ಗಲಾಟೆ:ಕುಟುಂಬ ಸಮೇತ ನೋಡಬಹುದಾದ ಸುಂದರ ಚಿತ್ರ
ಮೇನ್ ಥಿಯೇಟರ್ ಅನುಪಮ ಸೇರಿ ರಾಜ್ಯದ ಸುಮಾರು 117 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಾಗರ್ ಚಿತ್ರದ ನಂತರ ನಿರ್ದೇಶಕ ಎಂ ಡಿ ಶ್ರೀಧರ್ ಮತ್ತು ನಟ ಪ್ರಜ್ವಲ್ ದೇವರಾಜ್ ಜೋಡಿಯ ಎರಡನೇ ಚಿತ್ರವಿದು. ಮೊದಲ ಚಿತ್ರಕ್ಕೆ ಹೋಲಿಸಿದರೆ ಉತ್ತಮ ತ್ರಿಕೋಣ ಪ್ರೇಮ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇಡೀ ಚಿತ್ರದಲ್ಲಿ ಪ್ರೇಕ್ಷಕನನ್ನು ಬಿಗಿಯಾಗಿ ಸೀಟಿನಲ್ಲಿ ಕೂರಿಸುವಂಥಹ ಕಥೆ ಇಲ್ಲದಿದ್ದರೂ, ನಿರೂಪಣೆ ಮಾತ್ರ ಬಲವಾಗಿದೆ. ಅಭಿ (ಪ್ರಜ್ವಲ್), ಅಂಕಿತ (ಕೀರ್ತಿ ಕರಬಂದ) ಮತ್ತು ಶಾಲಿನಿ (ಹಾರ್ದಿಕ ಶೆಟ್ಟಿ) ಮೂವರ ನಡುವಣ ತ್ರಿಕೋಣ ಪ್ರೆಮಕಥೆಯೇ ಚಿತ್ರದ ಕಥಾಹಂದರ.
ಅಭಿಯನ್ನು ಪ್ರೀತಿಸುವ ಅಂಕಿತ, ಶಾಲಿಯನ್ನು ಪ್ರೀತಿಸುವ ಅಭಿಯ ನಡುವೆ ಅಂತಿಮವಾಗಿ ನಾಯಕನ ಜಾಲಿ ರೈಡ್ ಯಾರ ಜೊತೆ, ಪ್ರೇಮಪತ್ರ ಸಾರುವ ಸಂದೇಶವೇನು ಅನ್ನೋದೇ ಚಿತ್ರದ ಸಸ್ಪೆನ್ಸ್. ಒಂದು ಸಿಂಪಲ್ ಕಥೆಗೆ ಹಾಸ್ಯ, ಚಿತ್ರಕಥೆ, ಸಾಹಸ, ಸಂಭಾಷಣೆ, ಉತ್ತಮವಾದ ಸಂಗೀತ ಬೆರೆಸಿದರೆ ಅದೊಂದು ಉತ್ತಮ ಚಿತ್ರವಾಗುತ್ತೆ ಅನ್ನೋ ನಿರ್ದೇಶಕರ ಲೆಕ್ಕಾಚಾರ ಚಿತ್ರದಲ್ಲಿ ಸರಿಯಾಗಿ ವರ್ಕೌಟ್ ಆಗಿದೆ.
ಚಿತ್ರದಲ್ಲಿ ಮೈನಸ್ ಪಾಯಿಂಟ್ ಇಲ್ಲವೆಂದಲ್ಲ. ಅನಾವಶ್ಯಕವಾಗಿ ತೂರಿಬರುವ ಹಾಡುಗಳು, ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬಹುದಿತ್ತು.
ನಾಯಕ ಮತ್ತು ನಾಯಕಿ ಪಾತ್ರಕ್ಕಿಂತ ಹೆಚ್ಚಾಗಿ ನಿರ್ದೇಶಕರು ಪೋಷಕ ಪಾತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ತಾರಾ, ಶೋಭರಾಜ್, ಶಶಿಕುಮಾರ್, ಶರಣ್, ಕಿಶೋರಿ ಬಲ್ಲಾಳ್, ಸುಮನ್ ರಂಗನಾಥ್ ಮುಂತಾದವರದ್ದು ಚಿತ್ರದುದ್ದಕ್ಕೂ ಲವಲವಿಕೆಯ ನಟನೆ.
ನಟನೆಯಲ್ಲಿ ಪ್ರಜ್ವಲ್ ದೇವರಾಜ್ ಗೆ ಫುಲ್ ಮಾರ್ಕ್, ಆಕ್ಷ್ಯನ್ ದೃಶ್ಯದಲ್ಲಿ ಇನ್ನೂ ಸ್ವಲ್ಪ ಜಾಸ್ತಿ ಮಾರ್ಕ್. ಕೀರ್ತಿ ಕರಬಂದ ನಟನೆ ಬಗ್ಗೆ ದೂಸ್ರಾ ಮಾತಿಲ್ಲ, ಹಾರ್ದಿಕ ಶೆಟ್ಟಿ ಗ್ಲಾಮರಸ್ ಲುಕ್ ಅವರ ಕ್ಯಾರಿಯರ್ ಗೆ ಈ ಚಿತ್ರ ಭದ್ರ ಬುನಾದಿಯಾಗಬಹುದು.
ರವಿವರ್ಮ ಸಾಹಸ, ಕೃಷ್ಣಕುಮಾರ್ ಛಾಯಾಗ್ರಾಹಣ ಮತ್ತು ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರದ ಪ್ರಮುಖ ಹೈಲೈಟ್ಸ್.
ಸಿಂಪಲ್ ಕಥೆಗೆ ಲಘು ಹಾಸ್ಯ ಸನ್ನಿವೇಶಗಳನ್ನು ಬೆರೆಸಿ ಒಂದು ನವಿರಾದ ಪ್ರೇಮಕಥೆಯನ್ನು ಕುಟುಂಬ ಸಮೇತ ನೋಡಲು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಎಂ ಡಿ ಶ್ರೀಧರ್. It's worth watching.


Click it and Unblock the Notifications











