'ಕಾಂತಾರ' ಎಂದರೇನು? ಹೆಸರು ಸೂಚಿಸಿದ್ದು ಯಾರು?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಇನ್ನೆರಡು ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾ ತಂಡ, ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಮೇಕಿಂಗ್ ಹಂತದಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಸಿನಿಮಾದ ಟ್ರೈಲರ್, ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಬಗ್ಗೆ ಇದ್ದ ಕುತೂಹಲ ದುಪ್ಪಟ್ಟಾಗಿದೆ.
ಸಿನಿಮಾದ ಟ್ರೈಲರ್ ವೀಕ್ಷಿಸಿದರೆ ಇದು ಕೇವಲ ನಾಯಕ-ವಿಲನ್ ನಡುವಿನ ತಿಕ್ಕಾಟದಂತೆ ಕಾಣುತ್ತಿಲ್ಲ. ಸಿನಿಮಾದಲ್ಲಿ ನಾಯಕ-ವಿಲನ್ ಹೊರತಾಗಿ ಇನ್ನೂ ಸಾಕಷ್ಟು ಅಂಶಗಳು, ದೈವದ ಕುತೂಹಲ, ಕಾಡಿನ ರೋಚಕತೆ ಇನ್ನೂ ಹಲವು ವಿಷಯಗಳು ಅಡಕವಾದಂತಿದೆ. ಇದೆಲ್ಲದುರ ಜೊತೆಗೆ ಸಿನಿಮಾ ಹೆಸರೇ ಒಂದು ರೀತಿಯ ಕುತೂಹಲ ಹುಟ್ಟಿಸುತ್ತಿದೆ. ಹಾಗಿದ್ದರೆ 'ಕಾಂತಾರ' ಎಂದರೆ ಅರ್ಥವೇನು? ಈ ಹೆಸರನ್ನೇ ಸಿನಿಮಾಕ್ಕೆ ಇಡುವಂತೆ ಸೂಚಿಸಿದ್ದು ಯಾರು? ಇಲ್ಲಿದೆ ಉತ್ತರ.

'ಕಾಂತಾರ' ಎಂದರೇನು?
'ಕಾಂತ' ಎಂದರೆ ಪತಿ ಎಂದೊ, ಪ್ರಿಯಕರ ಎಂದೋ ಅರ್ಥವಿದೆ. ಕರಾವಳಿ ಭಾಗದಲ್ಲಿ 'ಕಂಡಿತಾ' ಎಂಬುದಕ್ಕೆ 'ಕಾಂತಾ' ಎಂದೂ ರೂಢಿಗತವಾಗಿ ಕರೆಯುವುದುಂಟು ಆದರೆ 'ಕಾಂತಾರ'ಕ್ಕೂ ಮೇಲಿನ ಎರಡು ಉದಾಹರಣೆಗೂ ಸಂಬಂಧವಿಲ್ಲ. 'ಕಾಂತಾರ' ಎಂದರೆ ಕಾಡು ಅದೂ ಕೇವಲ ಕಾಡಲ್ಲ ನಿಗೂಢಗಳನ್ನು ಒಳಗಿಟ್ಟುಕೊಂಡಿರುವ ಕಾಡು ಇಂಗ್ಲೀಷ್ನಲ್ಲಿ ಹೇಳುವುದಾದರೆ 'ಮಿಸ್ಟೀರಿಯಸ್ ಫಾರೆಸ್ಟ್'. ಸಿನಿಮಾದ ಕತೆಗೆ ಇದು ಒಪ್ಪಿಗೆ ಆಗುತ್ತದೆ ಎಂದೆನಿಸಿ ರಿಷಬ್ ಶೆಟ್ಟಿ ಈ ಹೆಸರು ಸಿನಿಮಾಕ್ಕೆ ಅಂತಿಮಗೊಳಿಸಿದ್ದಾರೆ. ಅಂದಹಾಗೆ ಈ ಹೆಸರನ್ನು ಇಟ್ಟಿದ್ದು ಅವರಲ್ಲ. ಅವರ ಗೆಳೆಯ.

