twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಸಾರಥಿ ಫುಲ್ ಪ್ಯಾಕ್ ಎಂಟರ್‌ಟೈನ್‌ಮೆಂಟ್

    By * ಉದಯರವಿ
    |

    ನಟ ದರ್ಶನ್ ಅವರ ವೈಯಕ್ತಿಕ ಜೀವನ ಪಕ್ಕಕ್ಕಿಟ್ಟು ನೋಡುವುದಾದರೆ 'ಸಾರಥಿ' ಚಿತ್ರವನ್ನು ನಿಸ್ಸಂದೇಹವಾಗಿ ಕಣ್ತುಂಬ ನೋಡಬಹುದು. ಅಪ್ಪ, ಮಗ ಹಾಗೂ ತಾಯಿ ಸೆಂಟಿಮೆಂಟ್‌, ಚಿತ್ರದಲ್ಲಿ ಕುತೂಹಲಭರಿತವಾಗಿ ಸಾಗುತ್ತಾ ಸೀಟು ಬಿಟ್ಟು ಕದಲದಂತೆ ಕೂರಿಸುತ್ತದೆ. ತನ್ನ ತಂದೆ ಊರಿನ ಪಾಳೆಗಾರ ಸೂರ್ಯನಾರಾಯಣ (ಶರತ್‌ಕುಮಾರ್) ಸಾವಿಗೆ ತಾನೇ ಕಾರಣ ಎಂದು ಕೃಷ್ಣ (ದರ್ಶನ್) ನಂಬಿರುತ್ತಾನೆ. ತನ್ನ ತಂದೆ ಹೇಗೆ ಕೊಲೆಯಾದ ಎಂಬುದರ ಕೃಷ್ಣನ ಹುಡುಕಾಟವೇ ಚಿತ್ರದ ಕಥಾಹಂದರ.

    ಚಿತ್ರದ ಮೊದಲಾರ್ಧದಲ್ಲಿ ಆಟೋ ಡ್ರೈವರ್ ರಾಜನಾಗಿ ದರ್ಶನ್, ಶಿಳ್ಳೆ ಮೇಲೆ ಶಿಳ್ಳೆ ಗಿಟ್ಟಿಸುತ್ತಾರೆ. ದ್ವಿತೀಯಾರ್ಧದಲ್ಲಿ ಕೃಷ್ಣನಾಗಿ ಗಮನಸೆಳೆಯುತ್ತಾರೆ. ಗುಣ, ನಡತೆಯಲ್ಲಿ ಆಟೋ ಡ್ರೈವರ್ ರಾಜ ಸಾಕ್ಷಾತ್ ಶ್ರೀರಾಮಚಂದ್ರ. ಅವನ ಮುಗ್ಧತೆಗೆ ಚೆಂದುಳ್ಳಿ ಚೆಲುವೆ ರುಕ್ಮಿಣಿ (ದೀಪಾ ಸನ್ನಿಧಿ) ಮನಸೋಲುತ್ತಾಳೆ. ಆದರೆ ಇವರಿಬ್ಬರ ನಡುವಿನ ಗೋಡೆಯಾಗಿ ಪ್ರತಾಪ್ ನಿಲ್ಲುತ್ತಾನೆ.

    ಆಟೋ ಡ್ರೈವರ್ ರಾಜ ದ್ವಿತೀರ್ಯಾರ್ಧದಲ್ಲಿ ಕೃಷ್ಣನಾಗಿ ಹೇಗೆ ಬದಲಾಗುತ್ತಾನೆ? ಕೃಷ್ಣನಿಗೆ ರುಕ್ಮಿಣಿ ಸಿಗುತ್ತಾಳಾ? ತನ್ನ ತಂದೆ ಸಾವಿಗೆ ಕಾರಣರಾದವರು ಯಾರೆಂಬುದು ಕೃಷ್ಣನಿಗೆ ಗೊತ್ತಾಗುತ್ತದೆಯೇ? ಎಂಬ ಪ್ರಶ್ನೆಗಳ ಉತ್ತರಕ್ಕೆ ಮಾರ್ನಿಂಗ್ ಶೋಗೆ ಟಿಕೆಟ್ ಬುಕ್ ಮಾಡಿ ಕುಟುಂಬ ಸಮೇತ ಹೋಗಿ ನೋಡಿ!

    ಚಿತ್ರದ ಹೈಲೈಟ್‌ಗಳು: ಗುಣಮಟ್ಟದಲ್ಲಿ ಚಿತ್ರ ಯಾವುದೇ ಪರಭಾಷೆಯ ಚಿತ್ರಕ್ಕಿಂತಲೂ ಕಡಿಮೆಯಿಲ್ಲ. ಚಿತ್ರ ನಿರ್ಮಾಣದ ಮೌಲ್ಯಗಳೂ ಉನ್ನತಮಟ್ಟದಲ್ಲಿದೆ. ದಿನಕರ್ ತೂಗುದೀಪ ಅವರ ಕತೆ, ಚಿತ್ರಕತೆ ಹಾಗೂ ನಿರ್ದೇಶನ ಮಾಸ್ ಪ್ರೇಕ್ಷಕರಿಗೆ ಹುಚ್ಚು ಹಿಡಿಸುವಂತಿದೆ.

