ನನ್ನ ಮಾತು ಕೇಳಲಿಲ್ಲ ನೀನು: ಎಸ್ಪಿಬಿ ನೆನೆದು ಭಾವುಕರಾದ ಇಳಯರಾಜ
ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಅವರದ್ದು ಆರು ದಶಕದ ಗೆಳೆತನ. ಇಬ್ಬರೂ ಒಟ್ಟಿಗೆ ಸಿನಿ ಪಯಣ ಆರಂಭಿಸಿದವರು, ಅದಕ್ಕೆ ಮುಂಚೆ ಸಹ ಇಬ್ಬರೂ ಒಟ್ಟಿಗೆ ಇದ್ದವರು.
ಇಂದು ಎಸ್ಪಿಬಿ ಅಗಲಿದ ಸಮಯದಲ್ಲಿ ತಮ್ಮ ಆತ್ಮೀಯ ಗೆಳೆಯನಿಗೆ ಭಾವುಕ ವಿದಾಯ ಹೇಳಿದ್ದಾರೆ ಇಳಯರಾಜ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಇಳಯರಾಜ ತಮ್ಮ ಹಳೆಯ ಗೆಳೆಯನಿಗೆ ಭಾವಪೂರ್ಣ ವಿದಾಯ ತಿಳಿಸಿದ್ದಾರೆ.
'ನಿನ್ನನ್ನು ನೋಡುವ ಮನಸ್ಸಾಗಿದೆ ಬೇಗನೆ ಬಾ ಎಂದು ನಾನು ಮನವಿ ಮಾಡಿದ್ದೆ. ನನ್ನ ಮಾತು ಕೇಳಲಿಲ್ಲ, ನೀನು ಕೇಳಲಿಲ್ಲ' ಎಂದು ಭಾವುಕಗೊಂಡಿದ್ದಾರೆ ಇಳಯರಾಜ.

'ಗಂಧರ್ವ ಲೋಕದಲ್ಲಿ ಹಾಡಲು ಹೊರಟುಹೋದೆಯಾ?' ಎಂದು ಪ್ರಶ್ನಿಸಿರುವ ಇಳಯರಾಜ. ನನಗೆ ಈ ಭೂಮಿಯ ಮೇಲೆ ಏನೂ ಉಳಿದಿಲ್ಲ. ಹೇಳಲು ಮಾತುಗಳಲಿಲ್ಲ, ಮಾತನಾಡಲು ವಿಷಯಗಳಿಲ್ಲ' ಎಂದಿದ್ದಾರೆ ಇಳಯರಾಜ.
ಎಸ್ಪಿಬಿ ಸಿನಿಮಾದಲ್ಲಿ ಹಾಡಲು ಪ್ರಾರಂಭಿಸುವ ಮುನ್ನಾ 1960 ದಶಕದಲ್ಲಿ ಸಂಗೀತ ತಂಡವೊಂದನ್ನು ಕಟ್ಟಿದ್ದರು, ಅದರಲ್ಲಿ ಇಳಯರಾಜ ಗಿಟಾರ್ ಮತ್ತು ಹಾರ್ಮೊನಿಯಂ ನುಡಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾಗಳಲ್ಲಿ ಅವಕಾಶ ಹುಡುಕುತ್ತಿದ್ದರು.
ಎಸ್ಪಿಬಿ ಹಾಡುಗಾರರಾದರೆ ಇಳಯರಾಜ ಸಂಗೀತ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದರು. ಇಬ್ಬರೂ ಬಹುಕಾಲದ ವರೆಗೆ ಆತ್ಮೀಯ ಗೆಳೆಯರಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಸಣ್ಣ ಮನಸ್ತಾಪ ಏರ್ಪಟ್ಟಿತ್ತಾದರೂ ಮತ್ತೆ ಇಬ್ಬರೂ ಒಂದಾದರು. ಅವರ ಮನಸ್ತಾಪ ಆರು ತಿಂಗಳು ಸಹ ಇರಲಿಲ್ಲ.


Click it and Unblock the Notifications











