ವಿಜಯ್ ಸೇತುಪತಿ ಬೆಂಬಲಕ್ಕೆ ನಿಂತ ರಾಧಿಕಾ: ಅವರು ಕೇಳಿದ್ರಲ್ಲಿ ಲಾಜಿಕ್ ಇದೆ!
ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ಸಿನಿಮಾ ಘೋಷಣೆ ಆದ ಕ್ಷಣದಿಂದ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇದೆ. ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ನಟಿಸಬಾರದು ಎಂದು ಕೆಲವು ಖಂಡಿಸುತ್ತಿದ್ದಾರೆ.
ಶ್ರೀಲಂಕಾ ಸರ್ಕಾರ ತಮಿಳರ ಮೇಲೆ ದೌರ್ಜನ್ಯ ಮಾಡಿದೆ, ತಮಿಳರ ಹತ್ಯೆಗೆ ಕಾರಣವಾಗಿದೆ, ಈ ಸಿನಿಮಾ ಮಾಡುವುದರಿಂದ ತಮಿಳರ ಭಾವನೆಗೆ ಧಕ್ಕೆ ಆಗಲಿದೆ ಎಂದು ವಿರೋಧಿಸುತ್ತಿದ್ದಾರೆ.
ಆದ್ರೆ, ತಮಿಳಿನ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರು ವಿಜಯ್ ಸೇತುಪತಿ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ರಾಧಿಕಾ, 'ರಾಜಕೀಯ ಮತ್ತು ಎಂಟರ್ಟೈನ್ಮೆಂಟ್ ಒಂದೇ ತಕ್ಕಡಿಯಲ್ಲಿ ತೂಗಬೇಡಿ' ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಧಿಕಾ ''ಮುತ್ತಯ್ಯ ಮುರಳೀಧರನ್ ಬಯೋಪಿಕ್ನಲ್ಲಿ ವಿಜಯ್ ಸೇತುಪತಿ ನಟಿಸಬಾರದು ಎಂದು ಕೇಳುತ್ತಿರುವ ಜನರಿಗೆ ಮಾಡಲು ಏನು ಕೆಲಸ ಇಲ್ಲ. ಅಷ್ಟಕ್ಕೂ ಸೈನ್ರೈಸ್ ತಂಡದ ಮುಖ್ಯ ಕೋಚ್ ಆಗಿ ಮುರಳೀಧರನ್ ಕೆಲಸ ಮಾಡ್ತಿದ್ದಾರೆ. ಈ ತಂಡದ ಮಾಲೀಕರು ಒಬ್ಬ ತಮಿಳಿಗ ಹಾಗೂ ರಾಜಕೀಯಕ್ಕೆ ಸೇರಿದವರು. ಇದನ್ನು ಏಕೆ ಯಾರು ಪ್ರಶ್ನಿಸುತ್ತಿಲ್ಲ?'' ಎಂದು ಕೇಳಿದ್ದಾರೆ.
''ಸನ್ ರೈಸರ್ಸ್ ಮತ್ತು ಸನ್ ಟಿವಿಯ ಮಾಲೀಕರು ರಾಜಕೀಯ ಸಂಬಂಧಗಳನ್ನು ಹೊಂದಿದ್ದರೂ, ರಾಜಕೀಯ, ಕ್ರೀಡೆ ಮತ್ತು ಮನರಂಜನೆಯನ್ನು ಸ್ಪಷ್ಟವಾಗಿ ಮತ್ತು ವೃತ್ತಿಪರವಾಗಿ ನಿಭಾಯಿಸಬಹುದು. ಅದೇ ರೀತಿ, ನಮ್ಮ ಸಿನಿಮಾ ಇಂಡಸ್ಟ್ರಿಯ ಅವರು ಏಕೆ ಮನರಂಜನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು'' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನುಳಿದಂತೆ ಚಿತ್ರತಂಡ ಸಹ ಇದೊಂದು ಕ್ರೀಡಾ ಆಧಾರಿತ ಸಿನಿಮಾ. ತಮಿಳು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಸ್ಫೂರ್ತಿದಾಯಕ ಕಥೆ ಎಂದು ಸ್ಪಷ್ಟಪಡಿಸಿದೆ. ಮತ್ತು ವಿಜಯ್ ಸೇತುಪತಿ ಈ ಕುರಿತು ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ.


Click it and Unblock the Notifications











