Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Drishyam 2 movie review: ಮತ್ತೆ ಗೆದ್ದ ಜಾರ್ಜ್ ಕುಟ್ಟಿ, ಪೆಚ್ಚಾದ ಪೊಲೀಸರು
ಏಳು ವರ್ಷಗಳ ಹಿಂದೆ ತೆರೆ ಕಂಡಿದ್ದ ಮಲಯಾಳಂ ಸಿನಿಮಾ 'ದೃಶ್ಯಂ' ಇತಿಹಾಸ ಸೃಷ್ಟಿಸಿತ್ತು. ಕಣ್ಣ ರೆಪ್ಪೆ ಕದಲಿಸಲು ಬಿಡದ ಕುತೂಹಲಭರಿತ ಕತೆಯನ್ನು ಹೇಳಿದ್ದ ನಿರ್ದೇಶಕ ಜೀತು ಜೋಸೆಫ್ ಏಳು ವರ್ಷಗಳ ಬಳಿಕ ಅದೇ ಕತೆಯ ಮುಂದಿನ ಭಾಗವಾಗಿ 'ದೃಶ್ಯಂ2' ಸಿನಿಮಾ ತಂದಿದ್ದಾರೆ.
ಮೊದಲ 'ದೃಶ್ಯಂ' ನಲ್ಲಿ ನಾಯಕ ಜಾರ್ಜ್ ಕುಟ್ಟಿ ತನ್ನ ಹೆಂಡತಿ ಮಕ್ಕಳನ್ನು ಉಳಿಸಿಕೊಳ್ಳಲು, ಕೊಲೆಯಾದ ಯುವಕ ವರುಣ್ನ ಶವವನ್ನು ಪೊಲೀಸ್ ಠಾಣೆಯಲ್ಲಿ ಮುಚ್ಚಿಟ್ಟು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುತ್ತಾನೆ. ಅದೇ ಪ್ರಕರಣ 'ದೃಶ್ಯಂ2' ನಲ್ಲಿ ಮುಂದುವರೆದಿದೆ.
ಏಳು ವರ್ಷಗಳಲ್ಲಿ ನಾಯಕ ಜಾರ್ಜ್ ಕುಟ್ಟಿ ಸಾಕಷ್ಟು ಬದಲಾಗಿದ್ದಾನೆ. ಕೇಬಲ್ ಟಿವಿ ಆಪರೇಟರ್ ನಿಂದ ಚಿತ್ರಮಂದಿರದ ಮಾಲೀಕನಾಗಿದ್ದಾನೆ. ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾನೆ. ಸಿನಿಮಾದ ಚಿತ್ರಕತೆ ಸಹ ಬರೆಸುತ್ತಿದ್ದಾನೆ, ಅದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿದ್ದಾನೆ. ದೊಡ್ಡ ಮನೆ ಕಟ್ಟಿಕೊಂಡಿದ್ದಾನೆ, ಜೀಪು ಹೋಗಿ ಎಸ್ಯುವಿ ಕಾರು ಕೊಂಡಿದ್ದಾನೆ, ಜೊತೆಗೆ ತುಸು ಕುಡುಕನೂ ಆಗಿದ್ದಾನೆ. ಆದರೆ ಬುದ್ಧಿವಂತಿಕೆ, ಮುಂಜಾಗೃತೆ ತುಸುವೂ ಕಡಿಮೆ ಆಗಿಲ್ಲ.
ಪೊಲೀಸರು ರಹಸ್ಯವಾಗಿ ಕೊಲೆಯ ತನಿಖೆ ಮಾಡುತ್ತಿದ್ದಾರೆ
ಜಾರ್ಜ್ ಕುಟ್ಟಿಯ ಮಕ್ಕಳಿಬ್ಬರೂ ದೊಡ್ಡವಾಗಿದ್ದಾರೆ, ಸಣ್ಣ ಮಗಳು ಊರಿನ ಪ್ರತಿಷ್ಠಿತ ಕಾಲೇಜಿಗೆ ಹೋಗುತ್ತಾಳೆ. ದೊಡ್ಡ ಮಗಳಿಗೆ ಆ ವರುಣ್ ಕೊಲೆಯ ಘಟನೆ ಈಗಲೂ ಕನಸಿನಲ್ಲಿ ಕಾಡುತ್ತದೆ. ಜಾರ್ಜ್ ಕುಟ್ಟಿಯ ಪತ್ನಿ ರಾಣಿಗೆ ಗಂಡನ ನಿರ್ಧಾರಗಳು, ವರ್ತನೆಗಳ ಬಗ್ಗೆ ಸಮಾಧಾನವಿಲ್ಲ. ಆಗ ಊರೆಲ್ಲಾ ಜಾರ್ಜ್ ಕುಟ್ಟಿಯ ಬೆಂಬಲಿಕ್ಕಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಜಾರ್ಜ್ ಕುಟ್ಟಿಯನ್ನು ಹಲವರು ಅನುಮಾನದಿಂದ ನೋಡುತ್ತಿದ್ದಾರೆ. ಪೊಲೀಸರು ಜಾರ್ಜ್ ಕುಟ್ಟಿಗೆ ಗೊತ್ತಾಗದಂತೆ ರಹಸ್ಯವಾಗಿ ಕೊಲೆಯ ತನಿಖೆಯನ್ನು ಮಾಡುತ್ತಿದ್ದಾರೆ.
