Kanneri Movie Review: ಕಾಡು ಮಕ್ಕಳ ಕಣ್ಣೀರಿನ ಕಥೆ 'ಕನ್ನೇರಿ'!
'ಕನ್ನೇರಿ' ಕನ್ನಡದ ಪ್ರಯೋಗಾತ್ಮಕ ಸಿನಿಮಾ. ಬಿಗ್ ಬಜೆಟ್, ಪಕ್ಕಾ ಕಮರ್ಷಿಯಲ್, ಆ್ಯಕ್ಷನ್, ಸಸ್ಪೆನ್ಸ್ ಥ್ರಿಲ್ಲರ್, ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿ ಅಂತಾ ಇದೇ ಎಳೆಗಳನ್ನು ಇಟ್ಟುಕೊಂಡು ಬಿಲ್ಡಪ್ ಕೊಡುವ ಚಿತ್ರಗಳ ಸಂತೆ ಮಧ್ಯೆ 'ಕನ್ನೇರಿ' ಭಿನ್ನವಾಗಿ ನಿಲ್ಲುತ್ತದೆ. ಜೀವನದ ನೈಜತೆಯನ್ನು ಕನ್ನೇರಿ ಹೇಳುತ್ತದೆ.
'ಕನ್ನೇರಿ' ಒಬ್ಬ ಹೆಣ್ಣು ಮಗಳ ಕಥೆ. ಕಾಡಿನ ಗರ್ಭದಲ್ಲಿ ಹುಟ್ಟಿ ಬೆಳೆದ ಕಾಡುಮಕ್ಕಳನ್ನು ಮೂಲ ಸ್ಥಾನದಿಂದ ಒಕ್ಕಲೆಬ್ಬಿಸಿದಾಗ ಅವರ ಬದುಕು, ಬವಣೆ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇಂತಹ ವಿಚಾರಗಳ ಮೇಲೆ ಸಿನಿಮಾದ ಮೂಲಕ ಬೆಳಕು ಚೆಲ್ಲಿರಿವುದು ಕಡಿಮೆ. ಎಂಟರ್ಟೈನ್ಮೆಂಟ್ಗಾಗಿ ಸಿನಿಮಾ ನೋಡುವರಿಗೆ ಇದು ತಕ್ಕ ಸಿನಿಮಾ ಅಲ್ಲಾ. ಆದರೆ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರನ್ನು ಒಂದಷ್ಟು ಚಿಂತನೆಗೀಡುಮಾಡುತ್ತದೆ.
ಬಿಡುಗಡೆಗೂ ಮುನ್ನ 'ಕನ್ನೇರಿ' ಟೈಟಲ್ ಮೂಲಕ ಕುತೂಹಲ ಹುಟ್ಟು ಹಾಕಿತ್ತು. ಈ ಚಿತ್ರದಲ್ಲಿ ಕಥೆಯೇ ಪ್ರಧಾನವಾಗಿದೆ. ಹಾಗಾಗಿ ನಾಯಕ, ನಾಯಕಿಯ ಅಭಿನಯ, ಮೇಕಿಂಗ್, ಬಜೆಟ್ ವಿಚಾರಗಳು ಲೆಕ್ಕಕ್ಕೆ ಬರುವುದಿಲ್ಲ. ಈ ಚಿತ್ರ ಮಹತ್ತರವಾದ ಸಮದೇಶವನ್ನು ಸಾರುತ್ತದೆ. ಇನ್ನು ಚಿತ್ರದ ಪ್ರಮುಖ ಪಾತ್ರಧಾರಿ ಅರ್ಚನಾ ಮಧುಸೂದನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಮುಗ್ಧ ಕಾಡು ಜನರ ಮೇಲಾದ ದೌರ್ಜನ್ಯದ ಕಥೆ!
ಕಾಡಿನಲ್ಲೇ ಹುಟ್ಟಿ ಬೆಳೆದು, ಅಲ್ಲೇ ಜೀವನ ಕಟ್ಟಿಕೊಂಡ ಆದಿವಾಸಿಗಳ ಬದುಕನ್ನು ಆಧುನೀಕರಣದ ಹೆಸರಲ್ಲಿ, ಅವರಿಗೆ ಮೋಸ ಮಾಡಿ ದೌರ್ಜನ್ಯ ಎಸಗಿ, ಅವರ ಮೂಲಸ್ಥಾನದಿಂದ ಒಕ್ಕಲೆಬ್ಬಿಸಿ ಹೇಗೆ ದರ್ಪ ಮೆರೆಯಲಾಗುತ್ತೆ, ಎಂದು ಚಿತ್ರದಲ್ಲಿ ಹೇಳಲಾಗಿದೆ. ಈ ಹಿಂದೆ ಒಂದಷ್ಟು ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯದ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.
ಹಾಗಂತ ನಡೆದ ನೈಜ ಘಟನೆಯನ್ನು ಹಾಗೆ ಕಟ್ಟಿಕೊಟ್ಟಿಲ್ಲ. ಬದಲಿಗೆ ಘಟನೆಗಳನ್ನು ಆಧರಿಸಿ, ಅದರ ಪರಿಣಾಮ ಏನೇನು ಆಗಬಹುದು ಎನ್ನುವುದನ್ನು ಚಿತ್ರದಲ್ಲಿ ನೋಡಬಹುದು. ಕಾಡು ಜನ ನಾಡಿಗೆ ಬಂದು ಏನಲ್ಲಾ ಪಾಡು ಬೀಳುತ್ತಾರೆ. ಅವರ ಕನಸುಗಳನ್ನು ಆಧುನೀಕ ಹೊಸಕಿ ಹಾಕುತ್ತದೆ ಎನ್ನುವುದನ್ನು ತೋರಿಸಲಾಗಿದೆ.
