ವಿದೇಶ ಸುತ್ತಿ ಬಂದ ವಿನಯ್ ರಾಜ್ 'ಸಿದ್ದಾರ್ಥ'
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಚೊಚ್ಚಲ ಚಿತ್ರ 'ಸಿದ್ದಾರ್ಥ' ಸದ್ದಿಲ್ಲದಂತೆ ರೆಡಿಯಾಗುತ್ತಿದೆ. ರಾಜ್ ಕುಟುಂಬದ ಕುಡಿ ಎಂದ ಮೇಲೆ ಚಿತ್ರರಂಗದಲ್ಲಿ, ಅಣ್ಣಾವ್ರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಗಳು ಇವೆ.
ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ 'ಸಿದ್ದಾರ್ಥ' ಈಗ ಅಂತಿಮ ಹಂತ ತಲುಪಿದ್ದಾನೆ. [ಸಿದ್ದಾರ್ಥ ಫಸ್ಟ್ ಲುಕ್]
ಚಿತ್ರಕ್ಕಾಗಿ "ಜಾದೂ ಮಾಡಿದಂತೆ ಪಿಸು ಮಾತು ಆಡಿದಂತೆ, ಒಂದೇ ಚಿಟಿಕೆಯಲ್ಲಿ ಈಗ ಎಲ್ಲವೂ ಸುಂದರಾ" ಹಾಗೂ "ಅಚ್ಚಾಗಿದೆ ಎದೆಯಲ್ಲಿ ನಿನ್ನದೆ ಹಸಿ ಬಿಸಿ ಸಂದೇಶ, ಹೆಚ್ಚಾಗಿದೆ ಮಳೆಯಲಿ ಒಬ್ಬನೆ ನೆನೆಯುವ ಹವ್ಯಾಸ" ಎಂಬ ಎರಡು ಗೀತೆಗಳನ್ನು ವಿನಯ್ ರಾಜ್ ಕುಮಾರ್, ಅಪೂರ್ವ ಆರೋರ ಅಭಿನಯದೊಂದಿಗೆ ಗಣೇಶ್ (ಹೈದರಬಾದ್) ನೃತ್ಯ ನಿರ್ದೇಶನದೊಂದಿಗೆ ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ಫ್ರಾನ್ಸ್ ಹಾಗೂ ಇಟಲಿ ಸುತ್ತಮುತ್ತ ನಿರ್ದೇಶಕ ಪ್ರಕಾಶ್ ಜಯರಾಂ ಚಿತ್ರಿಸಿಕೊಂಡರು.ಚಿತ್ರಕ್ಕೆ ಈಗಾಗಲೇ ಮಾತಿನ ಮರುಲೇಪನ ಮುಗಿದಿದ್ದು, ಬರುವ ವಾರದಿಂದ ರೀರಿಕಾರ್ಡಿಂಗ್ ಆರಂಭವಾಗಲಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ರಘು ಸಮರ್ಥ ಸಂಭಾಷಣೆ, ಸಾಹಿತ್ಯ ಜಯಂತ್ ಕಾಯ್ಕಿಣಿ, ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಚಿನ್ನಿಪ್ರಕಾಶ್ ನೃತ್ಯ, ಸಚಿನ್ ಸಂಕಲನ ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ ಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ ಜಯರಾಮ್.
ಚಿತ್ರದ ಮೂಲಕ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದು, ಡಾ.ರಾಜ್ ಕುಟುಂಬದ ಮೂರನೇ ತಲೆಮಾರಿನ ನಾಯಕ ಇವರಾಗಲಿದ್ದು, ಇವರೊಂದಿಗೆ ಅಪೂರ್ವ ಆರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತ ಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ನಿಕ್ಕಿ, ಗುರುನಂದನ್, ನಯನ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












