ಯಾರಿದು ದರ್ಶನ್ ಗೆಳೆಯ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂತಾ?
ದರ್ಶನ್ ಹೆಸರು ಬಳಸಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ಗೊಂದಲದ ಗೂಡಾಗಿ ಪರಿಣಮಿಸಿದೆ. ನಿಜವಾಗಿಯೂ ಇದು ದರ್ಶನ್ ಪ್ರಕರಣ ಅಲ್ಲದಿದ್ದರೂ ಪ್ರಕರಣದ ಸುತ್ತ ಹಲವರ ಹೆಸರುಗಳು ಕೇಳಿ ಬರುತ್ತಿವೆ.
ಎರಡು ದಿನದ ಹಿಂದೆ (ಜುಲೈ 11) ನಟ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ಬಂದಾಗಲೇ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು. ಮೊದಲ ದಿನ ಸುದ್ದಿ ಹೊರಬಿದ್ದ ನಂತರ ಬಹುತೇಕರ ಅನುಮಾನ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೇಲಿತ್ತು.
ಎಡರನೇ ದಿನ (ಜುಲೈ 12) ರಂದು ದರ್ಶನ್, ತಮ್ಮ ಗೆಳೆಯರಾದ ರಾಕೇಶ್ ಪಾಪಣ್ಣ ಮತ್ತು ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದ ಹರ್ಷಾ ಮೆಲಂತಾ ಜೊತೆ ಸೇರಿ ಸುದ್ದಿಗೋಷ್ಠಿ ನಡೆಸಿದಾಗ ಉಮಾಪತಿಯೇ ಆರೋಪಿ ಎಂಬುದು ಹಲವರಿಗೆ ಖಾತ್ರಿಯಾಗಿಬಿಟ್ಟಿತ್ತು. ಸಂಜೆ ವೇಳೆಗೆ ಪ್ರಕರಣದ ಪ್ರಮುಖ ಆರೋಪಿ ಅರುಣಾ ಕುಮಾರಿ ಜೊತೆಗೆ ಉಮಾಪತಿ ಮಾತನಾಡಿರುವ ವಾಟ್ಸ್ಆಪ್ ಸಂದೇಶಗಳು, ಆಡಿಯೋಗಳು ವೈರಲ್ ಆದವು. ನಂತರ ಇಂದು ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ಉಮಾಪತಿ ''ದರ್ಶನ್ ಗೆಳೆಯರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ'' ಎಂದು ರಾಕೇಶ್ ಪಾಪಣ್ಣ ಮತ್ತು ಹರ್ಷಾ ಮೆಲಂತಾ ವಿರುದ್ಧ ನೇರವಾಗಿ ಆರೋಪ ಹೊರಿಸಿದರು. ಹಾಗಿದ್ದರೆ ಯಾರು ಈ ರಾಕೇಶ್ ಪಾಪಣ್ಣ ಮತ್ತು ಹರ್ಷಾ ಮೆಲಂತಾ, ಇವರಿಗೂ ದರ್ಶನ್ಗೂ ಏನು ಸಂಬಂಧ?

ದರ್ಶನ್ ಹಾಲು ವ್ಯಾಪಾರ ಮಾಡುವಾಗಿನಿಂದಲೂ ಗೆಳೆಯರು
ರಾಕೇಶ್ ಪಾಪಣ್ಣ, ದರ್ಶನ್ ಅವರ ಬಹಳ ಹಳೆಯ ಗೆಳೆಯ. ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿ ದರ್ಶನ್ ಅವರ ಹಳೆಯ ಮನೆ ಇದ್ದ ಸಂದರ್ಭದಿಂದಲೂ ರಾಕೇಶ್ ಹಾಗೂ ದರ್ಶನ್ ಆಪ್ತರು. ದರ್ಶನ್ ಹಾಲು ವ್ಯಾಪಾರ ಮಾಡುವಾಗಲೂ ರಾಕೇಶ್ ಜೊತೆಗಿದ್ದರು. ಸಿದ್ಧಾರ್ಥ ನಗರದ ಇಟ್ಟಿಗೆ ಗೂಡ ಇವರ ಕಾಮನ್ ಅಡ್ಡ. ನಾಗು ಸಹ ಇವರಿಬ್ಬರ ಆಪ್ತ ಗೆಳೆಯ.

ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯ ರಾಕೇಶ್ ಪಾಪಣ್ಣ
ರಾಕೇಶ್ ಪಾಪಣ್ಣ ಮೈಸೂರಿನ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರು. ಅವರ ತಂದೆ ಪಾಪಣ್ಣನವರು ಸಹ ಕಾಂಗ್ರೆಸ್ನ ಹಳೆಯ ಧುರಿಣರು. ಸಿದ್ದರಾಮಯ್ಯ ಅವರಿಗೆ ಹಳೆಯ ಗೆಳೆತನ ರಾಕೇಶ್ ಪಾಪಣ್ಣ ಕುಟುಂಬದವರದ್ದು. ರಾಕೇಶ್ ಸಹ ಇಣಕಲ್ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆ ಆಗಿರುವ ಸದಸ್ಯ ಮತ್ತು ಸಕ್ರಿಯ ರಾಜಕಾರಣಿ.

