ಯುವಕರ ಮನಸ್ಸು ಮಲಿನ ಮಾಡುತ್ತಿದ್ದೀರಿ: ನಿರ್ಮಾಪಕಿ ಏಕ್ತಾಗೆ ಸುಪ್ರೀಂ ಛೀಮಾರಿ
ಟಿವಿ ಜಗತ್ತಿನ ರಾಣಿ ಎಂದೇ ಕರೆಸಿಕೊಳ್ಳುವ ನಿರ್ಮಾಪಕಿ ಏಕ್ತಾ ಕಪೂರ್ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು, 'ಯುವಕರ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ' ಎಂದಿದೆ.
ಹಲವು ಹಿಂದಿ ಟಿವಿ ಧಾರಾವಾಹಿಗಳ ನಿರ್ಮಾಪಕಿ ಆಗಿರುವ ಏಕ್ತಾ ಕಪೂರ್, ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಹೊಂದಿದ್ದು, ಒಟಿಟಿಯಲ್ಲಿ ಪ್ರಸಾರವಾದ 'XXX' ಹೆಸರಿನ ವೆಬ್ ಸರಣಿಯ ಎರಡನೇ ಸೀಸನ್ ವಿರುದ್ಧ ಬಿಹಾರದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅದರ ಸಂಬಂಧ ಏಕ್ತಾ ವಿರುದ್ಧ ಬಂಧನದ ವಾರೆಂಟ್ ಸಹ ಹೊರಡಿಸಲಾಗಿತ್ತು.
ತಮ್ಮ ವಿರುದ್ಧ ಹೊರಡಿಸಲಾಗಿದ್ದ ಬಂಧನದ ವಾರೆಂಟ್ ಅನ್ನು ರದ್ದು ಮಾಡಬೇಕೆಂದು ಸುಪ್ರೀಂಕೋರ್ಟ್ಗೆ ಪಿಟಿಶನ್ ದಾಖಲಿಸಿದ್ದರು ಏಕ್ತಾ ಕಪೂರ್. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಸಿಟಿ ರವಿಕುಮಾರ್, 'XXX' ವೆಬ್ ಸರಣಿಯಲ್ಲಿನ ಕಂಟೆಂಟ್ ಅನ್ನು ಅಶ್ಲೀಲ, ಅನೈತಿಕ ಎಂದಿದ್ದು, 'ನೀವು ದೇಶದ ಯುವಕರ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ' ಎಂದಿದ್ದಾರೆ.
''ಈ ಬಗ್ಗೆ ಏನಾದರೂ ಮಾಡಬೇಕಿದೆ. ಈ ದೇಶದ ಈಗಿನ ತಲೆಮಾರಿನ ಯುವಕರ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ. ಒಟಿಟಿಯಲ್ಲಿನ ಕಂಟೆಂಟ್ ಎಲ್ಲರಿಗೂ ಲಭ್ಯವಿದೆ. ಜನರಿಗೆ ಯಾವ ರೀತಿಯ ಆಯ್ಕೆಯನ್ನು ನೀವು ನೀಡುತ್ತಿದ್ದೀರಿ'' ಎಂದು ಪ್ರಶ್ನಿಸಿದೆ ಸುಪ್ರೀಂ ಕೋರ್ಟ್.

