'ವಾರಿಸು' ಒಂದು ಧಾರಾವಾಹಿ, ಹಲವು ಚಿತ್ರಗಳ ಮಿಶ್ರಿತ ಚಿತ್ರಾನ್ನ; ಟ್ರೋಲ್ಗೆ ಕಿಡಿಕಾರಿದ ನಿರ್ದೇಶಕ!
ವಿಜಯ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ವಾರಿಸು ಚಿತ್ರ ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಇದೇ ಜನವರಿ 11ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನವೇ ವಿಶ್ವದಾದ್ಯಂತ 42 ಕೋಟಿ ಗಳಿಕೆ ಮಾಡಿ ಉತ್ತಮ ಆರಂಭ ಪಡೆದುಕೊಂಡಿದ್ದ ವಾರಿಸು ಮೂರು ದಿನಗಳಲ್ಲಿ 100 ಕೋಟಿ ಹಾಗೂ ಏಳು ದಿನಗಳಲ್ಲಿ 200 ಕೋಟಿ ಗಳಿಸಿ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದೆ.
ಇನ್ನು ಸ್ಟಾರ್ ನಟ ಅಜಿತ್ ಕುಮಾರ್ ನಟನೆಯ ಚಿತ್ರದ ಎದುರು ಬಿಡುಗಡೆಗೊಂಡು ಪೈಪೋಟಿಯ ನಡುವೆಯೂ ಇಷ್ಟೆಲ್ಲಾ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿರುವ ವಾರಿಸು ಚಿತ್ರ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯಾದ ನಂತರವೂ ಸಹ ದೊಡ್ಡ ಮಟ್ಟದ ಟ್ರೋಲ್ಗೆ ಒಳಗಾಗಿದೆ. ಹೌದು, ವಾರಿಸು ಚಿತ್ರದ ಒಂದೊಂದು ಪೋಸ್ಟರ್ ಹಾಗೂ ಚಿತ್ರೀಕರಣದ ಫೋಟೊ ಬಿಡುಗಡೆಯಾದಾಗಲೂ ಇದು ಬೇರೆ ಚಿತ್ರದ ಕಾಪಿ ಎಂದು ಟ್ರೋಲ್ ಮಾಡಲಾಗಿತ್ತು.
ಅಷ್ಟೇ ಅಲ್ಲದೇ ಚಿತ್ರದ ಟ್ರೈಲರ್ ಹಾಗೂ ಚಿತ್ರದ ಕತೆಯೂ ಸಹ ಟ್ರೋಲ್ಗಳಿಗೆ ಒಳಗಾಗಿತ್ತು. ಹೀಗೆ ಸಿಕ್ಕಾಪಟ್ಟೆ ಟ್ರೋಲ್ ಆದರೂ ಸಹ ಇದರ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಸಹ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ತಮಿಳಿನ ಚಾನೆಲ್ ಒಂದು ನಡೆಸಿದ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಟ್ರೋಲ್ಗಳ ವಿರುದ್ಧ ಕಿಡಿಕಾರಿದ್ದಾರೆ.

ವಾರಿಸು ಒಂದು ಧಾರಾವಾಹಿ, ಮಿಶ್ರಿತ ಚಿತ್ರಾನ್ನ!
ಇನ್ನು ನಿರ್ದೇಶಕ ವಂಶಿ ಪೈಡಿಪಲ್ಲಿ ಮೂಲತಃ ತೆಲುಗಿನವರಾಗಿದ್ದು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಈ ಹಿಂದೆ ಈ ರೀತಿಯ ಹಲವು ತೆಲುಗು ಚಿತ್ರಗಳು ಬಂದುಹೋಗಿವೆ ಎಂದು ಪ್ರತಿಯೊಬ್ಬ ಸಿನಿ ರಸಿಕನಿಗೂ ಎನಿಸಿತ್ತು. ಅದಕ್ಕಾಗಿಯೇ ನೆಟ್ಟಿಗರು ವಾರಿಸು ಹಲವು ಚಿತ್ರಗಳ ಮಿಶ್ರಿತ ಚಿತ್ರಾನ್ನ ಎಂದು ಟ್ರೋಲ್ ಮಾಡಿದ್ದರು. ಅಷ್ಟೇ ಅಲ್ಲದೇ ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಕಥೆ ಸಿಕ್ಕಾಪಟ್ಟೆ ಸ್ಲೋ ಇದೆ, ಧಾರಾವಾಹಿ ರೀತಿಯ ಸಂಭಾಷಣೆ, ಕಥೆ ಇದೆ ಎಂದೆಲ್ಲಾ ಟ್ರೋಲ್ಗಳೂ ಸಹ ಆದವು.

