Don't Miss!
- News Dingaleshwar Swamiji: ಕೋಟಿ ಒಡೆಯ ದಿಂಗಾಲೇಶ್ವರ ಸ್ವಾಮೀಜಿಯ ಆಸ್ತಿ ವಿವರ ತಿಳಿಯಿರಿ
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Jhund Movie Review: ಕಹಿ ಸತ್ಯಕ್ಕೆ ಕನ್ನಡಿ ಹಿಡಿದ 'ಝುಂಡ್'
ತಾರಾಗಣ: ಅಮಿತಾಬ್ ಬಚ್ಚನ್, ರಿಂಕು ರಾಜಗುರು, ಅಭಿನಯ್ ಸಿಂಗ್ ರಾಜ್, ಗಣೇಶ್ ದೇಶ್ಮುಖ್,
ನಿರ್ದೇಶನ: ನಾಗರಾಜ್ ಮಂಜುಳೆ
ಮರಾಠಿ ಸಿನಿಮಾ ನಿರ್ದೇಶಕ ನಾಗರಾಜ್ ಮಂಜುಳೆ ತಮ್ಮ ಮೊದಲ ಹಿಂದಿ ಸಿನಿಮಾದಲ್ಲಿ ದೊಡ್ಡ ಗುರುತು ಮೂಡಿಸಿದ್ದಾರೆ 'ಝುಂಡ್' ಸಿನಿಮಾ ಮೂಲಕ. 'ಝುಂಡ್' ಸಿನಿಮಾ ಮೇಲ್ನೋಟಕ್ಕೆ ಕ್ರೀಡೆಯ ಕುರಿತಾದ ಸಿನಿಮಾ ಆದರೂ ಇದು ಅಸಲಿಗೆ ಇದು ನಿರ್ಲಕ್ಷಕ್ಕೊಳಗಾದವರ, ತುಳಿತಕ್ಕೊಳಗಾದವರ ಕತೆ. ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರುವ ಶಕ್ತಿಯಿದ್ದರೂ ರೆಕ್ಕೆ ಬಿಚ್ಚಲು ನಿರ್ಬಂಧ ಹೇರಲ್ಪಟ್ಟವರ ಕತೆ.
ಚೆನ್ನಾಗಿರುವುದೇನು, ಇಲ್ಲದ್ದೇನು?: ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ವಿಷಯ ವಸ್ತು, ಕತೆ. ಸಂದೇಶವನ್ನು ನೀಡಿರುವ ರೀತಿ. ಎಲ್ಲರ ನಟರ ನಟನೆ ಮತ್ತು ಕ್ಯಾಮೆರಾ ಕೆಲಸ ಚೆನ್ನಾಗಿದೆ. ಕೆಲವು ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಇನ್ನಷ್ಟು ಚುರುಕಾಗಿಯೂ ಪ್ರಭಾವಶಾಲಿಯಾಗಿಯೂ ಇರುತ್ತಿತ್ತು.
'ಗಂಗೂಬಾಯಿ ಕಾಠಿಯಾವಾಡಿ' ಬಣ್ಣಗಳಲ್ಲಿ ವೇಶ್ಯೆ ಕತ್ತಲೆ ಜೀವನದ ಕತೆ
ಕತೆ ಏನು?
ಸಿನಿಮಾ ಕತೆ ಸ್ಥಿತವಾಗಿರುವುದು ನಾಗ್ಪುರದ ಗಡ್ಡಿ ಗೋಧಾಮು ಎಂಬಲ್ಲಿ. 'ಝುಂಡ್' ಸಿನಿಮಾ ಪ್ರಾರಂಭವಾಗುವುದೇ ಅಲ್ಲಿನ ಸ್ಲಮ್ನ ಚಿತ್ರಣದ ಮೂಲಕ. ಒಳ್ಳೆಯದು-ಕೆಟ್ಟದು ವ್ಯತ್ಯಾಸ ಇರದೆ ಬದುಕಲು ಏನಾದರೂ ಮಾಡಬೇಕು ಎಂಬುದಷ್ಟೆ ಜೀವನಧ್ಯೇಯವಾಗಿಸಿಕೊಂಡ ಕೆಲವು ಯುವಕರು, ಮಕ್ಕಳು ಕೆಲವು ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಕೊರಳ ಸರ ಕದಿಯುವುದು, ಅಕ್ರಮವಾಗಿ ಸಾರಾಯಿ ಮಾರುವುದು ಇತರೆ-ಇತರೆ. ಕೆಲವರು ಮಾದಕ ವ್ಯಸನಿಗಳಾದರೆ, ಕೆಲವರು ಜಗಳಕೋರರು.
