Head Bush Review: ಕಮರ್ಷಿಯಲ್ ಚೌಕಟ್ಟಿನಲ್ಲಿ ಜಯರಾಜ್!
ಡಾಲಿ ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ಈ ಶುಕ್ರವಾರ ರಾಜ್ಯದಾದ್ಯಂತ ತೆರೆಗೆ ಬಂದಿದೆ. ಸಿನಿಮಾವು, ಮಾಜಿ ಪಾತಕಿ ಜಯರಾಜ್ ಜೀವನ ಕುರಿತಾದದ್ದು ಎಂದು ಚಿತ್ರತಂಡ ಪ್ರಚಾರ ಮಾಡಿದೆ.
ಸಿನಿಮಾದ ಒನ್ಲೈನರ್ ಹೀಗಿದೆ, ಜಯರಾಜ್, ಬಾಲ್ಯದಿಂದಲೂ ಒರಟು ಹುಡುಗ. ತನ್ನ ಏರಿಯಾದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿರುತ್ತಾನೆ. ಅವನನ್ನು ರಾಜಕಾರಣಿ ಎಂಡಿ ನಟರಾಜ್ (ತಿರುಚಿದ ಹೆಸರು) ಇಂದಿರಾ ಬ್ರಿಗೇಡ್ ಕಟ್ಟಲು ಬಳಸಿಕೊಳ್ಳುತ್ತಾನೆ. ಜಯರಾಜ್ ಸಹ ರಾಜಕಾರಣಿಯ ಬೆಂಬಲದೊಂದಿಗೆ ದೊಡ್ಡ ರೌಡಿಯಾಗುತ್ತಾನೆ. ಆದರೆ ಈ ನಡುವೆ ಕರಗದ ವಿಚಾರಕ್ಕೆ ಆಗುವ ಸಣ್ಣ ಮನಸ್ಥಾಪ ಆತನ ಆತ್ಮೀಯ ಗೆಳೆಯನೊಟ್ಟಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಆ ನಂತರ ಆ ಅವಕಾಶವನ್ನು ಜಯರಾಜ್ ವಿರುದ್ಧ ಹೊಂಚುಹಾಕುತ್ತಿದ್ದ ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕತೆ.
ಸಿನಿಮಾದ ಆರಂಭದಲ್ಲಿ ಜಯರಾಜ್ನ ವ್ಯಕ್ತಿತ್ವ, ಆತನ ಪೈಲ್ವಾನ್ ಗಿರಿ, ಆತನ ಗೆಳೆಯರ ಪರಿಚಯ ಮಾಡಿಸಲಾಗುತ್ತದೆ. ಈ ಹಂತದಲ್ಲಿ ಕೆಲವು ಮಾಹಿತಿಗಳನ್ನು ಮುಟ್ಟಿ ಬಿಡಲಾಗಿದೆ ಅಥವಾ ಮುಚ್ಚಿಡಲಾಗಿದೆ. ಜಯರಾಜ್, ಪತ್ರಿಕೆ ಪ್ರಾರಂಭ ಮಾಡಿದ್ದ ಎನ್ನುವ ನಿರ್ದೇಶಕ, ಅದಕ್ಕೆ ಕಾರಣ ಏನು? ಪತ್ರಿಕೆಯಲ್ಲಿ ಏನು ಬರೆಯಲಾಗುತ್ತಿತ್ತು? ಇನ್ನಿತರೆ ಸಂಗತಿಗಳನ್ನು ಮುಟ್ಟಿಲ್ಲ.
ಸಿನಿಮಾಕ್ಕೆ ಕಮರ್ಷಿಯಲ್ ಚೌಕಟ್ಟು ತೊಡಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣ ಕತೆಯನ್ನು ತಮ್ಮಿಷ್ಟದಂತೆ ಬಗ್ಗಿಸಿಕೊಂಡಿದ್ದಾರೆ ನಿರ್ದೇಶಕರು. ಹೀಗಾಗಿ ಕತೆ ಗೌಣವಾಗಿ ಪಾತ್ರಗಳ, ಪಾತ್ರಗಳನ್ನು ನಿರ್ವಹಿಸಿರುವ ನಟರ ಇಮೇಜುಗಳೇ ತೆರೆಯ ಮೇಲೆ ಅಬ್ಬರಿಸಿವೆ. 'ಆ ದಿನಗಳು' ಸಿನಿಮಾದಲ್ಲಿ ಸಾಧ್ಯವಾಗಿದ್ದ ಕಮರ್ಷಿಯಲ್ ಚೌಕಟ್ಟು ಮೀರಿ, ಸಾಧ್ಯವಾದಷ್ಟು ನಿಜಕ್ಕೆ ಹತ್ತಿರುವೆನಿಸುವಂತೆ ಕತೆ ಹೇಳುವ ವಿಧಾನ ಇಲ್ಲಿ ಕಣ್ಮರೆ. ಕುಠಿಲ ರಾಜಕಾರಣ, ತಣ್ಣನೆಯ ಕ್ರೌರ್ಯ, ಬೆಂಗಳೂರಿನ ಆ ದಿನಗಳ ಭೂಗತ ಜಗತ್ತು ತುಂಬಬೇಕಿದ್ದ ಜಾಗವನ್ನು ಸ್ಲೋ ಮೋಷನ್ ವಾಕ್ಗಳು, ಬಿಲ್ಡಪ್ ಫೈಟ್ಗಳು ಆವರಿಸಿವೆ.
