ಬಸ್ ಡ್ರೈವರ್ ಗೆಳೆಯನಿಗೆ ಪ್ರಶಸ್ತಿ ಅರ್ಪಿಸಿದ ರಜನೀಕಾಂತ್
ನಟ ರಜನೀಕಾಂತ್ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಸಿನಿಮಾ ರಂಗದ ಸಾಧನೆಗೆ ಭಾರತದಲ್ಲಿ ನೀಡುವ ಪರಮೋಚ್ಛ ಪ್ರಶಸ್ತಿ ಇದಾಗಿದ್ದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಬಸ್ ಡ್ರೈವರ್ ಗೆಳೆಯನಿಗೆ ರಜನೀಕಾಂತ್ ಅರ್ಪಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಜನೀಕಾಂತ್ ಈ ಪ್ರಶಸ್ತಿಯನ್ನು ಮೊದಲಿಗೆ ತಮ್ಮ ಗುರು, ಮೆಂಟೊರ್ ನಿರ್ದೇಶಕ ಕೆ.ಬಾಲಚಂದ್ರ ತಮ್ಮ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಅವರಿಗೂ ತಮ್ಮ ಆತ್ಮೀಯ ಗೆಳೆಯ, ಬಸ್ ಡ್ರೈವರ್ ಆಗಿದ್ದ ರಾಜ್ ಬಹದ್ಧೂರ್ ಅವರಿಗೆ ಪ್ರಶಸ್ತಿ ಅರ್ಪಣೆ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಚುಟುಕಾಗಿ ಮಾತನಾಡಿದ ರಜನೀಕಾಂತ್, ''ನನ್ನ ಮಾರ್ಗದರ್ಶಕ, ಗುರು ಕೆ ಬಾಲಚಂದರ್ಗೆ ಈ ಪ್ರಶಸ್ತಿ ಅರ್ಪಣೆ ಮಾಡುತ್ತೇನೆ. ಈ ಸಮಯದಲ್ಲಿ ಅವರನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳಲು ಬಯಸುತ್ತೇನೆ'' ಎಂದರು ರಜನೀಕಾಂತ್.

ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್
''ನನ್ನ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ಗೂ ಈ ಪ್ರಶಸ್ತಿ ಅರ್ಪಣೆ. ಅವರು ನನ್ನನ್ನು ತಂದೆಯಂತೆ ಸಾಕಿದರು. ನನಗೆ ಜೀವನ ಮೌಲ್ಯಗಳನ್ನು ಹೇಳಿಕೊಟ್ಟರು. ನನ್ನಲ್ಲಿ ಆಧ್ಯಾತ್ಮಿಕತೆ ತುಂಬಿದ್ದು ಅವರೇ'' ಎಂದು ಅಣ್ಣನನ್ನು ನೆನಪಿಸಿಕೊಂಡರು ರಜನೀ.

ನನ್ನೊಳಗಿನ ನಟನನ್ನು ಗುರುತಿಸಿದ್ದು ಅವನೇ: ರಜನೀಕಾಂತ್
''ಕರ್ನಾಟಕದ ನನ್ನ ಗೆಳೆಯ, ಬಸ್ ಡ್ರೈವರ್, ನನ್ನ ಸಹೋದ್ಯೋಗಿ ರಾಜ್ ಬಹದ್ಧೂರ್ ಅವರಿಗೆ ಈ ಪ್ರಶಸ್ತಿ ಅರ್ಪಿಸಲು ಬಯಸುತ್ತೇನೆ. ನಾನು ಬಸ್ ಕಂಡಕ್ಟರ್ ಆಗಿದ್ದಾಗ ನನ್ನೊಳಗಿರುವ ನಟನನ್ನು ಮೊದಲು ಗುರುತಿಸಿ, ನಾನು ನಟನಾಗುವಂತೆ ಪ್ರೇರಣೆ ನೀಡಿದ್ದೇ ಅವರು'' ಎಂದು ಗೆಳೆಯನನ್ನು ನೆನಪಿಸಿಕೊಂಡರು. ''ಈ ಮೂವರ ಜೊತೆಗೆ ನನ್ನ ಸಿನಿಮಾದ ನಿರ್ಮಾಪಕರು, ನಿರ್ದೇಶಕರುಗಳು, ಸಹ ನಟ-ನಟಿಯರು, ತಂತ್ರಜ್ಞರು, ಮಾಧ್ಯಮ ಹಾಗೂ ನನ್ನೆಲ್ಲ ಅಭಿಮಾನಿಗಳಿಗೂ ಈ ಪ್ರಶಸ್ತಿ ಅರ್ಪಣೆ'' ಎಂದರು ರಜನೀಕಾಂತ್.