ಏಕ್ತಾ ವಿರುದ್ಧ ಬಿಹಾರದಲ್ಲಿ ದೂರು
'ಎಕ್ಸ್ಎಕ್ಸ್ಎಕ್ಸ್' ವೆಬ್ ಸರಣಿಯಲ್ಲಿ ಸೈನಿಕ ಹಾಗೂ ಸೈನಿಕನ ಪತ್ನಿಯ ಬಗ್ಗೆ ಅವಹೇಳನಕಾರಿ ದೃಶ್ಯಗಳಿವೆ. ಆ ದೃಶ್ಯಗಳು ಸಾಮಾನ್ಯ ನಾಗರೀಕರಿಗೆ ಹಾಗೂ ಸೈನಿಕರಿಗೆ ಅಪಮಾನ ಉಂಟು ಮಾಡುತ್ತಿವೆ ಎಂದು ಆರೋಪಿಸಿ ಬಿಹಾರದ ಬಿಗುಸರಾಯ್ನಲ್ಲಿ ಶಂಭು ಕುಮಾರ್ ಎಂಬುವರು ಬಹಳ ಹಿಂದೆಯೇ ದೂರು ದಾಖಲಿಸಿದ್ದರು. ದೂರಿನ ವಿರುದ್ಧ ಪಾಟ್ನಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಲ್ಲಿ ವಿಚಾರಣೆ ತಡವಾದ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ಏಕ್ತಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾದ ಕಾರಣ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಪಾಟ್ನಾ ಹೈಕೋರ್ಟ್ನಲ್ಲಿ ಪ್ರಕರಣ ಕೈಗೆತ್ತಿಕೊಳ್ಳುತ್ತಿಲ್ಲ
ಏಕ್ತಾ ಕಪೂರ್ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ಖ್ಯಾತ ವಕೀಲ ಮುಕುಲ್ ರೊಹ್ಟಗಿ ವಾದಿಸಿದ್ದು, ''ಪಾಟ್ನಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ ಆದರೆ ಈ ಪ್ರಕರಣವನ್ನು ಶೀಘ್ರದಲ್ಲೇ ವಿಚಾರಣೆಗೆ ಪರಿಗಣಿಸುವ ಭರವಸೆ ಇಲ್ಲ'' ಎಂದಿದ್ದಾರೆ. ಮುಂದುವರೆದು, ಇದೇ ಮಾದರಿಯ ಪ್ರಕರಣದಲ್ಲಿ ಏಕ್ತಾ ಕಪೂರ್ಗೆ ಈ ಹಿಂದೆಯೂ ಜಾಮೀನು ಹಾಗೂ ರಕ್ಷಣೆ ನೀಡಲಾಗಿದೆ ಎಂದು ಸಹ ಹೇಳಿದ್ದಾರೆ. ''ಈ ವೆಬ್ ಸರಣಿಯು ಸಬ್ಸ್ಕ್ರಿಪ್ಷನ್ ಮಾಡೆಲ್ನ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಜನರ ಆಯ್ಕೆಯ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ ಇದಾಗಿದೆ'' ಎಂದು ಸಹ ಮುಕುಲ್ ರೊಹ್ಟಗಿ ವಾದಿಸಿದ್ದಾರೆ.

ಏಕ್ತಾ ಕಪೂರ್ ವಿರುದ್ಧ ಸುಪ್ರೀಂ ಅಸಮಾಧಾನ
ಆದರೆ ಮುಕುಲ್ರ ವಾದವನ್ನು ಒಪ್ಪದ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ, ''ಪ್ರತಿ ಬಾರಿಯೂ ನಿಮ್ಮ ಕಕ್ಷೀದಾರರು ಇದೇ ಮಾದರಿಯ ಪ್ರಕರಣ ಹೊತ್ತುಕೊಂಡು ನ್ಯಾಯಾಲಯಕ್ಕೆ ಬರುತ್ತಾರೆ. ಇದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ವಕೀಲ ರೊಹ್ಟಗಿಯವರೇ, ನಿಮ್ಮ ಕಕ್ಷಿದಾರರಿಗೆ ಹೇಳಿಬಿಡಿ, ದುಬಾರಿ ಹಾಗೂ ಒಳ್ಳೆಯ ವಕೀಲರನ್ನು ಬಳಸಿಕೊಂಡ ಮಾತ್ರಕ್ಕೆ ಎಲ್ಲದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನ್ಯಾಯಾಲಯ ಇರುವುದು ಉಳ್ಳವರಿಗಾಗಿ ಅಲ್ಲ'' ಎಂದು ಕಠುವಾಗಿಯೇ ಹೇಳಿದೆ.

ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಸಬ್ಸ್ಕ್ರೈಬ್ ಆಗಿ ಕಂಟೆಂಟ್ ನೋಡಲು ಇಚ್ಛಿಸುವ ಗ್ರಾಹಕರಿಗೆ ಯಾವ ರೀತಿಯ ಕಂಟೆಂಟ್ ಅನ್ನು ಆಫರ್ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಟೀಕೆ ವ್ಯಕ್ತಪಡಿಸಿರುವ ದ್ವಿಸದಸ್ಯ ಪೀಠ, ''ಈ ನ್ಯಾಯಾಲಯ ಇರುವುದು ಧ್ವನಿ ಇರುವವರಿಗಾಗಿ ಅಲ್ಲ ಧ್ವನಿ ಇಲ್ಲದಿರುವವರಿಗಾಗಿ. ಧ್ವನಿ ಇರುವವರೇ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲವಾದರೆ, ಧ್ವನಿ ಇಲ್ಲದವರ ಪರಿಸ್ಥಿತಿ ಏನು?'' ಎಂದು ಆತಂಕ ವ್ಯಕ್ತಪಡಸಿದೆ. ಏಕ್ತಾ ಕಪೂರ್ ಸಲ್ಲಿಸಿರುವ ಪಿಟಿಶನ್ನ ಮೇಲಿನ ಆದೇಶವನ್ನುನ ಮುಂದಿನ ದಿನಾಂಕದ ವರೆಗೆ ಕಾಯ್ದಿರಿಸಲಾಗಿದೆ.


Click it and Unblock the Notifications