ಕೆಲ ಪಾತ್ರಗಳ ಬಗ್ಗೆ ಮೃದು ಧೋರಣೆ
ಕೆಲವು ಪಾತ್ರಗಳ ಮೇಲೆ ನಿರ್ದೇಶಕ ಶೂನ್ಯ ಮತ್ತು ಕತೆಗಾರ ಅಗ್ನಿ ಶ್ರೀಧರ್ ಮೃದು ಧೋರಣೆ ತಳೆದಿದ್ದಾರೆ. ಹಾಗೂ ಕೆಲವು ಪಾತ್ರಗಳಿಗೆ ನಿರ್ದಿಷ್ಟ ವ್ಯಕ್ತಿತ್ವ ನೀಡಲು ವಿಫಲರಾಗಿದ್ದಾರೆ ಎನಿಸುತ್ತದೆ. ಅಪಾರ ಪ್ರೀತಿಯಿದ್ದರೂ ಗೆಳೆಯನನ್ನೇ ಕೊಲ್ಲಲು ಯತ್ನಿಸುವುದು, ಕೊಲ್ಲುವ ವೇಳೆಯೂ ನಾಟಕೀಯತೆ ಪ್ರದರ್ಶಿಸುವುದು. ಗೆಳೆಯನೊಡನೆ ಜಯರಾಜ್ ಮಾಡುವ ಅಂತಿಮ ಕಾದಟ, ಇನ್ನೂ ಕೆಲವು ದೃಶ್ಯಗಳು ನಿಜ ಘಟನೆಯಿಂದ ಮಾರು ದೂರ ಇವೆ ಎಂಬುದು ಸುಲಭಕ್ಕೆ ಗೊತ್ತಾಗುತ್ತದೆ. ನಿಜ ವ್ಯಕ್ತಿಯ ಕತೆ ಹೇಳುವಾಗ ಕತೆಯನ್ನು ಈ ಮಟ್ಟಿಗೆ 'ಸಿನಿಮೀಯ' ಗೊಳಿಸುವುದು ತರವೇ? ಈ ಪ್ರಶ್ನೆಯನ್ನು ನಿರ್ದೇಶಕರು ಕೇಳಿಕೊಳ್ಳಬೇಕು.
ಪಾತ್ರಗಳು ಹೇಗಿದೆ?
ಸಿನಿಮಾದ ಆರಂಭದಲ್ಲಿ ರವಿಚಂದ್ರನ್ ಪಾತ್ರವನ್ನು ವಿನಾಕಾರಣ ತುರುಕಲಾಗಿದೆ. ಆ ಪಾತ್ರಕ್ಕೆ ಉದ್ದೇಶವೇ ಇಲ್ಲ. ಕತೆಗಾರ ತಮ್ಮ ಅರಸು ಪ್ರೇಮ ಪ್ರದರ್ಶನಕ್ಕಾಗಿಯೂ ಕೆಲವು ದೃಶ್ಯಗಳನ್ನು ಸೃಷ್ಟಿಸಿದ್ದಾರೆ. ಅರಸು ಪುತ್ರಿಯ ಪಾತ್ರಕ್ಕೆ ಸ್ಪಷ್ಟತೆ ಇದ್ದಂತಿಲ್ಲ. ಜಯರಾಜ್ ಬಗ್ಗೆ ಒಮ್ಮೆಯ ಕಠಿಣವಾಗಿಯೂ ಮತ್ತೊಮ್ಮೆ ಮೃದುವಾಗಿಯೂ ವರ್ತಿಸುತ್ತದೆ ಆ ಪಾತ್ರ. ಇನ್ನು ಜಯರಾಜ್ ಗೆಳೆಯರಲ್ಲಿ ಗಂಗ ಹಾಗೂ ಸ್ಯಾಮ್ಸನ್ಗಷ್ಟೆ ಪ್ರಾಮುಖ್ಯತೆ, ಇನ್ನಾರಿಗೂ ಇಲ್ಲ. ಕೆಲವು ಪಾತ್ರಗಳಂತೂ ಕೋಣೆಯಲ್ಲಿ ಬಂಧಿ, ಅಲ್ಲಿಂದ ಹೊರಗೇ ಬರುವುದಿಲ್ಲ!
