ವಿಮರ್ಶೆ: ಶ್ರೀಹರಿಕಥೆ..ಮಾಡರ್ನ್ 'ಹಕ್ಕಿ'ಕತೆ
ಮಾಡರ್ನ್ ಹಕ್ಕಿ'ಕತೆ. ಮನು ಕುಲದ ವ್ಯಾಕುಲತೆ, ಮನಸ್ಸಾಕ್ಷಿಯ ದಂತಕತೆ! ಇಲ್ಲಿ ದಯಾಳು ಎಂಬ ಮುಂದಾಳು ಚಿತ್ರದ ಸೂತ್ರಧಾರ. ಒಂದು ಪಕ್ಕಾ ಫ್ಯಾಮಿಲಿ ಫಾರ್ಮುಲಾಗೆ ಸುಣ್ಣ ಬಣ್ಣ ಬಳಿದು, 'ಹದಮಾಡಿದ' ಹರಿಕತೆ ಮಾಡಿದ್ದಾರೆ ದಯಾಳ್!
ಕತೆ ಒಂದೇ ವೇಗದಲ್ಲಿ ಸಾಗುತ್ತದೆ. ಮೊದಲಾರ್ಧ ಮಂಜು ಕರಗಿದಂತೆ. ಮನವೆಂಬ ಮರ್ಕಟವನ್ನು ಎರಡು ತಾಸು ಕಟ್ಟಿ ಹಾಕುವಂತಹ ಮಾತಿನ ದಾರ ಪೋಣಿಸಿದ್ದಾರೆ ಪತ್ರಕರ್ತ /ಸಂಭಾಷಣೆಕಾರ ಎ.ಎಮ್.ಪ್ರಸನ್ನ. ನವೀನ್ಕೃಷ್ಣರ ಹಾಸ್ಯದ ಹೊದಿಕೆಯ ಮಾತಿನಲ್ಲಿ ಪಂಚ್ ಹಾಗೂ ಪಂಚಾಮೃತವಿದೆ. ಬಳಸಿರುವ ಟೈಮಿಂಗ್ ಇಷ್ಟವಾಗುತ್ತದೆ. ಒಂದು ಆಂಗಲ್ನಲ್ಲಿ ನವೀನ್ಗೆ ಹೋಲಿಸಿದರೆ ಮುರುಳಿ ನಟನೆಯೇ ಸಪ್ಪೆ ಸಪ್ಪೆ. ಹೀಗಿದ್ದೂ ಮುರುಳಿ ಕಷ್ಟಪಟ್ಟಿದ್ದಾರೆ. ಗೆಲ್ಲಲೇಬೇಕು ಎಂಬ ಹಂಬಲದಲ್ಲಿ ಉರುಳಿ, ಹೊರಳಾಡಿ, ಬೆವರಿಳಿಸಿದ್ದಾರೆ.
ಅವರ ನಟನೆ ನೋಡಿ ಸ್ವತಃ ಅವರೇ ದಿಗ್ಭ್ರಮೆಗೊಂಡರೆ ಆಶ್ಚರ್ಯವಿಲ್ಲ!'ಮೈ'ನಾವತಿ ಪೂಜಾಗಾಂಧಿ ಬಿಂಕದ ಸಿಂಗಾರಿ, ದೊಂಕಿನ ಮಯೂರಿ..ಉರುಳಾಡುವ ವೈಯಾರಿ..ಅಕಟಕಟಾ..ತುಂಡು ಬಟ್ಟೆ ಸಾಕು ಪೂಜಾ ಮೈನಾ ಮುಚ್ಚೋಕೆ.. ಹುಚ್ಚಿ, ನಿನಗಾಗಿ ಕಾದಿರುವೆ..ಚಿತ್ರಗಳಿಗೆ ಹೋಲಿಸಿದರೆ ನಟನೆಯಲ್ಲಿ 10 ಪಟ್ಟು ತಿದ್ದುಪಡಿಯಾಗಿದೆ. ತಂಗಿ ರಾಧಿಕಾ ಮುದ್ದಾಗಿ ಕಾಣುತ್ತಾರೆ. ಬೆಣ್ಣೆ ಮುದ್ದೆಗೆ ಬಣ್ಣ ಬಳಿದರೆ ಹೇಗಿರುತ್ತೆ ಹೇಳಿ?!
ಕತೆ ಮಾಮೂಲು. ಮುಗ್ಧ ಹಾಗೂ ಜಾಣ ಹುಡುಗನೊಬ್ಬನ ಪರ್ಸನಲ್ ಬದುಕನ್ನು ಕ್ಯಾಮೆರಾ ಕಣ್ಣಲ್ಲಿ ತೋರಿಸಲಾಗಿದೆ. ಆತ ದಾಂಪತ್ಯದ ದಾರಿ ತುಳಿದಾಗ ಎದುರಿಸುವ ಸುಪ್ತ/ಗುಪ್ತ/ ಆಪ್ತ ಸಮಸ್ಯೆಗಳೇನು? ಹೆಂಡತಿಯೊಬ್ಬಳು ಮನೆಯೊಳಗಿದ್ದಾಗ/ ಇಲ್ಲದಿದ್ದಾಗ / ಇಲ್ಲಸಲ್ಲದ ಕನಸು ಕಂಡಾಗ ಹೇಗಿರುತ್ತದೆ ಎನ್ನುವುದು ಹರಕಥಾ ಹಂದರ.ಹಾಡುಗಳಲ್ಲಿ ಎರಡು ಓಕೆ ಸಾರ್ ಓಕೆ. ನವೀನ್ ಹಾಡಿರುವ ಹರಿಕತೆಯ ಹೊಸ ವರ್ಷನ್ ಮಜವಾಗಿದೆ.
ಛಾಯಾಗ್ರಹಣವನ್ನು ಎಂದೂ ಮರೆಯುವಂತಿಲ್ಲ. ಸಂಕಲನದಲ್ಲಿ ಕೊಂಚ ಹುರುಪು ಬೇಕಿತ್ತು. ನಿರೂಪಣೆ = ಈ ಸಮಯ... ನೀ-ರಸಮಯ... ಒಟ್ಟಾರೆ ಮನೆಮಂದಿಯೆಲ್ಲ ಕುಳಿತು ನೋಡು ಚಿತ್ರ ಹರಿಕತೆ, ನಿಜ. ಆದರೆ, ಕೆಲ ದೃಶ್ಯ, ಸನ್ನಿವೇಶ ಬಂದಾಗ ಹೆಣ್ಣುಮಕ್ಕಳು ಕಣ್ಣು, ಕಿವಿ, ಮೂಗು, ಬಾಯಿ...ಮುಚ್ಚಿಕೊಳ್ಳುವ ಅನಿವಾರ್ಯ ಹಾಗೂ ಅಗತ್ಯವಿದೆ!


Click it and Unblock the Notifications











