'8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ
ಒಬ್ಬ ಸಾಮಾನ್ಯ ವ್ಯಕ್ತಿಯ ಕೈನಲ್ಲಿ ಪೊಲೀಸರ ಗನ್ ಸಿಕ್ಕರೆ ಏನೆಲ್ಲ ಆಗಬಹುದು ಒಮ್ಮೆ ಊಹಿಸಿ. ಹೌದು, ಆತ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಬಹುದು, ದ್ವೇಷ ತಿರಿಸಿಕೊಳ್ಳಬಹುದು, ಹೆದರಿಸಿ ಹಣ ಮಾಡಬಹುದು ಹೀಗೆ ಏನೇನೋ ಮಾಡಬಹುದು. ಆ ಎಲ್ಲ ಸಾಧ್ಯತೆಗಳು ಚಿತ್ರದ ಈ ಸಿನಿಮಾದ ನಿರೂಪಣೆಯಾಗಿದೆ.
ಗನ್ ಸುತ್ತ ಸುತ್ತುವ ಕಥೆ
ಶ್ರೀನಿವಾಸ 'ಮೂರ್ತಿ' (ಜಗ್ಗೇಶ್)ಗೆ ಹಣ ಬೇಕಿರುತ್ತದೆ. ನ್ಯಾಯವಾಗಿ ಹಣ ಸಿಗದೆ ಇದ್ದಾಗ ಬ್ಯಾಂಕ್ ದರೋಡೆ ಮಾಡುವ ಪ್ಲಾನ್ ಮಾಡುತ್ತಾನೆ. ಪೊಲೀಸ್ ಗನ್ ಮೂರ್ತಿ ಕೈ ಸೇರುತ್ತದೆ. ಮೂರು ಜನ ಸೇರಿ ಬ್ಯಾಂಕ್ ದರೋಡೆ ಮಾಡುತ್ತಾರೆ. ಈ ವೇಳೆ ಒಂದು ಕೊಲೆ ಆಗುತ್ತದೆ. ಒಂದು ಕಡೆ ಗನ್ ಕಳೆದುಕೊಂಡ ಪೊಲೀಸರು ಅದನ್ನು ಹುಡುಕುತ್ತಿದ್ದರೆ, ಇತ್ತ ಕೊಲೆಗಳ ಮೇಲೆ ಕೊಲೆ ನಡೆಯುತ್ತದೆ.
ಆಟ, ಜೂಟಾಟ, ಹೊಡೆದಾಟ
ಹೆಸರಿಗೆ ತಕ್ಕ ಹಾಗೆ ಇಡೀ ಸಿನಿಮಾ ಗನ್ ಸುತ್ತ ಸಾಗುತ್ತದೆ. ಪೊಲೀಸರ ಗನ್ ಹಿಡಿದ ಮೂರ್ತಿ ಅದನ್ನು ಹೇಗೆ ಬಳಸಿಕೊಳ್ಳುತ್ತಾನೆ..?, ಯಾಕೆ ಮೂರ್ತಿ ದುಡ್ಡು ಮಾಡಲು ಹೊರಡುತ್ತಾನೆ..?, ಪೊಲೀಸರ ಕೈಗೆ ಮೂರ್ತಿ ಸಿಗುತ್ತಾನಾ?, ಅಸಲಿಗೆ ಮೂರ್ತಿ ಒಳ್ಳೆಯವನಾ.. ಕೆಟ್ಟವನಾ? ಹೀಗೆ ಈ ಎಲ್ಲ ಕುತೂಹಲಗಳಿಗೆ ಸಿನಿಮಾ ಉತ್ತರ ನೀಡಲಿದೆ.
ಒಳ್ಳೆಯ ವಿಷಯಗಳು
ಸಿನಿಮಾದಲ್ಲಿ ಅನೇಕ ಒಳ್ಳೆಯ ವಿಷಯಗಳು ಇವೆ. ತಂದೆಯನ್ನು ಮಕ್ಕಳು ಕಡೆಗಣಿಸುವ ರೀತಿ, ದುಡ್ಡಿನ ಹಿಂದೆ ಬಿದ್ದರೆ ಆಗುವ ಅನಾಹುತ, ಸರ್ಕಾರಿ ಅಧಿಕಾರಿಗಳ ಲಂಚದ ಬುದ್ಧಿ ಹೀಗೆ ಅನೇಕ ಮೆಚ್ಚುವ ಅಂಶಗಳು ಚಿತ್ರದಲ್ಲಿವೆ. ಕಮರ್ಷಿಯಲ್ ಅಂಶಗಳನ್ನು ಬಿಟ್ಟು ಸಿನಿಮಾ ಮಾಡಿರುವ ನಿರ್ದೇಶಕರ ಧೈರ್ಯ ಇಷ್ಟ ಆಗುತ್ತದೆ.