ಹೋಟೆಲ್, ಬಾಡಿಗೆ ಮನೆ, ಅಂಗಡಿಗಳನ್ನು ಹೊಂದಿರುವ ರಾಕೇಶ್
ರಾಕೇಶ್ ಪಾಪಣ್ಣ ಮೈಸೂರಿನಲ್ಲಿ ಕೆಲವು ಹೋಟೆಲ್ಗಳನ್ನು ಹೊಂದಿದ್ದಾರೆ. ಇಣಕಲ್ ಪ್ರದೇಶದಲ್ಲಿ ಸಾಕಷ್ಟು ಅಂಗಡಿಗಳು, ಮನೆಗಳನ್ನು ಬಾಡಿಗೆ ಬಿಟ್ಟಿದ್ದಾರೆ. ಜೊತೆಗೆ ಬಾರ್ ಪರವಾನಗಿಯನ್ನು ಸಹ ಹೊಂದಿದ್ದು ರಾಜಕಾರಣಿಯ ಜೊತೆಗೆ ಉದ್ದಿಮೆದಾರನಾಗಿಯೂ ರಾಕೇಶ್ ಪಾಪಣ್ಣ ಗುರುತಿಸಿಕೊಂಡಿದ್ದಾರೆ.

ಅಪಘಾತವಾದಾಗ ರಾಕೇಶ್ ಮನೆಯಿಂದಲೇ ಹೊರಟಿದ್ದರು ದರ್ಶನ್
ನಟ ದರ್ಶನ್ಗೆ ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಅಪಘಾತವಾದಾಗ ದರ್ಶನ್, ರಾಕೇಶ್ ಪಾಪಣ್ಣ ಮನೆಯಿಂದಲೇ ಬೆಂಗಳೂರಿನತ್ತ ಹೊರಟಿದ್ದರು. ದರ್ಶನ್ ಮೈಸೂರಿಗೆ ಬಂದಾಗೆಲ್ಲ ರಾಕೇಶ್ ಮನೆಗೆ ಭೇಟಿ ನೀಡದೇ ಹೋದದ್ದು ಕಡಿಮೆ. ದರ್ಶನ್ ಮೈಸೂರಿಗೆ ಬಂದರೆ ಊಟ ಬರುವುದು ರಾಕೇಶ್ ಮನೆಯಿಂದಲೇ. ಇದೇ ವಿಷಯವನ್ನು ದರ್ಶನ್ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲೂ ಹೇಳಿದ್ದಾರೆ.

ಮಂಗಳೂರು ಮೂಲಕ ಹರ್ಷಾ ಮೆಲಂತಾ
ಇನ್ನು ಹರ್ಷಾ ಮೆಲಂತಾ ದರ್ಶನ್ಗೆ ಹೊಸ ಪರಿಚಯ ಆದರೆ ರಾಕೇಶ್ ಪಾಪಣ್ಣಗೆ ವ್ಯವಹಾರ ಪಾಲುದಾರ ಮತ್ತು ಗೆಳೆಯ. ಹರ್ಷಾ ಮೂಲತಃ ಮಂಗಳೂರಿನವರು. ಬೆಂಗಳೂರು-ಮೈಸೂರು, ಮಂಗಳೂರು-ಮೈಸೂರು ಹೈವೆಯಲ್ಲಿ ಫಿಶ್ಲ್ಯಾಂಡ್ ಮತ್ತಿತರೆ ಕೆಲವು ಹೋಟೆಲ್ಗಳನ್ನು ಹರ್ಷಾ ಹೊಂದಿದ್ದಾರೆ. ಇವರು ಮಂಗಳೂರಿನ ಖ್ಯಾತ ಉದ್ಯಮಿಯೊಬ್ಬರ ಅಳಿಯ ಸಹ ಹೌದು. ಮೈಸೂರಿನಲ್ಲಿ 'ಮೈಸೂರು ಯೂನಿವರ್ಸಲ್' ಹೆಸರಿನ ರೆಸ್ಟೊರೆಂಟ್ ಹೊಂದಿದ್ದಾರೆ. ಆ ರೆಸ್ಟೊರೆಂಟ್ನಲ್ಲಿನ ಬಾರ್ ಪರವಾನಗಿ ರಾಕೇಶ್ ಹೆಸರಲ್ಲಿದೆ.
Recommended Video

ಯಾರದ್ದು ಸತ್ಯ? ಯಾರದ್ದು ಸುಳ್ಳು?
ಉಮಾಪತಿ ಹೇಳಿರುವಂತೆ ಹರ್ಷಾ ಸಾಲಕ್ಕೆ ಅರ್ಜಿ ಸಲ್ಲಿಸಿ ದರ್ಶನ್ ಹೆಸರನ್ನು ಬಳಸಿಕೊಂಡಿದ್ದಾರೆ. ತಾವು ಆ ವಿಷಯ ದರ್ಶನ್ಗೆ ಹೇಳಿದ ಬಳಿಕ ಹರ್ಷಾ ಹಾಗೂ ರಾಕೇಶ್ ಮಹಿಳೆ ಅರುಣಾಗೆ ಬೆದರಿಕೆ ಹಾಕಿದ್ದಾರೆ. ಆದರೆ ಹರ್ಷಾ ತಾವು ದರ್ಶನ್ ಹೆಸರು ಬಳಸಿಕೊಂಡಿಲ್ಲ ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ. ಹರ್ಷಾ ಅವರ ಹೋಟೆಲ್ಗೆ ಅರುಣಾ ಕುಮಾರಿ ಹೋಗಿರುವ ಸಿಸಿಟಿವಿ ವಿಡಿಯೋಗಳು ಸಹ ಇವೆ. ಈ ಮೂವರಲ್ಲಿ ಯಾರು ಹೇಳುತ್ತಿರುವುದು ನಿಜ, ಯಾರದ್ದು ಸುಳ್ಳು ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕಿರುವ ಸತ್ಯ.


Click it and Unblock the Notifications











