ಪೋಷಕರಿಗೆ ಕಿರುಕುಳ ನೀಡಿದ್ದಾರೆ: ಸಿಆರ್ಪಿಎಫ್ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ
ನನ್ನ ಪೋಷಕರ ಮೇಲೆ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಬಹುಭಾಷಾ ನಟ ಸಿದ್ಧಾರ್ಥ್ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿರುವ ಸಿದ್ಧಾರ್ಥ್, ''ಖಾಲಿ ಇದ್ದ ಮಧುರೈ ವಿಮಾನ ನಿಲ್ದಾಣದಲ್ಲಿ ಸಿಆರ್ಪಿಎಫ್ ಯೋಧರು ಸತತ 20 ನಿಮಿಷಗಳ ಕಾಲ ನನ್ನ ಪೋಷಕರಿಗೆ ಕಿರುಕುಳ ನೀಡಿದ್ದಾರೆ. ನನ್ನ ಪೋಷಕರ ಬ್ಯಾಗಿನಿಂದ ಎಲ್ಲ ನಾಣ್ಯಗಳನ್ನು ಎತ್ತಿಡುವಂತೆ ಹೇಳಿದರು. ಸತತವಾಗಿ ಹಿಂದಿಯಲ್ಲಿಯೇ ಮಾತನಾಡಿದರು. ಇಂಗ್ಲೀಷ್ನಲ್ಲಿಯಾದರೂ ವ್ಯವಹರಿಸಿ ಎಂದು ಕೇಳಿದರೂ ಅವರು ಕೇಳಲಿಲ್ಲ'' ಎಂದು ಬರೆದುಕೊಂಡಿದ್ದಾರೆ ಸಿದ್ಧಾರ್ಥ್.
''ಬಹಳ ಒರಟಾಗಿ ವರ್ತಿಸಿದರು. ನಾವು ಅವರನ್ನು ಪ್ರಶ್ನಿಸಿದಾಗ, ಇದು ಭಾರತ ಇಲ್ಲಿ ಹೀಗೆಯೇ ನಡೆಯುತ್ತದೆ ಎಂದು ಉತ್ತರಿಸಿದರು. ಕೆಲಸವಿಲ್ಲದ ಜನ ತಮ್ಮ 'ಪವರ್' ಅನ್ನು ಹೀಗೆ ತೋರಿಸುತ್ತಿದ್ದಾರೆ'' ಎಂದು ಸಿದ್ಧಾರ್ಥ್ ಬರೆದುಕೊಂಡಿದ್ದಾರೆ.

ಸಿದ್ಧಾರ್ಥ್ ಆಗಾಗ್ಗೆ ತಮ್ಮ ವಿವಾದಾತ್ಮಕ ಪೋಸ್ಟ್ಗಳಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸಿಆರ್ಪಿಎಫ್ ಯೋಧರ ಬಗ್ಗೆ ಪೋಸ್ಟ್ ಹಾಕಿರುವ ಕಾರಣ ಈ ಬಾರಿಯೂ ದೊಡ್ಡ ಮಟ್ಟದ ವಿರೋಧಕ್ಕೆ ಸಿದ್ಧಾರ್ಥ್ ಒಳಪಡುವುದು ಪಕ್ಕಾ.
ಬಿಜೆಪಿ ವಿರೋಧಿ ಪೋಸ್ಟ್ಗಳ ಮೂಲಕ ಈಗಾಗಲೇ ದೊಡ್ಡ ಮಟ್ಟದ ವಿರೋಧವನ್ನು ಸಿದ್ಧಾರ್ಥ್ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿದ್ದಾರೆ. ಹಿಂದೊಮ್ಮೆ, ಬಲಪಂಥೀಯರು, ಬಿಜೆಪಿ ಬೆಂಬಲಿಗರು ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಸಿದ್ಧಾರ್ಥ್ ಆರೋಪ ಮಾಡಿದ್ದರು. ಅದಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ರಿಗೆ ದ್ವಂದ್ವಾರ್ಥದ ಜೋಕ್ ಬರೆದು ಟೀಕೆಗೆ ಗುರಿಯಾಗಿ ಬಳಿಕ ಕ್ಷಮೆ ಕೋರಿದ್ದರು.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಸಿದ್ಧಾರ್ಥ್ ನಟನೆಯ 'ಮಹಾ ಸಮುದ್ರಮ್' ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಪ್ಲಾಫ್ ಆಗಿತ್ತು. ಈ ವರ್ಷ 'ಎಸ್ಕೇಪ್ ಲೈವ್' ವೆಬ್ ಸರಣಿಯಲ್ಲಿ ಕನ್ನಡಿಗನ ಪಾತ್ರದಲ್ಲಿ ನಟಿಸಿದ್ದರು. ಇದೀಗ ಶಂಕರ್ ನಿರ್ದೇಶನದ 'ಇಂಡಿಯನ್ 2' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪ್ರಾರಂಭವಾಗಿದೆ.


Click it and Unblock the Notifications