ಸಮಾಜ ಅವರನ್ನು ಒಪ್ಪಿಕೊಳ್ಳುತ್ತದೆಯೇ?
ಮತ್ತೊಂದೆಡೆ, ಸೇಂಟ್ ಜಾನ್ಸ್ ಶಾಲೆಯ ಕ್ರೀಡಾ ಶಿಕ್ಷಕ ವಿಜಯ್ ಬರೋಡೆ (ಅಮಿತಾಬ್ ಬಚ್ಚನ್) ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಒಂದು ದಿನ ಇದೇ ಮಕ್ಕಳು ಪ್ಲಾಸ್ಟಿಕ್ ಬ್ಯಾರೆಲ್ನಿಂದ ಫುಟ್ಬಾಲ್ ಆಡುವುದನ್ನು ನೋಡುತ್ತಾರೆ. ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆ ತರುವ ಯೋಚನೆ ಮಾಡುತ್ತಾರೆ. ಅವರಿಗೆ ಫುಟ್ಬಾಲ್ ಕಲಿಸುವ ನಿರ್ಣಯ ಮಾಡುತ್ತಾರೆ. ಜೊತೆಗೆ ಅವರೆಲ್ಲರನ್ನೂ ಅವರ ಅಪರಾಧಿಕ ಜಗತ್ತಿನಿಂದ ಹೊರಗೆ ತರುವ ಯೋಚನೆಯೂ ಅವರದ್ದಾಗಿರುತ್ತದೆ. ವಿಜಯ್ ನಿಧಾನಕ್ಕೆ ಆ ಸ್ಲಂ ಹುಡುಗರ ಗೆಳೆತನ ಸಾಧಿಸುತ್ತಾರೆ. ಅವರಿಗೆ ಫುಟ್ಬಾಲ್ ಆಟ ಕಲಿಸುತ್ತಾರೆ. ಹುಡುಗರು ಸಹ ನಿಧಾನಕ್ಕೆ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುತ್ತಾರೆ. ಅಪರಾಧ ಚಟುವಟಿಕೆ ಬಿಟ್ಟು ಮನುಷ್ಯರಾಗುತ್ತಾರೆ. ಫುಟ್ಬಾಲ್ ಆಟ ಕಲಿಯುತ್ತಾರೆ. ಆದರೆ ಈ ಬದಲಾದ ಸ್ಲಂ ಹುಡುಗರನ್ನು 'ಸಮಾಜ' ತಮ್ಮಂತೆ ಒಪ್ಪಿಕೊಳ್ಳುತ್ತದೆಯೇ? ಎಂಬುದು ಕತೆಯ ಮುಖ್ಯ ಅಂಶ.
Old Monk Movie Review: ಕಾಮಿಡಿ ಪಂಚ್ ಮೂಲಕವೇ ನಶೆ ಏರಿಸುವ 'ಓಲ್ಡ್ ಮಾಂಕ್'!
ನಿರ್ದೇಶನ ಹೇಗಿದೆ?
