್ರವರ್ಗದಲ್ಲಿ ಶಂಕರ್ ಪೂಜಾರಿಯಾಗಿ ದಿನೇಶ್ ಮಂಗಳೂರು, ರತ್ನಕ್ಕಳಾಗಿ ತಾರಾ, ಮುನ್ನಾ ಪಾತ್ರದಲ್ಲಿ ಕಿಶೋರ್, ರಿಚಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ, ರಿಶಬ್ ಆಗಿ ರಘು, ಬಾಲು ಪಾತ್ರದಲ್ಲಿ ಅಚ್ಯುತ ಕುಮಾರ್, ಶಾರದಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಹಾಗೂ ರೆಜೀನಾ ಪಾತ್ರದಲ್ಲಿ ಶೀತಲ್ ಶೆಟ್ಟಿ.
ಈ ಬಾರಿ ರಕ್ಷಿತ್ ಶೆಟ್ಟಿ ತಮ್ಮ ಚಿತ್ರದ ಮೂಲಕ ಏನೆಲ್ಲಾ ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಮಲ್ಪೆ, ಕರಾವಳಿ, ಉಡುಪಿಯ ಸುಂದರ ತಾಣಗಳ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ಸಹ ಕುತೂಹದಿಂದ ನಿರೀಕ್ಷಿಸುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












