ರಾಗಿಣಿ-ಸಂಜನಾ ಜಾಮೀನು ಅರ್ಜಿ ವಜಾ ಆಗಲು ಪ್ರಮುಖ ಮೂರು ಕಾರಣ?
ಡ್ರಗ್ಸ್ ಪ್ರಕರಣದಲ್ಲಿ ಸುಮಾರು ಎರಡು ತಿಂಗಳಿನಿಂದ ಬಂಧನದಲ್ಲಿರುವ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ಸಿಗುತ್ತಿಲ್ಲ. ಹೈ ಕೋರ್ಟ್ನಲ್ಲಾದರೂ ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದ ನಟಿಯರಿಗೆ ಮಂಗಳವಾರ ಮತ್ತೆ ನಿರಾಸೆ ಎದುರಾಗಿದೆ. ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.
ರಾಗಿಣಿ ಮತ್ತು ಸಂಜನಾಗೆ ಜಾಮೀನು ಸಿಗದಷ್ಟು ಈ ಪ್ರಕರಣ ಗಂಭೀರತೆ ಪಡೆದುಕೊಂಡಿದ್ಯಾ ಎಂಬ ಕುತೂಹಲ ಕಾಡುತ್ತಿದೆ. ರಾಗಿಣಿ ಮತ್ತು ಸಂಜನಾ ಅವರು ಯಾವ ತಪ್ಪು ಇಲ್ಲ, ಅವರ ವಿರುದ್ಧ ಸಾಕ್ಷ್ಯಗಳೇ ಇಲ್ಲ ಎಂದು ವಕೀಲರು ವಾದಿಸುತ್ತಿದ್ದರೂ ಯಾವ ಕಾರಣದಿಂದ ನಟಿಯರಿಗೆ ಜಾಮೀನು ಸಿಗುತ್ತಿಲ್ಲ ಎಂಬುದು ಚರ್ಚೆಯ ವಿಷಯವಾಗಿದೆ. ಅದಕ್ಕೆ ಸಿಸಿಬಿ ಪರ ವಕೀಲರು ಮೂರು ಕಾರಣ ನೀಡಿದ್ದಾರೆ. ಮುಂದೆ ಓದಿ...

ತನಿಖೆ ಪೂರ್ಣಗೊಂಡಿಲ್ಲ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ-ಸಂಜನಾ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಈ ತನಿಖೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಹಂತದಲ್ಲಿ ನಟಿಯರಿಗೆ ಜಾಮೀನು ನೀಡಿದರೆ ಸಿಸಿಬಿ ತನಿಖೆಗೆ ಅಡ್ಡಿಯಾಗಬಹುದು ಎಂದು ಸಿಸಿಬಿ ಪರ ವಕೀಲರು ವಾದಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾಕ್ಷ್ಯ ನಾಶಕ್ಕೆ ಪ್ರಯತ್ನ
ನಟಿಯರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದು ಸಂಜನಾ-ರಾಗಿಣಿ ಪರ ವಕೀಲರು ಹೇಳುತ್ತಿದ್ದಾರೆ. ಆದ್ರೆ, ಸಿಸಿಬಿ ಪರ ವಕೀಲರು ನಟಿಯರ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷ್ಯಗಳಿವೆ, ಜಾಮೀನು ನೀಡಿದರೆ ಕೇಸ್ ಮೇಲೆ ಪ್ರಭಾವ ಬೀರಬಹುದು ಎಂದು ಮತ್ತೊಂದು ಕಾರಣ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಆರೋಪಿಗಳ ಬಂಧನ ಆಗಬೇಕಿದೆ
ಈ ಕೇಸ್ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಬಂಧನ ಆಗಬೇಕಿದೆ. ಈ ಹಂತದಲ್ಲಿ ಜಾಮೀನು ಕೊಟ್ಟರೆ ಆರೋಪಿಗಳಿಗೆ ಅನುಕೂಲವಾಗಬಹುದು ಎಂದು ಸಿಸಿಬಿ ಪರ ಪೊಲೀಸರು ವಾದಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಲಯ ಸಂಜನಾ-ರಾಗಿಣಿಗೆ ಜಾಮೀನು ನಿರಾಕರಿಸಿದೆ.
Recommended Video

ಬಾಂಬ್ ಬೆದರಿಕೆಯೂ ಕಾರಣ ಆಯ್ತಾ?
ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಯನ್ನು ಜೈಲಿನಿಂದ ಬಿಡುಗಡೆ ಮಾಡದೇ ಇದ್ದರೆ ಬಾಂಬ್ ಇಡುವುದಾಗಿ ಕಮೀಷನರ್ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿತ್ತು. 'ನಟಿಯರನ್ನು ಬಿಡುಗಡೆ ಮಾಡದೇ ಇದ್ದರೆ ಕಮೀಷನರ್ ಕಚೇರಿಯನ್ನು ಬ್ಲಾಸ್ಟ್ ಮಾಡುವುದಾಗಿ ಬರೆದಿದ್ದಾರೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುಮ್ಮನಿದ್ದರೆ ಒಳ್ಳೆಯದು' ಎಂದು ಸಹ ಪತ್ರದಲ್ಲಿ ಬರೆಯಲಾಗಿತ್ತು. ಈ ಬೆಳವಣಿಗೆಯೂ ಏನಾದರೂ ಅಡ್ಡಿಯಾಯಿತಾ?


Click it and Unblock the Notifications











