ಪುತ್ರನಿಗೆ ಚಾಮುಂಡಿ ತಾಯಿ ದರ್ಶನ ಪಡೆಯಲು ಹೇಳಿದ ರವಿಚಂದ್ರನ್
ಕ್ರೇಜಿಸ್ಟಾರ್ ಪುತ್ರ ಮನು ರವಿಚಂದ್ರನ್ ಹೊಸ ಸಿನಿಮಾ ಮುಗಿಲ್ ಪೇಟೆ ಬಿಡುಗಡೆ ಸಜ್ಜಾಗಿದೆ. ಇದೇ ನವೆಂಬರ್ 19ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಮುಗಿಲ್ ಪೇಟೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮನು ಯಶಸ್ಸಿನ ಹೆಜ್ಜೆಯಿಡಲು ಸಜ್ಜಾಗಿದ್ದಾರೆ. ಮುಗಿಲ್ ಪೇಟೆ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಇಡೀ ಚಿತ್ರತಂಡ ನವೆಂಬರ್ 08 ರಿಂದ ಭರ್ಜರಿ ಪ್ರಚಾರ ಆರಂಭಿಸಿದೆ.
ಮುಗಿಲ್ ಪೇಟೆ ಸಿನಿಮಾ ಬಗ್ಗೆ ಕೇವಲ ಮನು ರವಿಚಂದ್ರನ್ಗಷ್ಟೇ ಅಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ಗೂ ಕುತೂಹಲವಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಬಿಡುಗಡೆಯ ಪ್ರತಿ ಹಂತವನ್ನು ರವಿಚಂದ್ರನ್ ಗಮನಿಸುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರಚಾರಕ್ಕಾಗಿ ಮೈಸೂರಿನ ಕಡೆ ಪಯಣ ಬೆಳೆಸುತ್ತಿರುವ ಪುತ್ರ ಮನುಗೆ ಕ್ರೇಜಿಸ್ಟಾರ್ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಬರುವಂತೆ ಸೂಚಿಸಿದ್ದಾರೆ.
'ಮುಗಿಲ್ ಪೇಟೆ' ಸಿನಿಮಾ 90 ದಿನಗಳ ಸುದೀರ್ಘ ಕಾಲ ಚಿತ್ರೀಕರಣ ನಡೆದಿದೆ. ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಕೊರೊನಾ, ಲಾಕ್ಡೌನ್ ಅಂತ ಲಾಕ್ ಆಗಿದ್ದ ಚಿತ್ರ ನವೆಂಬರ್ 19ರಂದು ಥಿಯೇಟರ್ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಹೀಗಾಗಿ ಮನು ರವಿಚಂದ್ರನ್ ಸೇರಿದಂತೆ ಇಡೀ ಚಿತ್ರತಂಡ ಮೈಸೂರಿಗೆ ಪ್ರಚಾರಕ್ಕಾಗಿ ಪಯಣ ಬೆಳೆಸುತ್ತಿದೆ. ಈ ವೇಳೆ ರವಿಚಂದ್ರನ್ ಹಾಗೂ ಪುತ್ರ ಮನು ಜೊತೆ ನಡೆದ ಚುಟುಕಿನ ಸಂಭಾಷಣೆ ಕ್ರೇಜಿ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.

