ಲಕ್ಷಾಂತರ ಹಣ ವಂಚನೆ, ಬೆದರಿಕೆ: ದೂರು ದಾಖಲಿಸಿದ ನಟಿ ಸ್ನೇಹಾ
ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಸ್ನೇಹಾ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚೆನ್ನೈನ ಕಾಣತ್ತೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ನಟಿ ಸ್ನೇಹಾ ಇಬ್ಬರು ಉದ್ಯಮಿಗಳಿಂದ ತನಗೆ ಮೋಸವಾಗಿದೆ. ಲಕ್ಷಾಂತರ ಹಣವನ್ನು ಉದ್ಯಮಿಗಳಿಬ್ಬರು ನನಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಬ್ಬರು ಉದ್ಯಮಿಗಳು, ತಮ್ಮ ಎಕ್ಸ್ಪೋರ್ಟ್ ಉದ್ಯಮದಲ್ಲಿ ಹಣ ತೊಡಗಿಸುವಂತೆ ನನ್ನಲ್ಲಿ ಮನವಿ ಮಾಡಿದರು. ಆಕರ್ಷಕ ಮೊತ್ತದ ಲಾಭವನ್ನು ನೀಡುವುದಾಗಿ ಹೇಳಿದರು. ಅಂತೆಯೇ ನಾನು ನನ್ನ ಉಳಿತಾಯದ 26 ಲಕ್ಷ ಹಣವನ್ನು ತೊಡಗಿಸಿದೆ. ಆದರೆ ಆ ಉದ್ಯಮಿಗಳು ಈವರೆಗೆ ಲಾಭವನ್ನು ನೀಡಿಲ್ಲ, ಬಡ್ಡಿಯನ್ನು ನೀಡಿಲ್ಲ. ನನ್ನ ಬಂಡವಾಳದ ಹಣ ಹಿಂತಿರುಗಿಸುವಂತೆ ಕೇಳಿದ್ದು, ನನಗೆ ಬೆದರಿಕೆ ಹಾಕಿದ್ದಾರೆ ಎಂದು ಸ್ನೇಹ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚೆನ್ನೈನ ಕಾಣತ್ತೂರು ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2000 ರಲ್ಲಿ ಮಲಯಾಳಂ ಸಿನಿಮಾ ಮೂಲಕ ನಟನೆ ಆರಂಭಿಸಿದ ಸ್ನೇಹ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ 'ರವಿಶಾಸ್ತ್ರಿ', 'ಒಗ್ಗರಣೆ' ಹಾಗೂ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2012 ರಲ್ಲಿಯೇ ಸಹ ನಟ ಪ್ರಸನ್ನ ಅವರನ್ನು ವಿವಾಹವಾದ ಸ್ನೇಹಾಗೆ ಹೆಣ್ಣು ಮಗುವೊಂದಿದೆ. ಇತ್ತೀಚೆಗೆ ನಟನೆ ಕಡಿಮೆ ಮಾಡಿರುವ ಸ್ನೇಹಾ ಕೊನೆಯದಾಗಿ 2020 ರಲ್ಲಿ ಬಿಡುಗಡೆ ಆದ ಧನುಷ್ ನಟನೆಯ 'ಪಟಾಸ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ 'ಶಾಟ್ ಬೂತ್ 3' ಹೆಸರಿನ ಮಕ್ಕಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಟಿಯರು ಉದ್ಯಮಕ್ಕೆ ಹಣ ತೊಡಗಿಸಿ ಮೋಸ ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೆ ನಟಿ ಸಂಜನಾ ಗಲ್ರಾನಿ ಸಹ ಇದೇ ರೀತಿಯ ಆರೋಪ ಮಾಡಿದ್ದರು. ತಮ್ಮ ಗೆಳೆಯ ಆಗಿದ್ದ ರಾಹುಲ್ ಥೋನ್ಸೆ ವಿರುದ್ಧವೇ ಸಂಜನಾ ದೂರು ದಾಖಲಿಸಿದ್ದರು.

ಗೋವಾ ಹಾಗೂ ಕೊಲಂಬೊಗಳಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ರಾಹುಲ್ ಥೋನ್ಸೆ ಸಂಜನಾರ ಗೆಳೆತನ ಸಂಪಾದಿಸಿದ್ದ. ಕ್ಯಾಸಿನೋಗಳಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭವಾಗುತ್ತದೆ ಎಂದು ಹೇಳಿ ಸಂಜನಾರಿಂದ ಮೂರು ವರ್ಷಗಳ ಹಿಂದೆ ಹಣ ಪಡೆದಿದ್ದ. ಆ ಸಮಯದಲ್ಲಿ ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ರಾಗೇಶ್ವರಿ ಎಂಬುವರ ಖಾತೆಗಳಿಗೆ ಸಂಜನಾ ಹಣ ಹಾಕಿದ್ದರು. ಹೂಡಿಕೆಯ ಲಾಭಾಂಶ ನೀಡದ ರಾಹುಲ್ ಥೋನ್ಸೆ, ನೀಡಿದ್ದ ಹಣವನ್ನೂ ವಾಪಸ್ ನೀಡುತ್ತಿಲ್ಲ. ನನ್ನ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಹುಲ್ ಥೋನ್ಸೆ ಬಳಸಿಕೊಂಡಿದ್ದಾರೆ. ಆ ಮೂಲಕ ನನ್ನ ಘನತೆಗೆ ಪೆಟ್ಟುಕೊಟ್ಟಿದ್ದಾರೆ ಎಂದು ಸಂಜನಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು ಸಂಜನಾ.


Click it and Unblock the Notifications