ಪೊಲೀಸರು ಹುಡುಕಿ ಬರುತ್ತಾರೆಂದು ಜಾರ್ಜ್ ಕುಟ್ಟಿಗೆ ಗೊತ್ತಿದೆ
'ಸಿಕ್ಕಿ ಹಾಕಿಕೊಳ್ಳಲು ಸಾಧ್ಯವೇ ಇಲ್ಲದ ಅಪರಾಧ ಯಾವುದೂ ಇಲ್ಲ' ಇದು ಜಾರ್ಜ್ ಕುಟ್ಟಿಗೆ ಚೆನ್ನಾಗಿ ಗೊತ್ತಿದೆ. ತನ್ನನ್ನು ಹುಡುಕಿ ಪೊಲೀಸರು ಬಂದೇ ಬರುತ್ತಾರೆಂಬುದು ಜಾರ್ಜ್ ಕುಟ್ಟಿಗೆ ಚೆನ್ನಾಗಿ ಅರಿವಿದೆ. ಪೊಲೀಸರು ಕೆಲ ವರ್ಷಗಳಿಂದ ರಹಸ್ಯವಾಗಿ ವರುಣ್ನ ಕೊಲೆಯ ತನಿಖೆ ಮಾಡುತ್ತಿದ್ದಾರೆ ಆದರೆ ಜಾರ್ಜ್ ಕುಟ್ಟಿ ಮಹಾ ಬುದ್ಧಿವಂತ ಅವನು ಪೊಲೀಸ್ ಠಾಣೆಯಲ್ಲಿ ವರುಣ್ನ ಶವ ಮುಚ್ಚಿಟ್ಟ ದಿನದಿಂದಲೂ ಮುಂದೊಂದು ದಿನ ಪೊಲೀಸರು ಮತ್ತೆ ಹುಡುಕಿ ಬಂದಾಗ ಏನು ಮಾಡಬೇಕು ಎಂಬುದನ್ನು ಯೋಚಿಸಿಬಿಟ್ಟಿದ್ದಾನೆ. ಪೊಲೀಸರಿಗಿಂತಲೂ ಹಲವು ಹೆಜ್ಜೆ ಮುಂದಿದ್ದಾನೆ ಜಾರ್ಜ್ ಕುಟ್ಟಿ. ಇದೇ ಕಾರಣಕ್ಕೆ ಜಾರ್ಜ್ ಕುಟ್ಟಿ ಮತ್ತೆ ಪ್ರೇಕ್ಷಕರಿಂದ ವಾಹ್, ಶಭಾಷ್ ಎನಿಸಿಕೊಳ್ಳುತ್ತಾನೆ.
ಸೀಕ್ವೆಲ್ ಮಾಡಿ ಗೆದ್ದ ಜೀತು ಜೋಸೆಫ್
ಜನಪ್ರಿಯ ಸಿನಿಮಾದ ಸೀಕ್ವೆಲ್ ಮಾಡುವಾಗ ಬಹಳ ನಿರೀಕ್ಷೆಗಳಿರುತ್ತವೆ, ಬಹುಪಾಲು ಹಿಟ್ ಸಿನಿಮಾಗಳ ಸೀಕ್ವೆಲ್ಗಳು ಫ್ಲಾಪ್ ಆಗಿವೆ. ಆದರೆ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ ನಿರ್ದೇಶಕ ಜೀತು ಜೋಸೆಫ್. 'ದೃಶ್ಯಂ' ಸಿನಿಮಾದ ಅದೇ ಥ್ರಿಲ್ಲರ್ ಅಂಶವನ್ನು, ಕೌಟುಂಬಿಕ ಡ್ರಾಮಾವನ್ನು ಪ್ರೇಕ್ಷಕನಿಗೆ ಬೋರ್ ಆಗದಂತೆ ಮತ್ತೆ ಕಟ್ಟಿಕೊಟ್ಟಿದ್ದಾರೆ ಜೀತು.
ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಕತೆಯ ಒಳಸುಳಿಗಳು ಅರ್ಥವಾಗುತ್ತದೆ
ಸಿನಿಮಾದ ಆರಂಭದಲ್ಲಿ ಕತೆ ನಿಧಾನಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತದೆ, ಸಿನಿಮಾದ ಮೊದಲಾರ್ಧ ನೋಡಿದ ಪ್ರೇಕ್ಷಕ ಮೊದಲ 'ದೃಶ್ಯಂ' ಜೊತೆ ಹೋಲಿಸಿ 'ಸಿನಿಮಾ ನಿರೀಕ್ಷಿತ ಮಟ್ಟದಲ್ಲಿಲ್ಲ' ಎಂದುಕೊಳ್ಳುವುದು ಪಕ್ಕಾ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಪ್ರೇಕ್ಷಕನಿಗೆ ಗೊತ್ತಾಗುತ್ತದೆ, ಸಿನಿಮಾದ ಮೊದಲರ್ಧದಲ್ಲಿ ಏಕೆ ಡಲ್ ಆದ ಕತೆ ಹೆಣೆಯಲಾಗಿದೆ ಎಂದು. ಸಿನಿಮಾದ ಆರಂಭದಿಂದ ಜಾರ್ಜ್ ಕುಟ್ಟಿ ಮಾಡಿದ ಕಾರ್ಯಗಳ ಮೂಲ ಉದ್ದೇಶ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಆಗಿ ಪ್ರೇಕ್ಷಕ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗುತ್ತದೆ.
Recommended Video
ಕೆಲವು ಹೊಸ ಪಾತ್ರಗಳ ಸೇರ್ಪಡೆ
ಇನ್ನು ಮೋಹನ್ಲಾಲ್ ಸಿನಿಮಾ ಪೂರ್ತಿ ತುಂಬಿಕೊಂಡಿದ್ದಾರೆ. ಅವರ ನೀರಿನಂಥಹಾ ಅಭಿನಯಕ್ಕೆ ಯಾವ ಪಾತ್ರವೂ ಸವಾಲಲ್ಲ. ಪತ್ನಿಯಾಗಿ ರಾಣಿಯಾಗಿ ಮೀನಾ ಅಭಿನಯವೂ ಚಂದ. ಮೊದಲ ದೃಶ್ಯಂ ನಲ್ಲಿದ್ದ ಖಡಕ್ ಐಜಿ ಗೀತಾ ಪ್ರಭಾಕರ್ ಇಲ್ಲಿಯೂ ಇದ್ದಾರೆ, ಅವರು ತಮ್ಮ ಅದೇ ಖದರ್ ಅನ್ನು ಈ ಸಿನಿಮಾದಲ್ಲಿಯೂ ಮುಂದುವರೆಸಿದ್ದಾರೆ. ಕೆಲವು ಹೊಸ ಪಾತ್ರಗಳು ಈ ಸಿನಿಮಾದಲ್ಲಿ ಸೇರಿಕೊಂಡಿದೆ. ಐಪಿಎಸ್ ಅಧಿಕಾರಿ ಥಾಮಸ್, ಕುಡುಕ ಸಾಬು, ಆತನ ಪತ್ನಿ ಅಂಜು, ಜೈಲಿಗೆ ಹೋಗಿ ಬಂದ ಜೋಸ್ ಜಾರ್ಜ್ ಇನ್ನೂ ಕೆಲವು ಹೊಸ ಪಾತ್ರಗಳು ಸಿನಿಮಾಕ್ಕೆ ಸೇರಿವೆ. ಇವೆಲ್ಲವನ್ನೂ ಒಟ್ಟುಮಾಡಿ ಥ್ರಿಲ್ಲರ್ ಕತೆಯನ್ನು ಹೆಣೆದಿದ್ದಾರೆ ನಿರ್ದೇಶಕ ಜೀತು ಜೋಸೆಫ್. ಸಿನಿಮಾದ ಮತ್ತೊಂದು ಪ್ರಮುಖ ಅಂಶ ಸಂಗೀತ. ಥ್ರಿಲ್ಲರ್ ದೃಶ್ಯವನ್ನು ಇನ್ನಷ್ಟು ಥ್ರಿಲ್ ಬರುವಂತೆ ಮಾಡುತ್ತದೆ ಹಿನ್ನೆಲೆ ಸಂಗೀತ. ಸಿನಿಮಾದಲ್ಲಿ ಒಂದು ಹಾಡು ಮಾತ್ರವೇ ಇದೆ. ಕ್ಯಾಮೆರಾ ಕೈಚಳಕವೂ ಚೆನ್ನಾಗಿಯೇ ಇದೆ.