ಅಪ್ಪ-ಮಗನ ಸಂಭಾಷಣೆಯಿಂದ ಪ್ರಚಾರ ಆರಂಭ
ರವಿಚಂದ್ರನ್ ಹಾಗೂ ಪುತ್ರ ಮನು ನಡುವಿನ ಸಂಭಾಷಣೆಯಿಂದಲೇ ಮುಗಿಲ್ ಪೇಟೆ ಪ್ರಚಾರ ಆರಂಭ ಆಗಿದೆ. ಈ ವಿಡಿಯೋದಲ್ಲಿ ಕ್ರೇಜಿಸ್ಟಾರ್ ತಮ್ಮ ಪುತ್ರನಿಂದ 'ಮುಗಿಲ್ ಪೇಟೆ' ಚಿತ್ರ ಬಿಡುಗಡೆಯಿಂದ ಹಿಡಿದು ಮೈಸೂರಿನಲ್ಲಿ ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೆ ಅನ್ನುವ ಮಾಹಿತಿಯನ್ನು ಪಡೆದಿದ್ದಾರೆ. ಇದೇ ವೇಳೆ ಮೈಸೂರಿಗೆ ಹೋದ ಕೂಡಲೇ ಮೊದಲು ಚಾಮುಂಡಿ ತಾಯಿಯ ದರ್ಶನ ಪಡೆದ ಬಳಿಕವಷ್ಟೇ ಸಿನಿಮಾ ಪ್ರಚಾರ ಆರಂಭ ಮಾಡುವಂತೆ ಸಲಹೆ ನೀಡಿದ್ದಾರೆ.

ಮಹಾರಾಣಿ, ಯುವರಾಜ, ಮಹಾರಾಜ ಕಾಲೇಜಿನಲ್ಲಿ ಪ್ರಚಾರ
ಮುಗಿಲ್ ಪೇಟೆ ಪ್ರಚಾರಕ್ಕಾಗಿ ಮೈಸೂರಿನ ಪ್ರತಿಷ್ಟಿತ ಕಾಲೇಜುಗಳಿಗೆ ಮನು ರವಿಚಂದ್ರನ್ ಭೇಟಿ ನೀಡುತ್ತಿದ್ದಾರೆ. ತಂದೆಯ ಸೂಚನೆಯಂತೆ ಮೊದಲು ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು, ಮಹಾರಾಣಿ ಕಾಲೇಜಿಗೆ ತಲುಪಲಿದ್ದಾರೆ. ಬಳಿಕ ಯುವರಾಜ ಹಾಗೂ ಮಹಾರಾಜ ಕಾಲೇಜಿನಲ್ಲಿ ಮುಗಿಲ್ ಪೇಟೆ ಸಿನಿಮಾ ಪ್ರಚಾರ ಮಾಡಲಿದ್ದಾರೆ.

ಸಂಬಂಧಗಳ ಸಂಕೋಲೆಯಲ್ಲಿ ಎರಡು ಜೀವಗಳ ಪ್ರೇಮಕಥೆ
ಮುಗಿಲ್ ಪೇಟೆ ಎರಡು ವಿಭಿನ್ನ ಕುಟುಂಬಗಳ ನಡುವೆ ಸಾಗುವ ಪ್ರೇಮಕಥೆ. ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬ ಒಂದು ಕಡೆ. ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಇನ್ನೊಂದು. ಈ ಎರಡು ಕುಟುಂಬದ ಎರಡು ಜೀವಗಳ ನಡುವಿನ ಲವ್ಸ್ಟೋರಿಯೇ ಈ ಮುಗಿಲ್ ಪೇಟೆ. ಭರತ್ ನಾವುಂದ್ ನಿರ್ದೇಶಿಸಿರೋ ಈ ಸಿನಿಮಾದಲ್ಲಿ ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಹಾಸ್ಯ ಎಲ್ಲವೂ ಇದೆ.

ಕಲಾವಿದರ ದಂಡೇ ಸಿನಿಮಾದಲ್ಲಿದೆ
ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅದ್ಬುತ ಕಲಾವಿದರ ತಂಡವೇ ಇದೆ. ಮನು ರವಿಚಂದ್ರನ್ ಜೊತೆ ನಾಯಕಿಯಾಗಿ ಕಯಾದು ನಟಿಸಿದ್ದಾರೆ. ಮುಗಿಲ್ ಪೇಟೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ನೋಡುವ ಕ್ರೇಜಿಸ್ಟಾರ್ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಮನು ರವಿಚಂದ್ರನ್ ವೃತ್ತಿ ಬದುಕಿಗೆ ಇದು ಆಧುನಿಕ ಪ್ರೇಮಲೋಕವಾಗಿ ಹೊಸ ಅಧ್ಯಾಯ ಆರಂಭ ಆಗುತ್ತೆ ಅನ್ನುವ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











