ಚಿತ್ರ ವಿಮರ್ಶೆ: ಅಮರ ಮಧುರ ಪ್ರೇಮ ಸಂಜು ವೆಡ್ಸ್ ಗೀತಾ
ಎಂಬತ್ತರ ದಶಕದಲ್ಲಿ ಯುವ ಹೃದಯಗಳನ್ನು ಮಿಡಿಸಿದ ಚಿತ್ರ 'ಗೀತಾ'. ದಿವಂಗತ ಶಂಕರನಾಗ್ ಹಾಗೂ ಅಕ್ಷತಾ ರಾವ್ ಅವರ ಅಭಿನಯ ಇಂದಿಗೂ ಜೊತೆಯಲಿ ಜೊತೆಜೊತೆಯಲಿ ಇರುವೆನು ಎಂದು ಹೀಗೆ...ಎಂಬಂತೆ ಅಜರಾಮರ. ತೊಂಬತ್ತರ ದಶಕಕ್ಕೆ ಹೊರಳುವ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಜಾಣ್ಮೆಯಿಂದ ಅಮರ ಶಿಲ್ಪಿ ಜಕ್ಕಣಾಚಾರಿಯಂತೆ ಕೆತ್ತಿದ್ದಾರೆ ನಾಗಶೇಖರ್. ಬಹುಶಃ ಅದಕ್ಕೇ ಏನೋ ಚಿತ್ರವನ್ನು ಶಂಕರನಾಗ್ ಅವರಿಗೆ ಅರ್ಪಿಸಿದ್ದಾರೆ.
ಪ್ರೌಢ ಕತೆಯೊಂದನ್ನು ಚಿತ್ರಕ್ಕೆ ಅಳವಡಿಸುವಲ್ಲಿ ನಾಗಶೇಖರ್ ಅವರ ಜಾಣ್ಮೆ ಎದ್ದು ಕಾಣುತ್ತದೆ.ಕತೆಯಲ್ಲಿನ ಬಿಗಿ ನಿರೂಪಣೆಯನ್ನು ನಿರ್ದೇಶಕರು ಎಲ್ಲೂ ಬಿಟ್ಟುಕೊಟ್ಟಿಲ್ಲ.ಕೊಡಗಿನ ವಿರಾಜಪೇಟೆಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ತನಕ ಸಾಗುವ ಕತೆ ದುರಂತದಲ್ಲಿ ಅಂತ್ಯವಾಗುತ್ತದೆ. ಪ್ರೇಮಿಗಳ ದುರಂತ ಅಂತ್ಯವನ್ನು ಪ್ರೇಕ್ಷಕ ಪ್ರಭುಗಳು ಒಪ್ಪುವುದು ಕೊಂಚ ಕಷ್ಟವಾಗಬಹುದು.
ಎರಡು ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಂಡು ಲೇಟಾಗಿ ಬಂದರೂ ಚಿತ್ರ ಲೇಟೆಸ್ಟಾಗಿದೆ. ರಮ್ಯಾ(ಗೀತಾ) ಮತ್ತು ಶ್ರೀನಗರ ಕಿಟ್ಟಿ(ಸಂಜು) ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆ ಒತ್ತುವಂತೆ ನಿರ್ದೇಶಕರು ಕೆಲಸ ತೆಗೆಸಿದ್ದಾರೆ. ಕತೆಗೆ ಪೂರವಾಗಿ ಭಾವನಾತ್ಮಕ ಜೀವಿಯಾಗಿ ಕಿಟ್ಟಿ ಹಾಗೂ ಕೊಡಗಿನ ಬೆಡಗಿಯಾಗಿ ರಮ್ಯಾ ಅಭಿನಯ ಚಿತ್ರದ ಜೀವಾಳ.
