7ನೇ ಅರಿವು ವಿಮರ್ಶೆ : ಬಿಗ್, ಬೋಲ್ಡ್, ಬ್ಯೂಟಿಫುಲ್
ಚಿತ್ರ ನೋಡಿ ಬಂದ ಮೇಲೆ ಚಿತ್ರದ ಗುಂಗಿನಲ್ಲೇ ಒಂದೆರಡು ಕ್ಷಣ ಇದ್ದರೆ ಅಲ್ಲಿಗೆ ಚಿತ್ರತಂಡದ ಶ್ರಮ ಸಾರ್ಥಕ., ಬಿಗ್ ಬಜೆಟ್ ಚಿತ್ರ, ಬಾಕ್ಸಾಫೀಸ್ ಗಳಿಕೆ, ಅಬ್ಬರದ ಪ್ರಚಾರವನ್ನು ಪಕ್ಕಟ್ಟರೆ 'ಗಜನಿ' ತಂಡದಿಂದ ಮತ್ತೆ ಹೊರ ಬಂದಿರುವ 7ಅಮ್ ಅರಿವು ಚಿತ್ರ ಚಿಂತೆಯಿಲ್ಲದೆ ನೋಡಲಡ್ಡಿಯಿಲ್ಲ.
ಉದಯನಿಧಿ ಸ್ಟಾಲಿನ್ ರ ರೆಡ್ ಜೈಂಟ್ ಮೂವೀಸ್ ಬ್ಯಾನರ್ ನಲ್ಲಿ ಹೊರಬಂದಿರುವ ಈ ಚಿತ್ರವನ್ನು ನಿರ್ದೇಶಕ ಎಆರ್ ಮುರಗದಾಸ್ ಹಾಗೂ ಪ್ರತಿಭಾವಂತ ನಟ ಸೂರ್ಯ ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದಾರೆ.
ಇಂದಿನ ಪೀಳಿಗೆಗೆ ಹಿಂದಿನ ಪೀಳಿಗೆಯ ಅರಿವು, ಮಹತ್ವದ ಬಗ್ಗೆ ಹೆಚ್ಚಿಗೆ ಲೆಕ್ಚರ್ ಕೊಡದೆ ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದಾರೆ. ಸೂರ್ಯ ಈ ರೀತಿ ಪ್ರಾಯೋಗಿಕ ಚಿತ್ರಕ್ಕೆ ಹೇಳಿ ಮಾಡಿಸಿದ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕಥೆ: ಬೋಧಿ ಧರ್ಮ(ಸೂರ್ಯ) ಒಬ್ಬ ಪಲ್ಲವ ರಾಜಕುಮಾರ, ಸಕಲಕಲಾವಲ್ಲಭ. ವೈದ್ಯ, ಸಾಹಸ ಕಲೆ, ವಂಶವಾಹಿ ಸೂತ್ರ ಎಲ್ಲವೂ ಕರತಲಾಮಲಕ. ಒಂದು ದಿನ ಗುರುಮಾತಾ ಈತನನ್ನು ಚೀನಾಕ್ಕೆ ಕಳಿಸುತ್ತಾರೆ. ಅಲ್ಲಿ ಅವನಿಗೆ ಭವ್ಯ ಸ್ವಾಗತ ಸಿಗುತ್ತದೆ. Shaolinquan ಎಂಬ ಸಾಹಸ ಕಲೆಯನ್ನು ಅಲ್ಲಿನ ಬೌದ್ಧ ಬಿಕ್ಷುಗಳಿಗೆ ಕಲಿಸುತ್ತಾನೆ. ಎಲ್ಲರ ಆರಾಧ್ಯ ದೈವವಾಗುತ್ತಾನೆ.
