ಕೆ.ಮಂಜು ನೇತೃತ್ವದಲ್ಲಿ 'ವಿಷ್ಣು ಸ್ಮಾರಕ' ಸಭೆ : ಇದರ ಹಿಂದೆ ಇದ್ದಾರಾ ಯಶ್ ?
ನಟ ವಿಷ್ಣುವರ್ಧನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಅಭಿನಯ ಭಾರ್ಗವ.. ಸಾಹಸಸಿಂಹ.. ಹೀಗೆ ಸಾಕಷ್ಟು ಬಿರುದುಗಳಿಂದ ಕರೆಯಲ್ಪಡುತಿದ್ದ ನಟ ಇವರು. ಇಂತಹ ದಿಗ್ಗಜ ನಟ ಅಪಾರ ಅಭಿಮಾನಿ ಬಳಗನ್ನು ಅಗಲಿ ಹೋಗಿ ಏಳು ವರ್ಷಗಳೇ ಕಳೆದಿದೆ. ಆದರೆ ಇನ್ನು ಕೂಡ ಅವರ ಸ್ಮಾರಕದ ವಿಚಾರ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಸರ್ಕಾರಗಳು ಬದಲಾಗುತ್ತಿದ್ದರೂ ವಿಷ್ಣು ಸ್ಮಾರಕ ವಿಚಾರ ಮಾತ್ರ ಇತ್ಯರ್ಥವಾಗಲು ಸಾಕಷ್ಟು ದಿನಗಳು ಬೇಕಾಗುತ್ತಿದೆ.
ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಆಡಿಯೋ ರಿಲೀಸ್ ಕಾರ್ಯಕ್ರಮವೊಂದರಲ್ಲಿ ವಿಷ್ಣುವರ್ಧನ್ ಹಾಗೂ ವಿಷ್ಣು ಸ್ಮಾರಕ ವಿಚಾರವಾಗಿ ಮಾತನಾಡಿದ್ದರು. ಅದಾದ ನಂತರ ವಿಷ್ಣು ಸೇನಾ ಸಮಿತಿಯಿಂದ ಅಧ್ಯಕ್ಷರು ಯಶ್ ಮಾತಿಗೆ ಬೇಸರ ವ್ಯಕ್ತ ಪಡಿಸಿ ಪತ್ರವನ್ನೂ ಬರೆದಿದ್ದರು. ಇವೆಲ್ಲವೂ ನಡೆದ ಬೆನ್ನಲ್ಲೇ ಮಹತ್ವದ ಬೆಳವಣಿಗೆ ಆಗಿದೆ. ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕೆ.ಮಂಜು ಈಗ ಸ್ಮಾರಕದ ಜವಾಬ್ದಾರಿ ಪಡೆದುಕೊಂಡಿದ್ದು, ಈ ವಿವಾದ ಇತ್ಯರ್ಥ ಮಾಡಲು ಮುಂದಾಗಿದ್ದಾರೆ....

