ಕೋವಿಡ್ ಕಾರಣದಿಂದ ಸಿನಿಮಾ ಮಾಫಿಯಾ ಕೊನೆಯಾಗಿದೆ: ಪ್ರಕಾಶ್ ರೈ
ನಟ ಪ್ರಕಾಶ್ ರೈ ತಮ್ಮ ಅದ್ಭುತ ನಟನೆಯ ಜೊತೆಗೆ ತಮ್ಮ ಹೇಳಿಕೆಗಳಿಂದಲೂ ಪ್ರಸಿದ್ಧರು. ಸಕ್ರಿಯ ರಾಜಕಾರಣದೊಂದಿಗೆ ಸಂಬಂಧ ಹೊಂದಿ, ಆ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವ ಕೆಲವೇ ನಟರಲ್ಲಿ ಪ್ರಕಾಶ್ ರೈ ಸಹ ಒಬ್ಬರು.
ಪ್ರಕಾಶ್ ರೈ ಇದೀಗ 'ಮುಖ್ಬಿರ್' ಹೆಸರಿನ ವೆಬ್ ಸರಣಿಯಲ್ಲಿ ಪ್ರಮುಖ ಭದ್ರತಾ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪಾಕಿಸ್ತಾನದಲ್ಲಿ ಕೆಲಸ ಮಾಡುವ ಗೂಢಾಚಾರಿಯ ಕುರಿತಾದ ಕತೆ ಇದಾಗಿದ್ದು, ನವೆಂಬರ್ 11 ರಿಂದ ಜೀ 5 ನಲ್ಲಿ ಪ್ರಸಾರವಾಗಲಿದೆ.
ಈ ವೆಬ್ ಸರಣಿಯ ಪ್ರಚಾರಾರ್ಥ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟ ಪ್ರಕಾಶ್ ರೈ, ಭಾರತ ಪಾಕಿಸ್ತಾನ, ಭಾರತದ ರಾಜಕೀಯ, ಪ್ರಜಾಪ್ರಭುತ್ವ, ಸಿನಿಮಾ, ಸಿನಿಮಾದಲ್ಲಿ ಮಾಫಿಯಾ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಮೇಲೆ ಹೇರಲಾಗಿದ್ದ ನಿಯಮಗಳು ಮುರಿಯಲ್ಪಟ್ಟವು: ರೈ
''ಸಿನಿಮಾ ಒಂದು ಭಾಷೆ. ಭಾವನೆಗಳನ್ನು ಅಭಿವ್ಯಕ್ತಿಸುವ ಮಾಧ್ಯಮ. ಸಿನಿಮಾ ನದಿಯಂತೆ ಹರಿಯಬೇಕಿತ್ತು ಆದರೆ ಕೆಲವು ಜನರು ಅದನ್ನು ತಡೆದು ನಿಲ್ಲಿಸಿದರು. ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಮಾತ್ರ ತೋರಿಸಬೇಕು ಎಂದು ಷರತ್ತುಗಳನ್ನು. ಸಿನಿಮಾವನ್ನು ಎರಡೂವರೆ ಗಂಟೆಗಳ ಕಥೆ ಎಂದು ನಿಗದಿಪಡಿಸಿದರು. ಸಿನಿಮಾವನ್ನು ಚಿತ್ರಮಂದಿರದಲ್ಲೇ ತೋರಿಸಬೇಕು ಮೊದಲು ಟಿವಿಯಲ್ಲಿ ಬಿಡುಗಡೆ ಮಾಡಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದರು. ಆದರೆ ಕೋವಿಡ್ ಮಹಾಮಾರಿಯು ಈ ಮಾಫಿಯಾವನ್ನು ಇಲ್ಲವಾಗಿಸಿತು. ಹಲವು ನಿಯಮಗಳು ಮುರಿಯಲ್ಪಟ್ಟವು'' ಎಂದಿದ್ದಾರೆ ಪ್ರಕಾಶ್ ರೈ.

ಮಾಸ್, ಹೀರೋಯಿಸಂ ಕತೆಗಳಿಂದ ಜನ ಬೇಸತ್ತಿದ್ದಾರೆ: ರೈ
ಇತ್ತೀಚಿನ ದಿನಗಳಲ್ಲಿ, ನಾವು ನಿಜ ಜೀವನಕ್ಕೆ ಹತ್ತಿರುವಾಗಿರುವ ವೆಬ್ ಸರಣಿ ಹಾಗೂ ಸಿನಿಮಾಗಳನ್ನು ನೋಡುತ್ತಿದ್ದೇವೆ. ಮಾಸ್, ಹೀರೋಯಿಸಂ ಕತೆಗಳಿಂದ ಜನ ಬೇಸತ್ತಿದ್ದಾರೆ. ಕೋವಿಡ್ ಬಳಿಕ ಜನರು ಹೆಚ್ಚಿನಪಾಲು ನಿಜ ಜೀವನಕ್ಕೆ ಹತ್ತಿರವಾದ ಕತೆಗಳನ್ನು ನೋಡಲು ಇಷ್ಟಪಡುತ್ತಿದ್ದಾರೆ ಮತ್ತು ನಕಲಿತನ, ಮಾಸ್, ಹೀರೋಯಿಸಂ ಕತೆಗಳು ಸಾಯುತ್ತಿವೆ. ಸಿನಿಮಾ ಮಾಫಿಯಾದ ಜನಕ್ಕೆ ಇದನ್ನು ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಬಳಿಕ ನಿಜವಾದ ಪ್ರತಿಭೆ ಮತ್ತು ವಿಷಯ ವಸ್ತುವನ್ನು ಹೊಂದಿದ ಕತೆಗಳಿಗೆ ನ್ಯಾಯ ದೊರಕುತ್ತಿದೆ, ಅದು ಒಳ್ಳೆಯ ವಿಷಯ'' ಎಂದಿದ್ದಾರೆ ಪ್ರಕಾಶ್ ರೈ.