ಶತಮಾನಗಳು ಉರುಳುತ್ತದೆ ಈಗ(ಸುಮಾರು 1600 ವರ್ಷಗಳ ನಂತರ) ಚೀನಾದೇಶ ಭಾರತವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿರುತ್ತದೆ. ಡೊಂಗ್ ಲೀ(ಸ್ಪೈಡರ್ ಮ್ಯಾನ್ ಖ್ಯಾತಿಯ ಜಾನಿ ಟ್ರಿಎನ್ ಗುಯೆನ್ ) ಚೆನ್ನೈಗೆ ಬಂದು ಬಯೋ ವಾರ್ ಆರಂಭಿಸಲು ಹವಣಿಸುತ್ತಾನೆ.
ಈ ಸಮಯದಲ್ಲಿ ಶುಭ ಶ್ರೀನಿವಾಸನ್(ಶ್ರುತಿ ಹಾಸನ್) ಗೆ ಸರ್ಕಸ್ ಕಲಾವಿದ ಅರವಿಂದ್( ಸೂರ್ಯ) ನ ಪರಿಚಯವಾಗುತ್ತದೆ. ಜೆನೆಟಿಕ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರುತಿಗೆ ಅರವಿಂದ್ ಡಿಎನ್ ಎ ನೋಡಿ ಅಚ್ಚರಿಯಾಗುತ್ತದೆ. ಅರವಿಂದ್ ಹಾಗೂ ಬೋಧಿ ಧರ್ಮನ್ ಡಿಎನ್ ಎಯಲ್ಲಿ ಹೋಲಿಕೆ ಇರುತ್ತದೆ.
ಡೊಂಗ್ಲಿಯನ್ನು ಹತ್ತಿಕ್ಕಲು ಅರವಿಂದ್ ಗೆ ಬೋಧಿ ಧರ್ಮನ್ ಜೀವ ತುಂಬಲು ಶುಭ ಯತ್ನಿಸುತ್ತಾಳೆ. ಆದರೆ, ವಿಲನ್ ಡೊಂಗ್ಲಿ ಕೂಡಾ ಪರಮ ಶಕ್ತಿವಂತ. ಬೋಧಿ ಧರ್ಮನ್ ಹುಟ್ಟು ಹಾಕಿದ 'ನೊಕ್ಕು ವರ್ಮಂ' ಎಂಬ ಸಾಹಸ ಕಲೆ ಮೂಲಕ ಎಲ್ಲವನ್ನು ಎದುರಿಸುವ ಡೊಂಗ್ಲಿಯನ್ನು ಅರವಿಂದ್ ತಡೆಯಬಲ್ಲನೇ? ಶುಭ ಕೊಲ್ಲಲು ಬಂದ ಲೀ ಯಶಸ್ವಿಯಾಗುತ್ತಾನೆಯೇ? ಬೋಧಿ ಧರ್ಮನ್ ಕಥೆ ಏನಾಗುತ್ತದೆ? ಕ್ಲೈಮ್ಯಾಕ್ಸ್ ನಲ್ಲಿ ನೋಡಿ...
ನಟನೆ: ಎರಡು ಪಾತ್ರದಲ್ಲೂ ಸೂರ್ಯ ಅದ್ಭುತ ನಟನೆ ನೀಡಿದ್ದಾನೆ. ಬೋಧಿ ಧರ್ಮನ್ ರೋಲ್ ಸ್ವಲ್ಪ ಕಮ್ಮಿಯಾಯಿತು ಎನಿಸುತ್ತದೆ. ಶ್ರುತಿ ಹಾಸನ್ ಗೆ ಇದು ತಮಿಳಿನಲ್ಲಿ ಮೊದಲ ಚಿತ್ರ. ನಟನೆಯಲ್ಲಿ ಸಾಕಷ್ಟು ಪಳಗಿದಂತೆ ನಟಿಸಿದ್ದಾರೆ. ನಟಿ ಅಭಿನಯ ನಟನೆಯಲ್ಲಿ ಸತ್ವವಿದೆ. ವಿಯಟ್ನಾಂ ನಟ ವಿಲನ್ ಜಾನಿ ಕಣ್ಣಲ್ಲೇ ಎಲ್ಲರಲ್ಲೂ ಕೊಲ್ಲುತ್ತಾನೆ, ಫೈಟಿಂಗ್ ಸೂಪರ್.
