ಹಿಮಾಲಯದ ಬೇರು ಮತ್ತು ರಜನೀಕಾಂತ್ ಆರೋಗ್ಯ: ಗುಟ್ಟು ರಟ್ಟು ಮಾಡಿದ ಗೆಳೆಯ
ನಟ ರಜನೀಕಾಂತ್ ಅಕ್ಟೋಬರ್ 28 ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು, ಸಣ್ಣ ಶಸ್ತ್ರಚಿಕಿತ್ಸೆ ಬಳಿಕ ನವೆಂಬರ್ 02 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ವೈದ್ಯರು ಒಂದು ವಾರದ ವಿಶ್ರಾಂತಿಗೆ ಸೂಚಿಸಿದ್ದು, ಪ್ರಸ್ತುತ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇಂದು (ನವೆಂಬರ್ 04) ರಂದು ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರಿಗೆ ರಜನೀಕಾಂತ್ಗೆ ವಯಸ್ಸೇ ಆಗುತ್ತಿಲ್ಲವೇ ಎಂಬ ಅನುಮಾನ ಮೂಡಿದೆ. ಅಷ್ಟು ಲವಲವಿಕೆಯಿಂದ ರಜನೀಕಾಂತ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ನಡಿಗೆಯ ಸ್ಟೈಲ್ನಲ್ಲಿನ ಗತ್ತು ತುಸುವೂ ಕಡಿಮೆ ಆಗಿಲ್ಲ.
ರಜನೀಕಾಂತ್ಗೆ 71 ವರ್ಷವಾಗಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಆದರೆ ಈಗಲೂ ಕ್ಯಾಮೆರಾ ಎದುರು ನಿಂತರೆ 25ರ ಯುವಕನಂತೆ ಉತ್ಸಾಹದಿಂದ ನಟಿಸುತ್ತಾರೆ. ಹೌದು, 'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ರಜನೀಕಾಂತ್ಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಯಿತು. ಆದರೆ ಅದರಿಂದ ಅವರು ಹೊರಗೆ ಬಂದಿದ್ದಾರೆ. ರಜನೀಕಾಂತ್ ಆರೋಗ್ಯದ ಬಗ್ಗೆ ಅವರ ಅತ್ಯಾಪ್ತ ಗೆಳೆಯ ರಾಜ್ ಬಹದ್ದೂರ್ ಮಾತನಾಡಿದ್ದಾರೆ. ಅಷ್ಟು ವಯಸ್ಸಾದರೂ ಈಗಲೂ ಚಿರ ಯುವಕನಂತೆ ಮನಸ್ಸನ್ನು, ದೇಹವನ್ನು ಗಟ್ಟಿಯಾಗಿ ಇಟ್ಟುಕೊಂಡಿರುವ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಹಿಮಾಲಯದಲ್ಲಿ ಸಿಗುವ ಬೇರಿನ ರಸ ಕುಡಿಯುತ್ತಾರೆ: ರಾಜ್ ಬಹದ್ಧೂರ್
''ರಜನೀಕಾಂತ್ ಆಗಾಗ್ಗೆ ಹಿಮಾಲಯಕ್ಕೆ ಹೋಗುತ್ತಾರೆ. ಅಲ್ಲಿ ಬೇರೊಂದನ್ನು ತೆಗೆದುಕೊಂಡು ಅದರ ಬೇರಿನ ರಸವನ್ನು ರಜನೀಕಾಂತ್ ಕುಡಿಯುತ್ತಾರೆ. ಅದರಿಂದ ಅವರು ಅಷ್ಟು ಉತ್ಸಾಹದಿಂದ ಇರಲು ಸಾಧ್ಯವಾಗುತ್ತಿದೆ. ರಜನೀಕಾಂತ್ ಊಟ ಸಹ ಸರಿಯಾಗಿ ಮಾಡುವುದಿಲ್ಲ. ಆದರೂ ಗಟ್ಟಿಮುಟ್ಟಿಯಾಗಿ ಇರುತ್ತಾರೆ'' ಎಂದಿದ್ದಾರೆ ರಾಜ್ ಬಹದ್ಧೂರ್.