ರಜನಿ-ರಾಜ್ ಬಹದ್ಧೂರ್ ಸ್ನೇಹ
ರಜನೀಕಾಂತ್ ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ಬಸ್ನಲ್ಲಿ ಡ್ರೈವರ್ ಆಗಿ ರಾಜ್ ಬಹದ್ದೂರ್ ಕೆಲಸ ಮಾಡುತ್ತಿದ್ದರು. ರಜನೀಕಾಂತ್ರಲ್ಲಿರುವ ನಟನನ್ನು ಮೊದಲಿಗೆ ಗುರುತಿಸಿ, ರಜನೀಕಾಂತ್ ಅನ್ನು ಚೆನ್ನೈಗೆ ಕಳುಹಿಸಿದ್ದು ರಾಜ್ ಬಹದ್ದೂರ್. ಇಂದಿಗೂ ರಾಜ್ ಬಹದ್ದೂರ್ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಮ್ಮ ಗೆಳೆಯನನ್ನು ಕಾಣಲು ರಜನೀಕಾಂತ್ ಆಗಾಗ್ಗೆ ಬೆಂಗಳೂರಿಗೆ ಬರುತ್ತಲಿರುತ್ತಾರೆ. ರಜನೀ ಹಾಗೂ ರಾಜ್ ಬಹದ್ಧೂರ್ ಸ್ನೇಹ, ಮಾದರಿ ಸ್ನೇಹಕ್ಕೆ ಉದಾಹರಣೆಯಾಗಿ ನಿಂತುಬಿಟ್ಟಿದೆ.

ಬಸ್ ಕಂಡಕ್ಟರ್ ಆಗಿದ್ದ ರಜನೀಕಾಂತ್
ಮರಾಠಿ ಕುಟುಂಬದ ರಜನೀಕಾಂತ್ ಜನಿಸಿದ್ದು ಬೆಂಗಳೂರಿನಲ್ಲಿ. ಹನುಮಂತ ನಗರದಲ್ಲಿ ಬಾಲ್ಯ ಯೌವ್ವನ ಕಳೆದ ರಜನೀಕಾಂತ್ರ ಬಾಲ್ಯದ ಹೆಸರು ಶಿವಾಜಿರಾವ್ ಗಾಯಕ್ವಾಡ್. ಕೂಲಿ ಕೆಲಸ ಮಾಡುತ್ತಿದ್ದ ರಜನೀಕಾಂತ್ಗೆ ನಾಟಕಗಳಲ್ಲಿ ಬಹಳ ಆಸಕ್ತಿ. ಅಣ್ಣನ ಸಹಾಯದಿಂದ ಬಿಟಿಎಸ್ನಲ್ಲಿ (ಈಗಿನ ಬಿಎಂಟಿಸಿ) ಕಂಡಕ್ಟರ್ ಕೆಲಸ ಗಿಟ್ಟಿಸಿಕೊಂಡ ರಜನೀಕಾಂತ್ ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ನಟನೆಯನ್ನು ಶಾಸ್ತ್ರೀಯವಾಗಿ ಕಲಿಯುವ ಮನಸ್ಸು ಮಾಡಿದರು. ಆದರೆ ಅವರಿಗೆ ಕುಟುಂಬದವರು ಬೆಂಬಲ ನೀಡಲಿಲ್ಲ. ಆದರೆ ರಜನೀಕಾಂತ್ರ ನಟನಾ ಕಲೆಯ ಬಗ್ಗೆ ವಿಶ್ವಾಸವಿದ್ದ ಬಸ್ ಡ್ರೈವರ್ ರಾಜ್ ಬಹದ್ಧೂರ್ ರಜನೀಕಾಂತ್ ಅನ್ನು ಹುರಿದುಂಬಿಸಿದ್ದಲ್ಲದೆ ಅವರಿಗೆ ಹಣಕಾಸಿನ ನೆರವನ್ನೂ ನೀಡಿದ್ದರು. ಆ ಸಹಾಯವನ್ನು ಇಂದಿನವರೆಗೂ ರಜನೀಕಾಂತ್ ಮರೆತಿಲ್ಲ. ಇಂದು ರಾಜ್ ಬಹದ್ಧೂರ್ ತಮ್ಮ ಗೆಳೆಯನನ್ನು ಕಾಣಲು ಚೆನ್ನೈಗೆ ತೆರಳಿದ್ದಾರೆ.


Click it and Unblock the Notifications