ಡೌನ್ ಡೌನ್ : ಹ್ಯಾರಿಸ್ ಜಯರಾಜ್ ಹಿಂದಿನ ಸಿನಿಮಾಗಳ ಸಂಗೀತಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಹಳೆ ಟ್ಯೂನ್ ಗಳನ್ನೇ ಕೇಳಿದ ಅನುಭವ ನೀಡುತ್ತದೆ. ಆದರೂ ಹಾಡುಗಳು ಜನಪ್ರಿಯವಾಗಿದೆ. ರವಿ ಕೆ ಚಂದ್ರನ್ ಛಾಯಾಗ್ರಹಣ ತಾಜಾತನದಿಂದ ಕೂಡಿದೆ. ಅಂಟನಿ ಎಡಿಟಿಂಗ್ ಬಗ್ಗೆ ಕೆಮ್ಮಂಗಿಲ್ಲ. ಸ್ವಲ್ಪ ಎಡವಿದ್ದರೂ ಚಿತ್ರ ಬೋರ್ ಆಗುವ ಸಾಧ್ಯತೆಯಿತ್ತು. ಆದರೆ, ಅಲ್ಲಲ್ಲಿ ಚಿತ್ರಕ್ಕೆ ಕತ್ತರಿ ಬಿದ್ದರೆ ಒಳ್ಳೆಯದು.
DNA transplant, hypnotism, bio-war ಮುಂತಾದ ಪದಗಳು ಪ್ರೇಕ್ಷಕರ ತಲೆಗೆ ಹೋಗಲು ಸ್ವಲ್ಪ ಸಮಯವೇ ಬೇಕಾಗುತ್ತದೆ. ಪ್ರೇಕ್ಷಕರನ್ನು ಸ್ವಲ್ಪಮಟ್ಟಿನ ಕನ್ ಫ್ಯೂಸ್ ಗೆ ದೂಡುವುದು ಮುರುಗದಾಸ್ ಸ್ಟೈಲ್ ಎಂದು ಮಾಫಿ ಮಾಡಿಬಿಡಬಹುದು.
ಮುರಗದಾಸ್ ಬ್ಯಾಕ್ ಆನ್ ಟ್ರ್ಯಾಕ್ ಎನ್ನಬಹುದಾದರೂ ಹೆಚ್ಚು ಬೋಧನೆ ನೀಡುವ ಮೂಲಕ ಕೆಲವೊಮ್ಮೆ ಪ್ರೇಕ್ಷಕರಿಗೆ ಪಾಠ ಹೇಳುತ್ತಿದ್ದಂತೆ ಭಾಸವಾಗುತ್ತದೆ. ಒಟ್ಟಾರೆ ಒಳ್ಳೆ ಟೀಮ್ ವರ್ಕ್ ಎನ್ನಲಡ್ಡಿಯಿಲ್ಲ. ಮೊದಲ ದರ್ಜೆಯಲ್ಲಿ ಸಿನಿಮಾವನ್ನು ಪಾಸ್ ಮಾಡಬಹುದಾದರೂ ಡಿಸ್ಟಿಂಕ್ಷನ್ ಪಡೆಯುವಲ್ಲಿ ಸ್ವಲ್ಪದರಲ್ಲಿ ಸೋತಿದೆ.
ಸೂರ್ಯ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಮಸಾಲೆ ಸಿನಿಮಾ ಅಲ್ಲವಾದರೂ ಎಲ್ಲರೂ ಒಪ್ಪಬಲ್ಲ ಐತಿಹಾಸಿಕ ಚಿತ್ರಣದ ದೃಶ್ಯಗಳು ಸೆಳೆದಿಡುತ್ತದೆ.


Click it and Unblock the Notifications