ಸಂಧಾನಕ್ಕೆ ನಿಂತ ನಿರ್ಮಾಪಕ
ಏಳು ವರ್ಷಗಳಿಂದ ಸರ್ಕಾರ ವಿಷ್ಣುವರ್ಧನ್ ಸಮಾಧಿ ನಿರ್ಮಾಣ ಕಾರ್ಯದಲ್ಲಿ ಹಿಂದೆ ಬಿದ್ದಿದ್ದೆ. ಚಿತ್ರರಂಗದ ವತಿಯಿಂದಲೂ ಯಾರು ಕೂಡ ಈ ಬಗ್ಗೆ ಮಾತನಾಡದೆ ಸುಮ್ಮನಿದ್ದಾರೆ. ಇದನ್ನು ಹೀಗೆ ಬಿಟ್ಟರೆ ಸರಿಯಾಗುವುದಿಲ್ಲ ಎಂದು ನಿರ್ಧಾರ ಮಾಡಿದ ನಿರ್ಮಾಪಕ ಕೆ.ಮಂಜು ತಾವೇ ಜವಾಬ್ದಾರಿ ತೆಗೆದುಕೊಂಡು ಡಿ.ಸಿ.ಶಂಕರ್ ರನ್ನು ಬೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಸ್ಮಾರಕ ನಿರ್ಮಾಣವಾಗುವ ಸಾಧ್ಯತೆ
ಇಂದು (ಡಿಸೆಂಬರ್ 4) ಡಿ ಸಿ ಶಂಕರ್ ನೇತೃತ್ವದಲ್ಲಿ ವಿಷ್ಣು ಸ್ಮಾರಕ ವಿಚಾರವಾಗಿ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ನಿರ್ಮಾಪಕ ಕೆ ಮಂಜು ಹಾಗೂ ಹಿರಿಯ ನಟ ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ ಕೂಡ ಭಾಗಿಯಾಗಿದ್ದರು. ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಬಾಲಕೃಷ್ಣ ಕುಟುಂಬಸ್ಥರು ಸುಪ್ರೀಂಕೋರ್ಟ್ ನಲ್ಲಿ ನಡೆಸುತ್ತಿರುವ ಕೇಸ್ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದು, ಒಂದು ವಾರ ಕಾಲಾವಕಾಶವನ್ನು ಕೇಳಿದ್ದಾರಂತೆ. ಕೇಸ್ ಹಿಂಪಡೆದ ನಂತರ ಮತ್ತೊಂದು ಸಭೆ ನಡೆಸಲು ಆಲೋಚಿಸಲಾಗಿದೆ.

ಬಾಲಕೃಷ್ಣ ಕುಟುಂಬಕ್ಕೆ ಇಲ್ಲ ಬೇಸರ
ಸಾಕಷ್ಟು ವರ್ಷಗಳಿಂದ ವಿಷ್ಣು ಸ್ಮಾರಕ ಇರುವ ಜಾಗದಲ್ಲಿ ಬಾಲಕೃಷ್ಣ ಅವರ ಹೆಸರಿನಲ್ಲಿ ಅಭಿಮಾನ್ ಸ್ಟೂಡಿಯೊ ನಡೆದುಕೊಂಡು ಬರುತ್ತಿದೆ. ಅದ್ದರಿಂದ ಸ್ಮಾರಕ ಮತ್ತು ಸ್ಟೂಡಿಯೊ ಎರಡಕ್ಕೂ ತೊಂದರೆಯಾಗದಂತೆ ವಿಷ್ಣು ಸ್ಮಾರಕಕ್ಕೆ ಕೇವಲ ಒಂದು ಎಕರೆ ಜಾಗವನ್ನು ನೀಡುವಂತೆ ನಿರ್ಮಾಪಕ ಕೆ.ಮಂಜು ಡಿ ಸಿ ಶಂಕರ್ ಬಳಿ ಮನವಿ ಮಾಡಿದ್ದಾರೆ.

ಏಕಾ ಏಕಾ ಬೆಳವಣಿಗೆಯ ಕಾರಣವೇನು?
ಇಷ್ಟು ದಿನ ಸದ್ದಿಲ್ಲದೆ ಇದ್ದ ಸ್ಮಾರಕದ ವಿಚಾರ ಏಕಾ ಏಕಿ ಇತ್ಯರ್ಥಕ್ಕೆ ಬರಲು ಕಾರಣವೇನು? ಆಡಿಯೋ ಸಮಾರಂಭದಲ್ಲಿ ವಿಷ್ಣುವರ್ಧನ್ ರಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು ಎಂದಿದ್ದ ರಾಕಿಂಗ್ ಸ್ಟಾರ್ ಯಶ್ ಸ್ಮಾರಕ ನಿರ್ಮಾಣಕ್ಕೆ ಮುಂದಾದರಾ? ಹೀಗೆ ಸಾಕಷ್ಟು ಪ್ರಶ್ನೆಗಳು ಹಲವರಿಗೆ ಕಾಡುತ್ತಿದೆ. ಅದೇನೇ ಇದ್ದರೂ ಒಳ್ಳೇ ಕೆಲಸ ಆದರೆ ಸಾಕು ಎನ್ನುವುದು ವಿಷ್ಣು ಅಭಿಮಾನಿಗಳ ಮಾತು.


Click it and Unblock the Notifications