    ಪಾತ್ರಗಳಲ್ಲಿನ ವೈವಿಧ್ಯತೆ, ಅಭಿನಯ ಚಾತುರ್ಯ, ಆಕ್ಷನ್ ಸನ್ನಿವೇಶಗಳು ಹಾಗೂ ಆಪ್ತವೆಸುವ ಡೈಲಾಗ್‌ಗಳು ಚಿತ್ರದ ಜೀವಾಳ. ತಾಯಿ ಚಾಮುಂಡೇಶ್ವರಿಯ ಹಿನ್ನೆಲೆಯಲ್ಲಿ ಸಾಗುವ ಕತೆ ದಸರಾ ಸಮಯದಲ್ಲಿ ಬಿಡುಗಡೆಯಾಗಿರುವುದು ವ್ಯವಹಾರಿಕವಾಗಿ ಮೆಚ್ಚಬೇಕಾದ ಅಂಶ. ಚಿತ್ರದಲ್ಲಿನ ಡೈಲಾಗ್‌ಗಳು ಭರ್ಜರಿಯಾಗಿವೆ. ಆದರೆ ದರ್ಶನ್‌ರ ವೈಯಕ್ತಿಕ ಜೀವನವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬಾರದು ಅಷ್ಟೇ.

    ಮುಖ್ಯವಾಗಿ ವಿ. ಹರಿಕೃಷ್ಣ ಅವರ ಸಂಗೀತದ ಮ್ಯಾಜಿಕ್ ಮತ್ತೊಮ್ಮೆ ಗಮನಸೆಳೆಯುವಂತಿದೆ. ಕೃಷ್ಣಕುಮಾರ್ ಛಾಯಾಗ್ರಹಣವಂತೂ ಕಣ್ಣಿಗೆ ಹಬ್ಬ. ಚಿತ್ರದಲ್ಲಿನ ನಯನ ಮನೋಹರ ದೃಶ್ಯಗಳನ್ನು ಮತ್ತೊಮ್ಮೆ ನೋಡಬೇಕೆನ್ನಿಸುತ್ತವೆ. ವೇಗವಾಗಿ ಸಾಗುವ ಕತೆ ಎಲ್ಲೂ ಬೋರು ಹೊಡೆಸುವುದಿಲ್ಲ. ಚಿತ್ರದ ಮತ್ತೊಂದು ಆಕರ್ಷಣೆ ಎಂದರೆ ಗ್ರಾಫಿಕ್ಸ್. ಶಂಕರನಾಗ್ ಅವರನ್ನು ಗ್ರಾಫಿಕ್ಸ್‌ನಲ್ಲಿ ತೋರಿಸಿರುವುದು ಒಂದು ಅದ್ಭುತ ಪ್ರಯೋಗ ಅನ್ನಬಹುದು. ಗ್ರಾಫಿಕ್ಸ್ ಶಂಕರನಾಗ್ ಜೊತೆ ದರ್ಶನ್ ಹಾಡಂತೂ ಚಿತ್ರದ ಹೈಲೈಟ್.

    ತಮ್ಮ ಚೊಚ್ಚಿಲ ಚಿತ್ರದಲ್ಲೇ ದೀಪಾ ಸನ್ನಿಧಿ ಅದ್ಭುತ ಅಭಿನಯ ನೀಡಿದ್ದಾರೆ. ಕೇವಲ ಆಕ್ಷನ್ ಸನ್ನಿವೇಶಗಳಿಗಷ್ಟೇ ಅಲ್ಲದೆ ಭಾವನಾತ್ಮಕ, ರೊಮ್ಯಾಂಟಿಕ್ ಸನ್ನಿವೇಶಗಳಲ್ಲೂ ದರ್ಶನ್ ಅಭಿನಯ ಮನಮುಟ್ಟುವಂತಿದೆ. ಒಟ್ಟಾರೆಯಾಗಿ ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲೇ ದಸರಾ ಸಂಭ್ರಮ.

    ತೆರೆಯ ಮೇಲೆ ಬಹಳಷ್ಟು ಹೊತ್ತು ಉಳಿಯದಿದ್ದರೂ ಶರತ್ ಕುಮಾರ್ ಅವರ ನಟನೆ ಅದ್ಭುತವಾಗಿ ಮೂಡಿಬಂದಿದೆ. ಅವರ ಪಾತ್ರದ ಅವಧಿ ಕಡಿಮೆ ಇದ್ದರೂ ಅದನ್ನು ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ್ದಾರೆ ದಿನಕರ್. ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಪಾತ್ರಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇವೆ.

    ಚಾಲುಕುಡಿ ಜಲಪಾತದ ಹಿನ್ನೆಲೆಯಲ್ಲಿ ಮೂಡಿಬಂದಿರುವ ತಾಯಿ ಚಾಮುಂಡೇಶ್ವರಿ ದೃಶ್ಯವೈಭವಂತೂ ನಯನ ಮನೋಹರ. ರವಿವರ್ಮ ಅವರ ಆಟೋ ಚೇಸ್ ಸಾಹಸ ಸನ್ನಿವೇಶ ಮೈನವಿರೇಳಿಸುವಂತಿವೆ. ಚಿತ್ರದ ಕತೆ, ನಿರ್ದೇಶನ, ಸಂಭಾಷಣೆ, ಸಂಗೀತ ಎಲ್ಲವೂ ಚೆನ್ನಾಗಿದ್ದರೂ ಚಿತ್ರದ ನಿಜವಾದ 'ಸಾರಥಿ' ಮಾತ್ರ ದರ್ಶನ್ ಎಂದು ಸಂಶಯಾತೀತವಾಗಿ ಹೇಳಬಹುದು.

    English summary
    Read actor Darshan lead Kannada movie Sarathi review. This is the best from Darshan the box office hero of Kannada cinema. Darshan has not just concentrated on the action portions. When it comes to emotions, dialogue delivery, challenges he makes and the romantic mood of him are superb. This film is his gift to the Dasara festival.
    Friday, September 30, 2011, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X