ಅಭಿನಯ ಹೇಗಿದೆ?
ಡಾಲಿ ಧನಂಜಯ್ ಸಹಜವಾಗಿ ನಟಿಸಿದ್ದಾರೆ. ಲೂಸ್ ಮಾದಾ ಯೋಗಿ ಸಹ ಧನಂಜಯ್ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಸ್ಯಾಮ್ಸನ್ ಪಾತ್ರಧಾರಿಯ ನಟನೆಯೂ ಚೆನ್ನಾಗಿದೆ. ನಾಯಕಿ ಪಾಯಲ್ ರಜಪೂತ್, ದೇವರಾಜ್, ರಘು ಮುಖರ್ಜಿ, ಶ್ರುತಿ ಹರಿಹರನ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದ ತಾಂತ್ರಿಕ ಅಂಶಗಳ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಹಿನ್ನೆಲೆ ಸಂಗೀತ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಕ್ಲಬ್ನಲ್ಲಿ ನಡೆವ ಒಂದು ಹಾಡು ಚೆನ್ನಾಗಿದೆ. ಒಂದು ಇಂಟೆನ್ಸ್ ಚಿತ್ರಕತೆ ಆಗಬಹುದಾಗಿದ್ದ ಕತೆಯನ್ನು ಮೂರರಲ್ಲಿ ಮತ್ತೊಂದು ಎಂಬಂತೆ ಸಾಮಾನ್ಯ ಕಮರ್ಷಿಯಲ್, ಮಾಸ್ ಸಿನಿಮಾ ಆಗಿಸಿ ಪೋಲು ಮಾಡಿದ್ದಾರೆ.
'ಆ ದಿನಗಳು' ಜೊತೆ ಹೋಲಿಸುವಂತಿಲ್ಲ
ಇದೇ ರೌಡಿಸಂ ಕತೆಯನ್ನು ನಿರ್ಲಿಪ್ತವಾಗಿ ಆದರೂ ಇಂಟೆನ್ಸ್ ಆಗಿ 'ಆ ದಿನಗಳು' ಸಿನಿಮಾ ಮಾಡಿ ಮೂಡಿಸಿದ್ದ ಭರವಸೆಯನ್ನು ಈ ಸಿನಿಮಾದ ಮೂಲಕ ಮುರಿದರು ಎನಿಸಿದರೆ ಆಶ್ಚರ್ಯವಿಲ್ಲ. ನಿಜ ವ್ಯಕ್ತಿಯ ಕತೆಯನ್ನು ಸಿನಿಮಾ ಮಾಡಲು ಹೊರಟಾಗ 'ಸಿನಿಮ್ಯಾಟಿಕ್ ಲಿಬರ್ಟಿ' ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬೇಕು, 'ಕಮರ್ಷಿಯಲ್ ಸಿನಿಮಾ' ಭಾಷೆಗೆ ಒಗ್ಗಿಸಲು ನಡೆದ ಘಟನೆಗಳನ್ನು ತಿರುಚಬಹುದೆ? ಬೇಡವೆ? ತಿರುಚಿದರೆ ಎಷ್ಟರ ಮಟ್ಟಿಗೆ ಇದೆಲ್ಲದರ ವಿವೇಚನೆ ನಿರ್ದೇಶಕ ಹಾಗೂ ಕತೆಗಾರನಿಗೆ ಇರಬೇಕಾಗುತ್ತದೆ. ಸಿನಿಮಾದ ಎರಡನೇ ಭಾಗ ಬರಲಿದ್ದು, ಅದರಲ್ಲಾದರೂ ತಪ್ಪುಗಳು ಸುಧಾರಣೆ ಆಗುತ್ತವೆಯೇ ಕಾದು ನೋಡಬೇಕು.


Click it and Unblock the Notifications











