'ಬಂಗಾರದ ಮನುಷ್ಯ' ನಿರ್ದೇಶಕ ಸಿದ್ದಲಿಂಗಯ್ಯ ಅಸ್ವಸ್ಥ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಸಿದ್ದಲಿಂಗಯ್ಯ ಅವರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಯೋಸಹಜ ಕಾಯಿಲೆ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸಿದ್ಧಲಿಂಗಯ್ಯ ಅವರಿಗೆ ಜ್ವರ ಕಾಣಿಸಿಕೊಂಡ ಪರಿಣಾಮ ಕಳೆದ 20 ದಿನಗಳ ಹಿಂದೆ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಹಿಟ್ 'ಬಂಗಾರದ ಮನುಷ್ಯ', 'ಭೂತಯ್ಯನ ಮಗ ಅಯ್ಯು' ದಂತಹ ಸೂಪರ್ ಹಿಟ್ ಚಿತ್ರಗಳ ಸೂತ್ರಧಾರ ಸಿದ್ದಲಿಂಗಯ್ಯ ಅವರಿಗೆ ಎಚ್1 ಎನ್1 ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಮುಂದೆ ಓದಿ.....

ಎಚ್1 ಎನ್1 ನಿಂದ ಬಳಲುತ್ತಿದ್ದಾರಾ ಸಿದ್ದಲಿಂಗಯ್ಯ?
ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಸಿದ್ದಲಿಂಗಯ್ಯ ಅವರಿಗೆ ಎಚ್1 ಎನ್1 ಸೋಂಕು ತಗುಲಿದೆ ಅಂತ ಗುಲ್ಲೆದ್ದಿದೆ. ಆದ್ರೆ, ಸುಗುಣ ಆಸ್ಪತ್ರೆಯ ವೈದ್ಯರು ಅದನ್ನ ಧೃಡಪಡಿಸಿಲ್ಲ. ಜ್ವರ ಅಂತ ಮಾತ್ರ ಸಿದ್ದಲಿಂಗಯ್ಯ ಕುಟುಂಬ ವರ್ಗ ಹೇಳಿಕೊಂಡಿದೆ. ಉಸಿರಾಟದ ಸಮಸ್ಯೆ ಕೂಡ ಉಂಟಾಗಿರುವ ಕಾರಣ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರು ಕಳೆದ 20 ದಿನಗಳಿಂದ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟು ದಿನಗಳಾದರೂ, ಕನ್ನಡ ಚಿತ್ರರಂಗದ ಹಿರಿಯ ಜೀವಿಗಳಾಗಲಿ, ಯಾವ ನಟ-ನಟಿಯರಾಗಲಿ, ನಿರ್ದೇಶಕರುಗಳಾಗಲಿ ಅವರ ಆರೋಗ್ಯ ಸ್ಥಿತಿ ವಿಚಾರಿಸಿಲ್ಲ. [ಬಂಗಾರದಂಥ ಕನ್ನಡ ನಿರ್ದೇಶಕರನ್ನು ಈ ರೀತಿ ಕಾಣೋದಾ?]

ಮಾನವೀಯತೆ ಮೆರೆದ ವಾಣಿಜ್ಯ ಮಂಡಳಿ
ಸಿದ್ದಲಿಂಗಯ್ಯ ನವರ ಅನಾರೋಗ್ಯ ಪರಿಸ್ಥಿತಿ ತಡವಾಗಿ ಬೆಳಕಿಗೆ ಬಂದ ನಂತರ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಿನ್ನೆ ಸುಗುಣ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವೈದ್ಯರ ಬಳಿ ಸಿದ್ದಲಿಂಗಯ್ಯ ಆರೋಗ್ಯ ಪರಿಸ್ಥಿತಿ ವಿಚಾರಿಸಿದ್ದಾರೆ. [ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಇನ್ನಿಲ್ಲ]

ಸಿದ್ದಲಿಂಗಯ್ಯ ಆರೋಗ್ಯದಲ್ಲಿ ಚೇತರಿಕೆ
ಸುಗುಣ ಆಸ್ಪತ್ರೆಯ ಮೂಲಗಳ ಪ್ರಕಾರ ದಿನದಿಂದ ದಿನಕ್ಕೆ ಸಿದ್ದಲಿಂಗಯ್ಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುತ್ತಿದೆ. 79 ವರ್ಷ ವಯಸ್ಸಿನ ಸಿದ್ಧಲಿಂಗಯ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಗಾಬರಿ ಪಡುವಂಥದ್ದೇನಿಲ್ಲ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ.

ಸೂಪರ್ ಹಿಟ್ ಚಿತ್ರಗಳ ಸರದಾರ
ಸತತ 104 ವಾರಗಳ ಕಾಲ ಪ್ರದರ್ಶನಗೊಂಡ ಡಾ.ರಾಜ್ ಕುಮಾರ್ ಮತ್ತು ಭಾರತಿ ಅಭಿನಯದ 'ಬಂಗಾರದ ಮನುಷ್ಯ', 'ಮೇಯರ್ ಮುತ್ತಣ್ಣ', 'ಭೂತಯ್ಯನ ಮಗ ಅಯ್ಯು', 'ದೂರದ ಬೆಟ್ಟ' ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ದೇಶಕ ಸಿದ್ದಲಿಂಗಯ್ಯ. [ಸಿದ್ದಲಿಂಗಯ್ಯನವರ ಬೆಳ್ಳಿಹೆಜ್ಜೆ ದರ್ಶನ]


Click it and Unblock the Notifications