ಮ್ಯಾನ್ v/s ವೈಲ್ಡ್: ಶೂಟಿಂಗ್ ಮುಗಿಸಿ ಚೆನ್ನೈಗೆ ವಾಪಸ್ ಆದ ರಜನಿಕಾಂತ್
ಬಂಡೀಪುರ ಅಭಿಯಾರಣ್ಯದಲ್ಲಿ ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರದ ಚಿತ್ರೀಕರಣ ಮುಗಿಸಿ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ರಾತ್ರಿಯೇ (ಜನವರಿ 28) ಚೆನ್ನೈಗೆ ವಾಪಸ್ ಆಗಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರದ ಶೂಟಿಂಗ್ ನಲ್ಲಿ ಬೇರ್ ಗ್ರಿಲ್ಸ್ ಜೊತೆಗೆ ತಲೈವಾ ರಜನಿಕಾಂತ್ ಪಾಲ್ಗೊಂಡಿದ್ದರು. ಚಿತ್ರೀಕರಣ ಮುಗಿದ ಮೇಲೆ ರಾತ್ರಿ 8 ಗಂಟೆ ಸುಮಾರಿಗೆ ಮೈಸೂರಿನಿಂದ ಚೆನ್ನೈಗೆ ವಿಮಾನದಲ್ಲಿ ವಾಪಸ್ ಆದರು.
ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರದ ಶೂಟಿಂಗ್ ವೇಳೆ ರಜನಿಕಾಂತ್ ಗಾಯಗೊಂಡಿದ್ದಾರೆ. ಹೀಗಾಗಿ, ಶೂಟಿಂಗ್ ನ ಅರ್ಧದಲ್ಲೇ ಮೊಟಕುಗೊಳಿಸಿ ರಜನಿಕಾಂತ್ ವಾಪಸ್ ಆಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದ್ರೆ, ''ಚಿತ್ರೀಕರಣ ಪೂರ್ಣಗೊಂಡಿದೆ. ಸಣ್ಣ-ಪುಟ್ಟ ತರಚು ಗಾಯಗಳಾಗಿವೆ ಅಷ್ಟೇ. ನನಗೇನೂ ಆಗಿಲ್ಲ. ಸುರಕ್ಷಿತವಾಗಿದ್ದೇನೆ'' ಎಂದು ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇಂಗ್ಲೆಂಡ್ ಮೂಲದ ಸಾಕ್ಷ್ಯಚಿತ್ರ ತಯಾರಕ ಬೇರ್ ಗ್ರಿಲ್ಸ್ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮ್ಯಾನ್ v/s ವೈಲ್ಡ್ ಕಾರ್ಯಕ್ರಮ ಮಾಡಿದ್ದರು. ಇದೀಗ ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿಕಾಂತ್ ಜೊತೆಗೆ ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರವನ್ನ ಬಂಡೀಪುರದಲ್ಲಿ ಚಿತ್ರೀಕರಿಸಿದ್ದಾರೆ.

ಚಿತ್ರೀಕರಣ ಮುಗಿದ ಬಳಿಕ ಕೆಲ ಕಾಲ ಬಂಡೀಪುರದಲ್ಲಿ ರಿಲ್ಯಾಕ್ಸ್ ಮಾಡಿದ ರಜನಿಕಾಂತ್, ಅಲ್ಲಿನ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.

ಇದೇ ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರದ ಶೂಟಿಂಗ್ ನಲ್ಲಿ ಬಾಲಿವುಡ್ ನ ಖತರೋಂಕೆ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಸದ್ಯದಲ್ಲೇ ಭಾಗವಹಿಸಲಿದ್ದಾರೆ.
ವನ್ಯಜೀವಿಗಳಿಗೆ ತೊಂದರೆ ಕೊಡಬಾರದು, ಹೆಚ್ಚು ಶಬ್ದ ಮಾಡಬಾರದು ಎಂಬ ಷರತ್ತಿನ ಮೇಲೆ ಬಂಡೀಪುರ ಅರಣ್ಯದಲ್ಲಿ ಮ್ಯಾನ್ v/s ವೈಲ್ಡ್ ಸಾಕ್ಷ್ಯಚಿತ್ರದ ಶೂಟಿಂಗ್ ಗಾಗಿ ಅವಕಾಶ ನೀಡಲಾಗಿದೆ.


Click it and Unblock the Notifications