ನಿರ್ದೇಶಕ ನಾಗರಾಜ್ ಮಂಜುಳೆಯ ಕಳೆದ ಬ್ಲಾಕ್ ಬಸ್ಟರ್ ಸಿನಿಮಾ 'ಸೈರಾಟ್' ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆವ ಜಾತಿ-ಪ್ರೀತಿ ಕುರಿತ ಸಂಘರ್ಷದ ಕತೆಯಾದರೆ. 'ಝುಂಡ್' ಸಿನಿಮಾ, ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಕ್ರೀಡಾ ವಿಷಯ ಒಳಗೊಂಡ ಸಿನಿಮಾ. 'ಸ್ಲಮ್ ಸಾಕರ್'ನ ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ, ವಿಜಯ್ ಬೋರ್ಸೆ ಅವರ ನಿಜ ಜೀವನದ ಕತೆಯಿಂದ ಪ್ರೇರೇಪಿತಗೊಂಡು ಈ ಸಿನಿಮಾ ಮಾಡಲಾಗಿದೆ. ಕತೆಯನ್ನು ನಿರ್ದೇಶಕ ನಾಗರಾಜ್ ಮಂಜುಳೆ ಸರಿಯಾದ ಪ್ರಮಾಣದ ಭಾವನೆ, ಹಾಸ್ಯ ಸೇರಿಸಿ ಕುತೂಹಲಕರ ಧಾಟಿಯಲ್ಲಿ ಒಪ್ಪಿಸುತ್ತಾ ಹೋಗಿದ್ದಾರೆ. ಜೊತೆಗೆ ಅಸಮಾನತೆ, ಅಸ್ಪೃಶ್ಯತೆಯನ್ನು ಅವಕಾಶ ಸಿಕ್ಕಾಗೆಲ್ಲ ಪ್ರಶ್ನಿಸಿದ್ದಾರೆ ನಾಗರಾಜ್ ಮಂಜುಳೆ. 'ಝುಂಡ್' ಸಿನಿಮಾದಲ್ಲಿ ನಿರ್ದೇಶಕ ನಾಗರಾಜ್ ಮಂಜುಳೆಯ ತಪ್ಪುಗಳನ್ನು ಹುಡುಕುವುದು ಕಷ್ಟವೇ. ಸಿನಿಮಾದ ಕತೆ, ಕತೆ ನಡೆಯುವ ಜಾಗ, ಪಾತ್ರಗಳು, ಪಾತ್ರಗಳ ಹಿನ್ನೆಲೆ, ಅವರ ಭಾಷೆ, ಪಾತ್ರಗಳ ಬದಲಾವಣೆ ಎಲ್ಲವೂ ಸಹಜ ಮತ್ತು ಕತೆ ನಡೆಯುತ್ತಿರುವ ಜಾಗಕ್ಕೆ ಬಹಳ ಹತ್ತಿರ.
ಏರ್ಪೋರ್ಟ್ ದೃಶ್ಯ ಅತ್ಯದ್ಭುತ
ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಮಂದಿ ಪ್ರತಿಭಾವಂತರು ವೈರಲ್ ಆಗುವುದನ್ನು ನೋಡಿರುತ್ತೇವೆ. ಆದರೆ ಆ ಪ್ರತಿಭಾವಂತರ ಪ್ರತಿಭೆಗಳು ಕೇವಲ ಸಾಮಾಜಿಕ ಜಾಲತಾಣಕ್ಕೆ ಅಷ್ಟೆ ಸೀಮಿತಗೊಂಡುಬಿಡುತ್ತದೆ. ಅಂಥಹವರಿಗೆ ಸಹಾಯ ಮಾಡಿ ಅವರನ್ನು ಇನ್ನೂ ದೊಡ್ಡ ವೇದಿಕೆಗಳಿಗೆ ತಲುಪಲು ಮಾಡುವ ಯತ್ನದ ಬಗ್ಗೆಯೂ 'ಝುಂಡ್' ಸಿನಿಮಾ ಮಾತನಾಡುತ್ತದೆ. ಸಿನಿಮಾದ ಒಂದು ಕೊರತೆ ಎಂದರೆ ಮೊದಲಾರ್ಧದಲ್ಲಿ ಇದ್ದ ವೇಗ ಎರಡನೇ ಅರ್ಧಕ್ಕೆ ಕಡಿಮೆ ಆಗುತ್ತದೆ. ತುಸುವೇ ಎಳೆದಂತೆ ಅನಿಸುತ್ತದೆ. ಆದರೆ ಇದನ್ನು ಬೇಗನೆ ಮನಗಾಣುವ ನಾಗರಾಜ್ ಮಂಜುಳೆ ದ್ವಿತೀಯಾರ್ಧದಲ್ಲಿ ಕೆಲವು ಅತ್ಯುತ್ತಮ ಭಾವನಾತ್ಮಕ ದೃಶ್ಯಗಳು, ಸಂಭಾಷಣೆಗಳನ್ನು ಸೇರಿಸಿದ್ದಾರೆ. ವಿಮಾನ ನಿಲ್ದಾಣದ ದೃಶ್ಯವಂತೂ ಅದ್ಭುತದಲ್ಲಿ ಅದ್ಭುತ.