ಸೆಕೆಂಡ್ ಹಾಫ್ ನಿಧಾನ
ಸಿನಿಮಾ ನೋಡಲು ಹೆಚ್ಚು ತಾಳ್ಮೆ ಬೇಕಾಗುತ್ತದೆ. ಚಿತ್ರದ ಸೆಕೆಂಡ್ ಹಾಫ್ ನಿಧಾನವಾಗಿದೆ. ಜಗ್ಗೇಶ್ ಕಾಮಿಡಿ ಮಾಡದೆ ಇರುವ ಕಾರಣ ಸಿನಿಮಾ ಎಂಬ ಪಾಯಸಕ್ಕೆ ಸಿಹಿ ಕಡಿಮೆಯಾಗಿದೆ. ಈ ಕಥೆಯನ್ನು ಪ್ರೇಕ್ಷಕರಿಗೆ ಇನ್ನೂ ಇಷ್ಟ ಆಗುವ ರೀತಿ ಮನರಂಜನಾತ್ಮಕವಾಗಿ ಹೇಳಬಹುದಿತ್ತು.
ಜಗ್ಗೇಶ್ ಗಂಭೀರ, ಅವರೇ ಆಧಾರ
ಸಿನಿಮಾದಲ್ಲಿ ಜಗ್ಗೇಶ್ ತಮ್ಮ ಗಂಭೀರ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಬೇರೆ ಚಿತ್ರಗಳ ರೀತಿ ಅವರು ನಿಮ್ಮನ್ನು ಇಲ್ಲಿ ನಗಿಸುವ ಕೆಲಸ ಮಾಡುವುದಿಲ್ಲ. ಅವರ ಪಾತ್ರ, ಅದರ ಲುಕ್ ಎಲ್ಲ ಚೆನ್ನಾಗಿದೆ. ಅವರ ಪಾತ್ರ ಏನು ಎಂಬುದು ಚಿತ್ರದ ಕುತೂಹಲಕಾರಿ ಅಂಶಗಳಲ್ಲಿ ಒಂದು.
ಉಳಿದವರ ಪಾತ್ರಗಳು
ಜಗ್ಗೇಶ್ ಬಿಟ್ಟರೆ ಸಿನಿಮಾದ ತುಂಬ ತುಂಬಿರುವುದು ವಸಿಷ್ಟ. ಕಾರ್ತಿಕ್ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಅಬ್ಬರವಿಲ್ಲದೆ ಸಹಜವಾಗಿ ನಟಿಸಿದ್ದಾರೆ. ನಟಿ ಮಯೂರಿ ಸುದ್ದಿ ವಾಹಿನಿ ರಿಪೋಟರ್ ಪಾತ್ರವನ್ನು ಚೆನ್ನಾಗಿ ನಿಭಾಹಿಸಿದ್ದಾರೆ. ಮಯೂರಿ ಕ್ಯೂಟ್ ಆಗಿ ಕಾಣುತ್ತಾರೆ. ಶೋಭ್ ರಾಜ್, ರಾಕ್ ಲೈನ್ ವೆಂಕಟೇಶ್, ಆದಿ ಲೋಕೇಶ್ ನಟನೆ ಓಕೆ ಓಕೆ.
ಹಾಡುಗಳ ಅಗತ್ಯವಿತ್ತೆ?
ಸಿನಿಮಾ ನೋಡುವವರಿಗೆ ಹಾಡುಗಳ ಅಗತ್ಯವಿತ್ತೆ? ಎಂಬ ಪ್ರಶ್ನೆ ಮೂಡದೆ ಇರುವುದಿಲ್ಲ. ವಸಿಷ್ಟ ಮತ್ತು ಮಯೂರಿ ಇಬ್ಬರ ನಡುವಿನ ಪ್ರೇಮಕ್ಕೆ ಒಂದು ಹಾಡು ಸಾಕಾಗಿತ್ತು. ಆದರೆ, ಎರಡನೇ ಹಾಡು ಯಾಕೆ ಬೇಕಿತ್ತು?.
ಒಮ್ಮೆ ನೋಡಬಹುದು
ಸಿನಿಮಾ ಒಮ್ಮೆ ನೋಡಬಹುದು. ಆಗಾಗ ಪ್ರೇಕ್ಷಕರಿಗೆ ಟ್ವಿಸ್ಟ್ ನೀಡುವ ಸಿನಿಮಾ ಇದು. ಜಗ್ಗೇಶ್ ಬೇರೆ ರೀತಿಯ ಪಾತ್ರವನ್ನು ಪ್ರಯತ್ನ ಮಾಡಿದ್ದಾರೆ. ಕೆಟ್ಟ ಸಂಭಾಷಣೆ, ಐಟಂ ಸಾಂಗ್ ಈ ರೀತಿಯ ಅಂಶಗಳು ಇಲ್ಲದ ಫ್ಯಾಮಿಲಿ ನೋಡಬಹುದಾದ ಶುದ್ಧ ಸಿನಿಮಾ ಇದು.


Click it and Unblock the Notifications