ಚಿತ್ರದಲ್ಲಿ ಮಳೆ ಅಗತ್ಯಕ್ಕಿಂತಲೂ ಹೆಚ್ಚಿಗೆ ಸುರಿದಿದೆಯಾದರೂ ಅತಿವೃಷ್ಠಿಯಾಗಿಲ್ಲ. ಕೊಡಗಿನ ಹವಾಗುಣವನ್ನು ಸೆರೆಹಿಡಿಯುವಲ್ಲಿ ಸತ್ಯ ಹೆಗಡೆ ಕೈಚಳಕ ಎದ್ದು ನಿಲ್ಲುತ್ತದೆ. ಚಿತ್ರದ ಪ್ರಮುಖ ಹೈಲೈಟ್ಗಳಲ್ಲಿ ಛಾಯಾಗ್ರಹಣಕ್ಕೆ ಶೇ.60 ಅಂಕಗಳನ್ನು ನೀಡಬಹುದು. ಕವಿರಾಜ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಹಾಡುಗಳು ಸಂದರ್ಭೋಚಿತವಾಗಿ ಮೂಡಿಬಂದಿವೆ.ಕತೆಗೆ ಪೂರಕವಾಗಿ ಮೂಡಿಬಂದಿರುವ ಎರಡು ಹಾಡುಗಳ ಚಿತ್ರೀಕರಣ, ಸನ್ನಿವೇಶಗಳು ಮರೆಯಲಾಗದ ಅನುಭವ ನೀಡುತ್ತವೆ.
ಚಿತ್ರದಲ್ಲಿ ಶರಣ್, ಬುಲೆಟ್ ಪ್ರಕಾಶ್, ಸಾಧುಕೋಕಿಲ ಅವರ ಹಾಸ್ಯ ಸನ್ನಿವೇಶಗಳು ಚೇತೋಹಾರಿಯಾಗಿವೆ. ಸುಹಾಸಿನಿ, ಶರತ್ ಲೋಹಿತಾಶ್ವ, ಉಮಾಶ್ರೀ, ಜೈಜಗದೀಶ್ 'ಪೋಷಕ' ಪಾತ್ರಗಳ ಪೋಷಣೆ ಗಮನಾರ್ಹ. ಜೆಸ್ಸಿ ಗಿಫ್ಟ್ ಅವರ ರಾಗ ಸಂಯೋಜನೆಯಲ್ಲಿ ಹೊಸತನವಿದೆ. ಜೋನಿ ಹರ್ಷ ಅವರ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳು ಚಿತ್ರದ ಅಂದವನ್ನು ಹೆಚ್ಚಿಸಿವೆ.
"ಪ್ರೇಮಿಗಳಿಗೆ ಸಾವಿಲ್ಲ. ಪ್ರೇಮಕ್ಕೆ ಅಳಿವಿಲ್ಲ" ಎಂಬ ಅಮರ ಸಂದೇಶ ಸಾರುವಲ್ಲಿ ಚಿತ್ರಯಶಸ್ವಿಯಾಗಿದೆ. ಪಾತ್ರಗಳಲ್ಲಿನ ಲವಲವಿಕೆ, ಯುವ ಪ್ರೇಮಿಗಳಾಗಿ ರಮ್ಯಾ, ಕಿಟ್ಟಿ ಪ್ರೌಢ ಅಭಿನಯ, ಗ್ರಾಫಿಕ್ಸ್ಗೆ ಹೆಚ್ಚಾಗಿ ಅಂಟಿಕೊಳ್ಳದ ನಿರ್ದೇಶಕರು ಸಹಜತೆಗೆ ಒತ್ತು ನೀಡಿರುವುದು, ಕತೆಯಲ್ಲಿನ ಗಟ್ಟಿತನ ಚಿತ್ರಕ್ಕೆ ಹೊಸ ಆಯಾಮವನ್ನು ನೀಡಿವೆ. ಯುಗಾದಿಯ ಬೇವು ಬೆಲ್ಲದ ಜೊತೆಗೆ ಸಂಜು ವೆಡ್ಸ್ ಗೀತಾರ ಅಮರ ಮಧುರ ಪ್ರೇಮವೂ ಇರಲಿ!


Click it and Unblock the Notifications