ಯಾರ ನಟನೆ ಹೇಗಿದೆ?
ಅಮಿತಾಬ್ ಬಚ್ಚನ್ ಅಂಥಹಾ ನಟನನ್ನು ನಾಗರಾಜ್ ಮಂಜುಳೆ 'ಹ್ಯಾಂಡಲ್' ಮಾಡಿರುವ ರೀತಿ ಅತ್ಯದ್ಭುತ. ಅಮಿತಾಬ್ ಬಚ್ಚನ್ ಪಾತ್ರಕ್ಕೆ 'ಲಾರ್ಜರ್ ದ್ಯಾನ್ ಲೈಫ್' ಸ್ಕೋಪ್ ನೀಡದೆ ಸಾಮಾನ್ಯ ವ್ಯಕ್ತಿಯಂತೆ ಅವರನ್ನು ಚಿತ್ರಿಸಲಾಗಿದೆ. 'ಝುಂಡ್' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ 'ದಿ ಗ್ರೇಟ್ ಅಮಿತಾಬ್ ಬಚ್ಚನ್' ಅಲ್ಲ ಬದಲಿಗೆ ನಿವೃತ್ತ ಶಿಕ್ಷಕ 'ವಿಜಯ್' ಅಷ್ಟೆ. ಇಡೀಯ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ಗೆ ಯಾವುದೇ 'ಹೀರೋಯಿಕ್' ದೃಶ್ಯಗಳು ಇಲ್ಲ. 'ನಾಯಕತನ' ಇಲ್ಲದ ಇಂಥಹಾ ಪಾತ್ರವನ್ನು ಒಪ್ಪಿಕೊಂಡು ಅದ್ಭುತವಾಗಿ ನಟಿಸಿರುವ ಬಚ್ಚನ್ ಖಂಡಿತ ಅಭಿನಂದನಾರ್ಹರು.
Valimai Movie Review In Kannada: ಕಥೆಯಲ್ಲ, ಬೈಕುಗಳದ್ದೇ ಅಬ್ಬರ
ಪಾತ್ರಗಳಿಗೆ ನಟರ ಆಯ್ಕೆ ಅದ್ಭುತ
'ಝುಂಡ್' ಸಿನಿಮಾದ ದೊಡ್ಡ ಶಕ್ತಿಯೆಂದರೆ ಅದರ ಪಾತ್ರಗಳು ಮತ್ತು ಪಾತ್ರಗಳಿಗೆ ಆಯ್ಕೆ ಮಾಡಲಿರುವ ನಟರು. ಅಮಿತಾಬ್ ಬಚ್ಚನ್ ಅಂಥಹಾ ನಟನೊಟ್ಟಿಗೆ ಪರದೆ ಹಂಚಿಕೊಳ್ಳುವಾಗಲೂ ಗಮನ ಸೆಳೆಯುವುದು ಬಹಳ ಕಷ್ಟ ಆದರೆ 'ಝುಂಡ್' ಸಿನಿಮಾದಲ್ಲಿ ನಟಿಸಿರುವ ಹುಡುಗರು, ಮಕ್ಕಳು ಅಮಿತಾಬ್ ಬಚ್ಚನ್ ಇದ್ದರೂ ತಮ್ಮ ಸಹಜ ನಟನೆಯಿಂದ ಗಮನ ಸೆಳೆಯುತ್ತಾರೆ. ಡಾನ್ ಪಾತ್ರದಲ್ಲಿ ನಟಿಸಿರುವ ಅಂಕುಶ್ ನಟನೆ ಸಿನಿಮಾದಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತದೆ. ಕಾರ್ತಿಕ್ ಒನ್ಲೈನರ್ಗಳು ಸೂಪರ್. ಬಾಬು ಚೆಟ್ರಿ, ಸೈಲಿ ಪಾಟೀಲ್, ರೆಹಾನಾ ಶೇಖ್, ಅರ್ಬಾಜ್ ಶೇಖ್, ಏಂಜಲ್ ಆಂಟೊನಿ ಇನ್ನೂ ಹಲವರು ಅದ್ಭುತವಾಗಿ ನಟಿಸಿದ್ದಾರೆ. 