ಧಾರಾವಾಹಿ ಎಂದವರ ವಿರುದ್ಧ ವಂಶಿ ಕಿಡಿ
ಇನ್ನು ವಾರಿಸು ಚಿತ್ರ ಧಾರಾವಾಹಿ ರೀತಿ ಇದೆ ಎಂದು ಟ್ರೋಲ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಎದುರಾದ ಕೂಡಲೇ ನಿರ್ದೇಶಕ ವಂಶಿ ಪೈಡಿಪಲ್ಲಿ ಸಂದರ್ಶನದಲ್ಲೇ ಕಿಡಿಕಾರಿದ್ದಾರೆ. ಧಾರಾವಾಹಿಗಳನ್ನು ಯಾಕೆ ಕಳಪೆಯಾಗಿ ನೋಡುತ್ತಿದ್ದೀರ, ನಿಮ್ಮ ಮನೆಗಳಿಗೆ ಹೋಗಿ ನೋಡಿ ನಿಮ್ಮ ಚಿಕ್ಕಪ್ಪ, ಚಿಕ್ಕಮ್ಮಂದಿರೆಲ್ಲಾ ಪ್ರತಿದಿನ ಧಾರಾವಾಹಿಗಳನ್ನು ಮನರಂಜನೆಗಾಗಿ ನೋಡುತ್ತಿದ್ದಾರೆ, ಧಾರಾವಾಹಿ ಮಾಡುವುದು ಸುಲಭದ ಮಾತಲ್ಲ, ಅದೊಂದು ಕ್ರಿಯೇಟಿವ್ ಜಾಬ್, ನಮ್ಮದೂ ಸಹ ಕ್ರಿಯೇಟಿವ್ ಜಾಬ್, ಯಾರನ್ನೂ ಸಹ ಕಳಪೆಯಾಗಿ ನೋಡಬೇಡಿ ಎಂದು ವಂಶಿ ಪೈಡಿಪಲ್ಲಿ ಹೇಳಿಕೆ ನೀಡಿದರು.

ಚಿತ್ರ ಮಾಡುವುದು ಎಷ್ಟು ಕಷ್ಟ ಗೊತ್ತಾ?
ಇನ್ನು ಚಿತ್ರವೊಂದರ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಬೇಸರ ಹೊರಹಾಕಿರುವ ವಂಶಿ ಪೈಡಿಪಲ್ಲಿ ಚಿತ್ರವೊಂದನ್ನು ತಯಾರಿಸುವುದು ಎಷ್ಟು ಕಷ್ಟ ಗೊತ್ತಾ, ಚಿತ್ರತಂಡ ಜನರಿಗೆ ಮನರಂಜನೆ ನೀಡಲು ಎಷ್ಟು ಕಷ್ಟುಪಟ್ಟು ಕೆಲಸ ಮಾಡುತ್ತೆ ಗೊತ್ತಾ, ಭಾರತದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾದ ವಿಜಯ್ ಎಷ್ಟು ಕಷ್ಟಪಟ್ಟು ತಯಾರಿ ನಡೆಸುತ್ತಾರೆ ಗೊತ್ತಾ ಎಂದು ಟ್ರೋಲಿಗರಿಗೆ ಪ್ರಶ್ನೆ ಎಸೆದಿದ್ದಾರೆ.

ನಾನು ವಿಮರ್ಶಕರಿಗಾಗಿ ಚಿತ್ರ ಮಾಡುವವನಲ್ಲ!
ಇನ್ನೂ ಮುಂದುವರಿದು ಮಾತನಾಡಿದ ವಂಶಿ ಪೈಡಿಪಲ್ಲಿ ತಾನು ವಿಮರ್ಶಕರನ್ನು ಗೌರವಿಸುತ್ತೇನೆ, ಆದರೆ ಅವರಿಗೋಸ್ಕರ ಚಿತ್ರ ಮಾಡುವುದಿಲ್ಲ ಎಂದಿದ್ದಾರೆ. ವಾರಿಸು ಮಧ್ಯರಾತ್ರಿ ಪ್ರದರ್ಶನವನ್ನು ವೀಕ್ಷಿಸಲು ನಮ್ಮ ತಂಡ ಚಿತ್ರಮಂದಿರಕ್ಕೆ ತೆರಳಿದ್ದೆವು, ಚಿತ್ರ ಮುಗಿದು ಕೊನೆಗೆ 'ಎ ಫಿಲ್ಮ್ ಬೈ ವಂಶಿ ಪೈಡಿಪಲ್ಲಿ ಅಂಡ್ ಟೀಮ್' ಎಂದು ಪರದೆ ಮೇಲೆ ಬಂದಾಗ ವೀಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು ಎಂದ ವಂಶಿ ಪೈಡಿಪಲ್ಲಿ ನಾನು ಚಿತ್ರ ಮಾಡುವುದು ಇಂತಹ ವೀಕ್ಷಕರಿಗೋಸ್ಕರ ಎಂದರು ಹಾಗೂ ನನ್ನ ಕಥೆಯನ್ನು ಕೇಳಿ ಚೆನ್ನಾಗಿದೆ ಎಂದು ಒಪ್ಪಿಕೊಂಡ ವಿಜಯ್ ನನ್ನ ವಿಮರ್ಶಕ ಎಂದು ವಂಸಿ ತಿಳಿಸಿದರು.


Click it and Unblock the Notifications