ಒಬ್ಬ ನಾಯಕನಿಂದ ದೇಶ ಅಲ್ಲ: ಪ್ರಕಾಶ್ ರೈ
1960 ರ ದಶಕದ ಕತೆಯನ್ನು 'ಮುಕ್ಬೀರ್' ವೆಬ್ ಸರಣಿ ಹೊಂದಿದೆ. ಇಂದು, 2022 ರಲ್ಲಿ, ನಾನು ಈ ದೇಶದಲ್ಲಿ ಸುರಕ್ಷಿತವಾಗಿದ್ದೇನೆಂದರೆ, ಎಲ್ಲೂ ಕಾಣಿಸಿಕೊಳ್ಳದ, ಪ್ರಚಾರ ದೊರಕದ ಕೆಲವಾರು ನಾಯಕರು ಕಾರಣವಾಗಿರಲೇಬೇಕು. ಆ ಬಗ್ಗೆ ನಮಗೆ ಅರಿವಿದೆಯೇ? ರಾಷ್ಟ್ರ ತಾನಿದ್ದಂತೆ ನಡೆದುಕೊಂಡು ಹೋಗಲು ಕಾರಣಾಗುವ ಹಲವು ವಿಷಯಗಳಿವೆ. ದೇಶ ಎಂದಿಗೂ ಒಬ್ಬ ವ್ಯಕ್ತಿ ಅಥವಾ ಒಂದು ಸಿದ್ಧಾಂತ, ಅಥವಾ ಒಂದು ಪಕ್ಷ ಅಥವಾ ಒಬ್ಬ ನಾಯಕನಿಂದ ನಡೆಯುವುದಕ್ಕ. ಪ್ರತಿಯೊಬ್ಬ ವ್ಯಕ್ತಿಯು ದೇಶಪ್ರೇಮಿಯೇ ಆಗಿರುತ್ತಾನೆ ಹಾಗೂ ದೇಶದ ಪ್ರತಿಯೊಬ್ಬ ವ್ಯಕ್ತಿಯು ಪ್ರಸ್ತುತವಾಗಿರುತ್ತಾನೆ ಮತ್ತು ಅವರ ಕೊಡುಗೆಗಳು ವೈವಿಧ್ಯಮಯವಾಗಿರುತ್ತವೆ'' ಎಂದಿದ್ದಾರೆ ಪ್ರಕಾಶ್ ರೈ.

'ಭಾರತ-ಪಾಕಿಸ್ತಾನದ ಸಂಬಂಧವನ್ನು ಭಿನ್ನವಾಗಿ ನೋಡಲಾಗಿದೆ'
'ಮುಕ್ಬೀರ್' ವೆಬ್ ಸರಣಿ ಭಾರತ-ಪಾಕಿಸ್ತಾನದ ಬಗ್ಗೆ ಇದೆಯಲ್ಲ, ಟ್ರೈಲರ್ 'ರಾಜಿ' ಸಿನಿಮಾವನ್ನು ನೆನಪಿಸುತ್ತಿದೆ ಎಂಬ ಪ್ರಶ್ನೆಗೆ, ''ನಾನು ಹಾಗೆ ಯೋಚಿಸುವುದಿಲ್ಲ. ಮುಕ್ಬೀರ್ ವೆಬ್ ಸರಣಿ ಎರಡು ದೇಶಗಳ ಬಗ್ಗೆ ಇರುವುದಲ್ಲ. ಇದರ ಮೇಲ್ನೋಟ ಎರಡು ದೇಶಗಳ ನಡುವಿನ ಸೈನ್ಯ-ರಾಜಕೀಯ ಯುದ್ಧ, ಅಂತರ್ಯುದ್ಧ ಎನಿಸುತ್ತದೆ ಆದರೆ ಇದರ ಆತ್ಮವೇ ಬೇರೆಯ ರೀತಿಯದ್ದು. ಇದು 'ರಾಜಿ' ಜೊತೆ ಹೋಲುತ್ತದೆ ಎಂದು ನಾನು ಭಾವಿಸುವುದಿಲ್ಲ. ಸಂವೇದನಾಶೀಲ ಚಿತ್ರಕತೆಯ ಮೂಲಕ ಭಾರತ-ಪಾಕಿಸ್ತಾನದ ಸಂಬಂಧವನ್ನು ನೋಡುವ ವಿಧಾನ ಇದರಲ್ಲಿ ಬದಲಾಗಿದೆ ಎಂದಿದ್ದಾರೆ ಪ್ರಕಾಶ್ ರೈ.


Click it and Unblock the Notifications