'ಸೈರಾಟ್' ಖ್ಯಾತಿಯ ರಿಂಕು ರಾಜ್ಗುರು ಹಾಗೂ ಆಕಾಶ್ ತೋಸರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಟನೆಯೂ ಅದ್ಭುತವಾಗಿದೆ. ನಟರ ಅದ್ಭುತ ನಟನೆ, ನಾಗರಾಜ್ ಮಂಜುಳೆಯ ಅದ್ಭುತ ನಿರ್ದೇಶನದ ನಡುವೆಯೂ ಸುಧಾಕರ್ ರೆಡ್ಡಿ ಯಕ್ಕಂತಿಯವರ ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ. ಅಜಯ್ ಅತುಲ್ ಸಂಗೀತವೂ ಅದ್ಭುತವಾಗಿದೆ ಹಲವು ನೆನಪುಳಿಯುವ ಹಾಡುಗಳನ್ನು ಅವರು ನೀಡಿದ್ದಾರೆ. 'ಲಫ್ಡಾ ಜಾಲಾ' ಮೂಲಕ ಮತ್ತೊಂದು 'ಝಿಂಗಾಟ್' ರೀತಿಯ ಹಾಡು ನೀಡಲು ಯತ್ನಿಸಿದ್ದಾರೆ ಆದರೆ ಅದರಲ್ಲಿ ಯಶಸ್ವಿಯಾಗಿಲ್ಲ.
ಕೊನೆಯ ಮಾತು
ಸಿನಿಮಾದಲ್ಲಿ ಒಂದು ದೃಶ್ಯವಿದೆ. ಎಲ್ಲ ಸ್ಲಂ ಹುಡುಗರು ತಮ್ಮ ಜೀವನದ ಬಗ್ಗೆ ವಿಜಯ್ (ಅಮಿತಾಬ್ ಬಚ್ಚನ್) ಬಳಿ ಹೇಳಿಕೊಳ್ಳುತ್ತಿರುತ್ತಾರೆ ಆ ದೃಶ್ಯ ಬಹಳ ಭಾವುಕವಾಗಿದೆ. ದೃಶ್ಯದ ನಡುವಲ್ಲಿ ಸ್ಲಂನ ಸಣ್ಣ ಬಾಲಕನೊಬ್ಬ ಅಮಾಯಕತೆಯಿಂದ ''ಭಾರತ ಅಂದರೆ ಏನು?'' ಎಂದು ಪಿಸು ಮಾತಿನಲ್ಲಿ ಪ್ರಶ್ನೆ ಮಾಡುತ್ತಾನೆ. ಆ ಭಾವುಕ ದೃಶ್ಯದ ನಡುವೆ ಆ ಹುಡುಗನ ಆ ಮಾತು ಅಷ್ಟೇ ಭಾರವಾದ ಆದರೆ ಸಣ್ಣ ನೋವಿನಿಂದ ಕೂಡಿದ ನಗುವೊಂದನ್ನು ಮೂಡಿಸುತ್ತದೆ. ನಾಗರಾಜ್ ಮಂಜುಳೆಯ ಧ್ವನಿಯನ್ನು ಎಲ್ಲರೂ ಕೇಳಬೇಕಿದೆ.