ಸಿನಿಮಾಕ್ಕೆ ಹೆಸರಿಟ್ಟಿದ್ದು ಯಾರು?
ಸಿನಿಮಾಕ್ಕೆ 'ಕಾಂತಾರ' ಹೆಸರು ಸೂಚಿಸಿದ್ದು ರಿಷಬ್ ಶೆಟ್ಟಿಯ ಗೆಳೆಯ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ. ರಿಷಬ್ ಶೆಟ್ಟಿ, 'ಕಾಂತಾರ' ಸಿನಿಮಾದ ಕತೆಯನ್ನು ರಾಜ್ ಬಿ ಶೆಟ್ಟಿಗೆ ಹೇಳಿದಾಗ ಅವರಿಗೆ 'ಕಾಂತಾರ' ಎಂಬ ಹೆಸರು ಹೊಳೆಯಿತಂತೆ. ಹಾಗಾಗಿ ಅವರು ಈ ಹೆಸರು ಸೂಚಿಸಿದ್ದಾರೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಕೆಲ ದೃಶ್ಯಗಳ ನಿರ್ದೇಶನದಲ್ಲಿಯೂ ರಿಷಬ್ಗೆ ಸಹಾಯ ಮಾಡಿದ್ದಾರೆ. ಅಂದಹಾಗೆ ರಿಷಬ್ ಶೆಟ್ಟಿಯ ಮತ್ತೊಬ್ಬ ಆಪ್ತ ಗೆಳೆಯ, ನಟ ನಿರ್ದೇಶಕ ರಕ್ಷಿತ್ ಶೆಟ್ಟಿಯೂ ಒಂದು ಹೆಸರು ಸೂಚಿಸಿದ್ದಾರೆ.

ರಕ್ಷಿತ್ ಶೆಟ್ಟಿಯೂ ಒಂದು ಹೆಸರು ಸೂಚಿಸಿದ್ದಾರೆ
ರಾಜ್ ಬಿ ಶೆಟ್ಟಿಗೆ ರಿಷಬ್ ಕತೆ ಹೇಳಿದ ರೀತಿಯಲ್ಲಿಯೇ ರಕ್ಷಿತ್ ಶೆಟ್ಟಿಗೂ ಈ ಕತೆಯನ್ನು ರಿಷಬ್ ಶೆಟ್ಟಿ ಹೇಳಿದ್ದಾರೆ. ಕತೆ ಕೇಳಿದ ರಕ್ಷಿತ್ ಶೆಟ್ಟಿಗೆ ಇದು ದಂತಕತೆ ಎನಿಸಿತಂತೆ. ಸಿನಿಮಾದ ಪಾತ್ರ ದಂತಕತೆಯ ಮಾದರಿಯಿದೆ. ಇಡೀಯ ಕತೆಯೇ ಒಂದು ದಂತಕತೆಯ ಮಾದರಿಯಲ್ಲಿದೆ ಎಂದರಂತೆ. ಅವರ ಸಲಹೆಯನ್ನೂ ಸ್ವೀಕರಿಸಿರುವ ರಿಷಬ್ ಶೆಟ್ಟಿ, 'ಕಾಂತಾರ; ಒಂದು ದಂತಕತೆ' ಎಂದು ಹೆಸರು ಅಂತಿಮಗೊಳಿಸಿದ್ದಾರೆ.

ಸಿನಿಮಾದಲ್ಲಿ ಕತೆಯೇ ನಾಯಕ
ಈ ಸಿನಿಮಾಕ್ಕೆ ನಾಯಕನ ಹೆಸರು 'ಶಿವ' ಎಂತಲೋ ಅಥವಾ ಇನ್ಯಾವುದೇ ಮಾಸ್ ಆದ ಹೆಸರು ಇಟ್ಟುಬಿಡಬಹುದಿತ್ತು. ಆದರೆ ಹಾಗೆ ಮಾಡಲು ನಮಗೆ ಇಷ್ಟವಿರಲಿಲ್ಲ. ಏಕೆಂದರೆ ಈ ಸಿನಿಮಾದಲ್ಲಿ ನಾಯಕ-ನಾಯಕಿ, ಮಾಸ್ ಇಮೇಜ್ಗಳು ಮುಖ್ಯವಲ್ಲ, ಸಿನಿಮಾದ ಅಂತರಾತ್ಮ ಮುಖ್ಯ, ಸಿನಿಮಾದ ಕತೆಯೇ ಇಲ್ಲಿ ನಾಯಕ ಹಾಗಾಗಿ ಕತೆಯ ಭಾವವನ್ನು ಹೇಳುವ ಹೆಸರೇ ನಮಗೆ ಬೇಕಿತ್ತು, ಕೊನೆಗೂ ಅಂಥಹಾ ಒಳ್ಳೆಯ ಹೆಸರೇ ನಮಗೆ ದೊರಕಿತು ಎಂದಿದ್ದಾರೆ ರಿಷಬ್ ಶೆಟ್ಟಿ. 'ಕಾಂತಾರ' ಸಿನಿಮಾವು ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ.


Click it and Unblock the Notifications











