ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡ ಮನಕಲಕುವ ಚಿತ್ರ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಚಿತ್ರಗಳು ಪುತ್ರನ ಚಿತ್ರಗಳು ಹಾಗೂ ದರ್ಶನ್ ಅವರ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ ವಿಜಯಲಕ್ಷ್ಮಿ.
ಚಿತ್ರಗಳು ಮಾತ್ರವಷ್ಟೆ ಅಲ್ಲದೆ ಸಾಮಾಜಿಕ ವಿಷಯಗಳ ಬಗ್ಗೆಯೂ ವಿಜಯಲಕ್ಷ್ಮಿ ಅವರು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಸಮಾಜದಲ್ಲಿ ಘಟಿಸುವ ಘಟನೆಗಳಿಗೆ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಿರುತ್ತಾರೆ.
ಹಾಗೆಯೇ ಕೇರಳದಲ್ಲಿ ನಡೆದ ಮನುಕುಲವೇ ತಲೆತಗ್ಗಿಸುವಂಥಹಾ ಘಟನೆ ಬಗ್ಗೆಯೂ ವಿಜಯಲಕ್ಷ್ಮಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ವಿಜಯಲಕ್ಷ್ಮಿ ಅವರ ಮನಕಲುಕಿದೆ. ಅದರ ಬಗ್ಗೆ ಬೇಸರದಿಂದ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ ವಿಜಯಲಕ್ಷ್ಮಿ ದರ್ಶನ್.

ಗರ್ಭಿಣಿ ಆನೆಯನ್ನು ಮೋಸಮಾಡಿ ಕೊಂದ ಮನುಜರು
ಕೇರಳದಲ್ಲಿ ನಿನ್ನೆ ನಡೆದಿರುವ ಘಟನೆ ಹಲವರಿಗೆ ತೀವ್ರ ಬೇಸರ ತರಿಸಿದೆ. ಗರ್ಭಿಣಿ ಆನೆಯೊಂದಕ್ಕೆ ಅನಾನಸ್ ಹಣ್ಣಿನಲ್ಲಿ ಸಿಡಿಮದ್ದು ಇಟ್ಟು ತಿನ್ನಲು ಕೊಟ್ಟಿದ್ದಾರೆ ಕೆಲವು ಕಿಡಿಗೇಡಿಗಳು ಅದನ್ನು ತಿಂದ ಆನೆಯ ಬಾಯಿ, ನಾಲಗೆಗೆ ತೀವ್ರ ಪೆಟ್ಟಾಗಿತ್ತು. ನೋವಿನಲ್ಲೂ ಸಹ ಅದು ಯಾರಿಗೂ ತೊಂದರೆ ಕೊಡದೆ ಸಮೀಪದಲ್ಲೇ ಹರಿಯುತ್ತಿದ್ದ ನದಿಯಲ್ಲಿ ಹೋಗಿ ನಿಂತು ಅಲ್ಲಿಯೇ ಜೀವ ಬಿಟ್ಟಿದೆ.

'ಮೋಸಕ್ಕೆ ಮತ್ತೊಂದು ಹೆಸರೇ ಮನುಷ್ಯ'
ಈ ಬಗ್ಗೆ ಬರೆದಿರುವ ವಿಜಯಲಕ್ಷ್ಮಿ 'ಕೊನೆಗೂ ಮನುಷ್ಯತ್ವ ಸತ್ತಿದೆ. ಆಕೆ (ಆನೆ) ಗರ್ಭಿಣಿಯಾಗಿದ್ದಳು, ಆಕೆ ನಮ್ಮನ್ನು (ಮನುಷ್ಯರನ್ನು) ನಂಬಿದ್ದಳು, ಆದರೆ ನಾವು ಮೋಸ ಮಾಡಿಬಿಟ್ಟೆವು. ಮೋಸಕ್ಕೆ ಇನ್ನೊಂದು ಹೆಸರೇ ಮನುಷ್ಯರು' ಎಂದು ಆಕ್ರೋಶ ಹೊರಹಾಕಿರುವ ವಿಜಯಲಕ್ಷ್ಮಿ, 'ಎಲ್ಲಾ ಜೀವಗಳೂ ಅಮೂಲ್ಯ', 'ಆನೆಯ ಜೀವವೂ ಅಮೂಲ್ಯ' ಎಂದು ಹ್ಯಾಷ್ಟ್ಯಾಗ್ ಹಾಕಿದ್ದಾರೆ.

ಮನಕಲಕುವ ಚಿತ್ರ ಹಂಚಿಕೊಂಡ ವಿಜಯಲಕ್ಷ್ಮಿ
ಪೋಸ್ಟ್ ಜೊತೆ ವಿಜಯಲಕ್ಷ್ಮಿ ಹಂಚಿಕೊಂಡಿರುವ ಚಿತ್ರವೂ ಸಹ ಮನಕಲುಕುವಂತಿದೆ. ಆನೆ ನೀರಿನಲ್ಲಿ ನಿಂತು ಆಕಾಶದೆಡೆಗೆ ನೋಡುತ್ತಿದೆ. ಅದರ ಪೃಷ್ಠ ಭಾಗದಿಂದ ರಕ್ತಸ್ರಾವವಾಗುತ್ತಿದೆ' ಯಾರೋ ಕಲಾವಿದರು ಬರೆದಿರುವ ಚಿತ್ರವು ಆನೆ ಅನುಭವಿಸಿದ ನೋವನ್ನು ಕಟ್ಟಿಕೊಡುತ್ತಿದೆ.

ಕಠಿಣ ಕ್ರಮದ ಭರವಸೆ ಕೊಟ್ಟಿದ್ದಾರೆ
ಕೇರಳದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು. ಯಾರೋ ಕಿಡಿಗೇಡಿಗಳು ಈ ಹೀನಾಯ ಕೃತ್ಯ ಎಸಗಿದ್ದಾರೆ. ಆನೆ ಸತ್ತ ಬಗ್ಗೆ ಭಾರತದಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇರಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನು ಸರ್ಕಾರ ನೀಡಿದೆ.


Click it and Unblock the Notifications











