ಸಿಎಂ ಟೀಕೆ ಮಾಡೋ ಭರದಲ್ಲಿ ಅಪ್ಪು ಸಾವನ್ನು ಎಳೆ ತಂದ ಚಕ್ರವರ್ತಿ ಸೂಲಿಬೆಲೆ: ಮನೆ ಹುಡುಕಲು ಮುಂದಾದ ಫ್ಯಾನ್ಸ್!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಕನ್ನಡಿಗರಿಂದ ಇನ್ನೂ ದೂರವಾಗಿಲ್ಲ. ಅಪ್ಪು ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಲೇ ಇದೆ. ಈ ಮಧ್ಯೆ ಅವರ ಸಾವನ್ನು ಮುಂದಿಟ್ಟುಕೊಂಡು ಟೀಕೆ ಮಾಡಲು ಹೋಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪೇಚಿಗೆ ಸಿಲುಕಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ತಮ್ಮ ಹೇಳಿಕೆಗಳಿಂದ ಆಗಾಗ ವಿವಾದಕ್ಕೆ ಸಿಲುಕುವುದು ಹೊಸದೇನಲ್ಲ. ಇವರ ಹೇಳಿಕೆಗಳು ಹೆಚ್ಚಾಗಿ ರಾಜಕೀಯ ವಲಯಕ್ಕೆ ಸಂಬಂಧಿಸಿರುತ್ತೆ. ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರ್ಯ ವೈಖರಿಯನ್ನು ಟೀಕೆ ಮಾಡುವ ಜೋಷ್ನಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರನ್ನು ಪರೋಕ್ಷವಾಗಿ ತಂದಿದ್ದು, ಅಭಿಮಾನಿಗಳು ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಚಕ್ರವರ್ತಿ ಸೂಲಿಬೆಲೆ ಮಾಡಿದ ಒಂದೇ ಒಂದು ಟ್ವೀಟ್ ಇಷ್ಟೆಲ್ಲ ಆಕ್ರೋಶಕ್ಕೆ ಕಾರಣವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದ ಟ್ವೀಟ್ನಲ್ಲಿ ಏನಿದೆ? ಅಂತ ತಿಳಿಯಲು ಈ ಟ್ವೀಟ್ ನೋಡಿ.

ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಚಕ್ರವರ್ತಿ ಸೂಲಿಬೆಲೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಿಎಂ ಟೀಕಿಸುವ ಭರಾಟೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವಿಟರ್ ವಿವಾದಕ್ಕೆ ತಿರುಗಿದೆ. " ಸಮಯದ ಅಭಾವದಿಂದ ಸಿಎಂ ಫೈಲ್ಗಳಿಗೆ ಸಹಿ ಮಾಡುತ್ತಿಲ್ಲ ಎಂದು ಎಂಎಲ್ಎಗಳು ದೂರುತ್ತಿದ್ದಾರೆ. ಆದರೆ, ಅವರಿಗೆ ಪ್ರೀಮಿಯರ್ ಶೋ ನೋಡಿ ಕಣ್ಣೀರು ಇಡುವುದಕ್ಕೆ ಸಮಯವಿದೆ. ಸಿನಿಮಾ ನಟನ ಸಾವಿನ ಸಮಯದಲ್ಲಿ ಅವರ ಮೂರು ದಿನವನ್ನು ಮುಡಿಪಾಗಿ ಇಟ್ಟಿದ್ದರು. " ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.

ಅಪ್ಪು ಫ್ಯಾನ್ಸ್ ಆಕ್ರೋಶ
ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡುತ್ತಿದ್ದಂತೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ರೊಚ್ಚಿಗೆದ್ದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪ್ಯಾನ್ಸ್ ಚಕ್ರವರ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಾಂಸ್ಕೃತಿಕ ರಾಯಬಾರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು. "ಸಿಎಂಗೆ ಬೈಯುವ ನೆಪದಲ್ಲಿ ನಮ್ಮ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಸಾವನ್ನು ಹೀಯಾಳಿಸಿದ ಚಕ್ರವರ್ತಿ ಸೂಲಿಬೆಲೆಗೆ ಸಮಸ್ತ ಕನ್ನಡಿಗರ ಪರವಾಗಿ ಧಿಕ್ಕಾರ" ಎಂದು ಆಕ್ರೋಶ ಹೊರ ಹಾಕಿದ್ದರು.

ಚಕ್ರವರ್ತಿ ಸೂಲಿಬೆಲೆಗೆ ಕ್ಷಮೆ ಕೇಳಲು ಆಗ್ರಹ
ಇಷ್ಟೇ ಅಲ್ಲದೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನ ಮಾಡಿದ್ದಕ್ಕೆ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಕೇಳಲೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಇಲ್ಲದೇ ಹೋದಲ್ಲಿ ಅವರ ಮನೆ ಹಾಗೂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಟ್ವಿಟರ್ನಲ್ಲಿ ಅಪ್ಪು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು. ಸೋಶಿಯಲ್ ವಿಡಿಯಾದಲ್ಲಿ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಖಡಕ್ ಆಗಿ ಎದುರೇಟು ನೀಡುತ್ತಿದ್ದಾರೆ. ಅಲ್ಲದೆ ಸಂಜೆ 5 ಗಂಟೆಯೊಳಗೆ ಕ್ಷಮೆ ಕೇಳಬೇಕು ಎಂದು ಗಡುವು ನೀಡಿದ್ದರು.

ಟ್ವಿಟರ್ನಲ್ಲಿ ಚಕ್ರವರ್ತಿ ಕ್ಷಮೆ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದಂತೆ ಚಕ್ರವರ್ತಿ ಸೂಲಿಬೆಲೆ ಎಚ್ಚೆತ್ತುಕೊಂಡಿದ್ದಾರೆ. ತಾವು ಮಾಡಿದ ತಪ್ಪಿನ ಅರಿವಾಗಿದ್ದು, ಅಪ್ಪು ಅಭಿಮಾನಿಗಳಿಗೆ ಟ್ವಿಟರ್ನಲ್ಲಿಯೇ ಕ್ಷಮೆಯಾಚಿಸಿದ್ದಾರೆ. ಇನ್ನು ಸಂಜೆ 5 ಗಂಟೆಗೆ ಕಾರ್ಯಕ್ರಮವೊಂದರಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಬಹಿರಂಗವಾಗಿ ಕ್ಷಮೆ ಕೇಳುವುದಾಗಿ ಚಕ್ರವರ್ತಿ ಸೂಲಿಬೆಲೆಯವರೇ ಹೇಳಿರುವ ಆಡಿಯೋವೊಂದು ಓಡಾಡುತ್ತಿದೆ. ಈ ಮಧ್ಯೆ ಅವರೇ ಟ್ವೀಟ್ ಮಾಡಿ ಕ್ಷಮೆ ಕೂಡ ಕೇಳಿದ್ದಾರೆ.


Click it and Unblock the Notifications











