ಚಿತ್ರಮಂದಿರ ನಿಯಮ ಸಡಿಲಿಕೆ: ಕೂಡಲೇ ಆದೇಶ ಹಿಂಪಡೆಯಿರಿ ಎಂದ ಕೇಂದ್ರ
ಕೊರೊನಾ ಕಾರಣದಿಂದ ಚಿತ್ರಮಂದಿರಗಳ ಮೇಲೆ ವಿಧಿಸಲಾಗಿದ್ದ ನಿಯಮವಾಳಿಗಳಲ್ಲಿ ಕೆಲವು ಸಡಿಲಿಕೆ ಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಕೇಂದ್ರದ ಗೃಹ ಇಲಾಖೆ ಆಕ್ಷೇಪಣೆ ಎತ್ತಿದೆ.
ಚಿತ್ರಮಂದಿರಗಳಲ್ಲಿ ಕೇವಲ 50% ಸೀಟುಗಳಷ್ಟೆ ಭರ್ತಿ ಮಾಡಿ ಸಿನಿಮಾ ಪ್ರದರ್ಶಿಸಬೇಕು ಎಂಬ ನಿಯಮ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಇದೆ. ಆದರೆ ತಮಿಳುನಾಡು ಸರ್ಕಾರವು, ಚಿತ್ರಮಂದಿರಗಳು 100% ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬಹುದು ಎಂಬ ನಿಯಮವನ್ನು ಕೆಲವು ದಿನಗಳ ಹಿಂದಷ್ಟೆ ಹೊರಡಿಸಿದೆ.
ಆದರೆ ಇದಕ್ಕೆ ಆಕ್ಷೇಪಿಸಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ ಅವರು ತಮಿಳುನಾಡು ಮುಖ್ಯ ಕಾರ್ಯದರ್ಶಿ ಕೆ ಷಣ್ಮುಗನ್ ಅವರಿಗೆ ಪತ್ರ ಬರೆದಿದ್ದು, 'ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಿರುವ ತಮಿಳುನಾಡು ಸರ್ಕಾರದ ಆದೇಶವು ಕೇಂದ್ರ ಗೃಹ ಇಲಾಖೆಯ ಡಿಸೆಂಬರ್ 28 ರ ಆದೇಶದ ಉಲ್ಲಂಘನೆಯಾಗಿದೆ' ಎಂದು ಹೇಳಿದ್ದಾರೆ.
Recommended Video

ಶಿಸ್ತಿನಿಂದ ಪಾಲನೆ ಮಾಡಬೇಕು: ಗೃಹ ಇಲಾಖೆ ತಾಕೀತು
'ವಿಪತ್ತು ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಈ ಆದೇಶಗಳನ್ನು ಗೃಹ ಇಲಾಖೆಯು ಹೊರಡಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದ ನಿಯಮಗಳನ್ನು ದುರ್ಬಲಗೊಳಿಸಬಾರದು. ಬದಲಾಗಿ ಅವುಗಳನ್ನು ಶಿಸ್ತಿನಿಂದ ಪಾಲನೆ ಮಾಡಬೇಕು' ಎಂದು ಪತ್ರದಲ್ಲಿ ತಾಕೀತು ಮಾಡಲಾಗಿದೆ.

ಸುಪ್ರೀಂಕೋರ್ಟ್ ಆದೇಶ ನೆನಪಿಸಿದ ಗೃಹ ಇಲಾಖೆ ಕಾರ್ಯದರ್ಶಿ
ವಿಪತ್ತು ನಿರ್ವಹಣೆ ಕಾಯ್ದೆಯ ಅಡಿ ಕೇಂದ್ರ ಹೊರಡಿಸಿರುವ ಆದೇಶಗಳನ್ನು ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳು ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಸಹ ಹೇಳಿದೆ ಎಂದು ಉಲ್ಲೇಖಿಸಿದ್ದಾರೆ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ.

ಕೂಡಲೇ ಹೊಸ ಆದೇಶ ಹೊರಡಿಸಿ ಎಂದ ಕೇಂದ್ರ ಗೃಹ ಇಲಾಖೆ
'ಈ ಕೂಡಲೇ ತಮಿಳುನಾಡು ಸರ್ಕಾರವು ತನ್ನ ಆದೇಶವನ್ನು ಹಿಂಪಡೆದು, ಕೇಂದ್ರದ ನಿಯಮವಾಳಿಗಳು ಜಾರಿಯಾಗುವಂತೆ ಪುನರ್ಆದೇಶ ಹೊರಡಿಸಿ, ಅದರ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನಟ ವಿಜಯ್ ಮನವಿ ಮಾಡಿದ್ದರು
ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ನಟ ವಿಜಯ್ ಕೆಲವು ದಿನಗಳ ಹಿಂದಷ್ಟೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು 100% ಪ್ರೇಕ್ಷಕರಿಗೆ ಅವಕಾಶ ಮಾಡಿ ಆದೇಶ ಹೊರಡಿಸಿತ್ತು. ವಿಜಯ್ ನಟನೆಯ ಮಾಸ್ಟರ್ ಸಿನಿಮಾವು ಜನವರಿ 12 ರಂದು ತೆರೆಗೆ ಬರುತ್ತಿದೆ.


Click it and Unblock the Notifications