ಕಾಡು ಬಿಟ್ಟು, ನಾಡು ಪಾಲಾದ ಹೆಣ್ಣು ಮಕ್ಕಳ ಕಥೆ!
ಚಿತ್ರದಲ್ಲಿ ಮುಖ್ಯವಾಗಿ, ಕಾಡು ಬಿಟ್ಟ ಬಳಿಕ ಅಲ್ಲಿನ ಆದಿವಾಸಿ ಹೆಣ್ಣು ಮಕ್ಕಳು ದುಡಿಮೆಗಾಗಿ ಪಟ್ಟಣದ ಕಡೆ ಮುಖ ಮಾಡುತ್ತಾರೆ. ಆದರೆ ಪಟ್ಟಣಕ್ಕೆ ಹೋದವರು ಮತ್ತೆ ಮರಳಿ ಮನೆಗೆ ಬರುವುದಿಲ್ಲ. ಈ ವಿಚಾರವಾಗಿ ಸಾಕ್ಷ್ಯ ಚಿತ್ರ ಮಾಡುವ ವ್ಯಕ್ತಿಯೊಬ್ಬ, ಆ ಹೆಣ್ಣು ಮಕ್ಕಳ ಕಥೆ ಏನಾಗಿದೆ ಎನ್ನುವುದನ್ನು ಹುಡುಕುತ್ತಾ ಹೊರಡುತ್ತಾನೆ. ಆಗ ಆತನಿಗೆ ಸಿಗುವುದೇ ಮುತ್ತಮ್ಮ. ಅಲ್ಲಿಂದ ತೆರೆದುಕೊಳ್ಳುತ್ತದೆ ಮುತ್ತಮ್ಮನ ಕಥೆ. ಆಕೆಯ ಜೀವನದಲ್ಲಿ ಏನೆಲ್ಲಾ ಆಯ್ತು ಎನ್ನುವುದನ್ನು ಎಳೆ, ಎಳೆಯಾಗಿ ಬಿಚ್ಚಿಡಲಾಗಿದೆ. ಮುತ್ತಮ್ಮನ ಪಾತ್ರದ ಮೂಲಕ ಆದಿವಾಸಿ ಹೆಣ್ಣುಕ್ಕಳ ವ್ಯಥೆಯನ್ನು ಬಿಚ್ಚಿಡಲಾಗಿದೆ.
'ಕನ್ನೇರಿ' ಮುತ್ತಮ್ಮ ಎನ್ನುವ ಕಾಡು ಮಗಳ ಕಥೆ!
'ಕನ್ನೇರಿ' ಮಹಿಳಾ ಪ್ರಧಾನ ಚಿತ್ರ. ಮುತ್ತಮ್ಮ ಎನ್ನುವ ಕಾಡು ಮಗಳ ಕಥೆಯನ್ನು ಹೇಳುವ ಮೂಲಕ ಅವರ ಬದುಕು ಬವಣೆಯನ್ನು ವಿವರಿಸಲಾಗಿದೆ. ಕಾಡು ಬಿಟ್ಟು ಓಡಿಸಿದ ಬಳಿಕ, ದುಡಿಮೆಗಾಗಿ ಪಟ್ಟಣಕ್ಕೆ ಬರುವ ಮುತ್ತಮ್ಮ ಶ್ರೀಮಂತ ಯಜಮಾನಿಯ ಕೈಯಲ್ಲಿ ಸಿಕ್ಕಿ ನರಳುತ್ತಾಳೆ. ಕೊನೆಗೆ ಯಜಮಾನಿ ಮುತ್ತಮ್ಮಳನ್ನು ಜೈಲಿಗಟ್ಟುತ್ತಾಳೆ. ಅದು ಯಾಕೆ, ಅಮಾಯಕಿ ಮುತ್ತಮ್ಮ ಹೇಗೆ ಎಲ್ಲಾ ಸಂಕಷ್ಟದಿಂದ ಪಾರಾಗಿ ಮತ್ತೆ ಕಾಡಿಗೆ ಮರಳುತ್ತಾಳೆ ಎನ್ನುವುದು ಚಿತ್ರದ ಮುಖ್ಯ ಕಥಾವಸ್ತು.
ಆದಿವಾಸಿಗಳ ವಿಶೇಷ ಅಚರಣೆಗಳ ಪರಿಚಯ!
ಚಿತ್ರದಲ್ಲಿ ಆದಿವಾಸಿಗಳು ಹೇಗೆ ಬದುಕು ಸಾಗಿಸುತ್ತಾರೆ ಎನ್ನುವುದರ ಜೊತೆಗೆ, ಅವರ ಬದುಕಿನ ಒಂದಷ್ಟು ವಿಶೇಷ ಆಚರಣೆಗಳನ್ನು ತೆರೆದಿಡಲಾಗಿದೆ. ಆದಿವಾಸಿಗಳ ಮದುವೆ, ಹಬ್ಬದ ಆಚರಣೆ, ಕಾಡಿನಲ್ಲಿ ಅವರು ಕಂಡುಕೊಂಡ ಔಷಧಿಗಳು ಹೀಗೆ ಹತ್ತಾರು ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಚಿತ್ರದಲ್ಲಿ ಅರ್ಚನಾ ಮಧುಸೂದನ್, ಅನಿತಾ ಭಟ್, ಅರುಣ್ ಸಾಗರ್, ಕರಿಸುಬ್ಬು ಸೇರಿದಂತೆ ಹಲವು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