ರಜನೀಕಾಂತ್ ಗಟ್ಟಿಮುಟ್ಟಾಗಿದ್ದಾರೆ: ರಾಜ್ ಬಹದ್ಧೂರ್
''ರಜನೀಕಾಂತ್ಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು ಆದರೆ ಅವರು ಗಟ್ಟಿಮುಟ್ಟಾಗಿದ್ದಾರೆ. ಕೆಲವು ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದಾಗಿ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ವೈದ್ಯರು ಒಂದು ವಾರ ವಿಶ್ರಾಂತಿ ಮಾಡುವಂತೆ ಹೇಳಿದ್ದಾರೆ. ಆದರೆ ಅವರು ಗಟ್ಟಿ-ಮುಟ್ಟಾಗಿದ್ದಾರೆ'' ಎಂದು ರಾಜ್ ಬಹದ್ದೂರ್ ಹೇಳಿದ್ದಾರೆ.

ಹಿಮಾಲಯಕ್ಕೆ ಆಗಾಗ್ಗೆ ಹೋಗುತ್ತಿರುತ್ತಾರೆ ರಜನೀ
ರಜನೀಕಾಂತ್ ಹಿಮಾಲಯಕ್ಕೆ ಹೋಗುವುದು ಹೊಸ ಸುದ್ದಿಯೇನಲ್ಲ. ಸಾಮಾನ್ಯನಲ್ಲಿ ಸಾಮಾನ್ಯನಂತೆ ಅವರು ಆಗಾಗ್ಗೆ ಹಿಮಾಲಯಕ್ಕೆ ಹೋಗುತ್ತಾರೆ. ಅಲ್ಲಿ ಗುಹೆಯಲ್ಲಿ ಕುಳಿತು ಧ್ಯಾನಸ್ಥರಾಗುತ್ತಾರೆ. ಮಹಾವತರ್ ಬಾಬಾಜಿ ನೆಲೆಸಿದ್ದ ಗುಹೆ, ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಹಳ್ಳಿಗಳಲ್ಲಿ ಬರಿಗಾಲಲ್ಲಿ ನಡೆದಾಡುತ್ತಾರೆ. ಈ ಬಗ್ಗೆ ಸ್ವತಃ ರಜನೀಕಾಂತ್ ಕೆಲವು ಬಾರಿ ಹೇಳಿಕೊಂಡಿದ್ದಾರೆ ಮತ್ತು ರಜನೀಕಾಂತ್ರ ಹಿಮಾಲಯ ಭೇಟಿಯ ಹಲವು ಚಿತ್ರಗಳು ಅಂತರ್ಜಾಲದಲ್ಲಿ ದೊರಕುತ್ತವೆ.

ಯಾವುದೇ ದೊಡ್ಡ ನಿರ್ಣಯ ಮಾಡುವ ಮೊದಲು ಹಿಮಾಲಯ ಭೇಟಿ
ರಜನೀಕಾಂತ್ ಹಿಮಾಲಯ ಪ್ರವಾಸದ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ ಇತ್ತು. ಅವರು ನಂಬುವ ಬಾಬಾ ಅವರ ಹೆಸರಿನಲ್ಲಿ ಸಿನಿಮಾ ಮಾಡಿದರು ದುರಾದೃಷ್ಟವಶಾತ್ ಆ ಸಿನಿಮಾ ಇನ್ನಿಲ್ಲದಂತೆ ಸೋತಿತು. ರಜನೀಕಾಂತ್ ವಿತರಕರಿಗೆ ಹಣ ವಾಪಸ್ಸು ಮಾಡಿದರು. ರಜನೀಕಾಂತ್ ಯಾವುದೇ ದೊಡ್ಡ ನಿರ್ಣಯ ಮಾಡುವ ಮುನ್ನಾ, ಸಿನಿಮಾದ ಚಿತ್ರೀಕರಣ ಆದ ಬಳಿಕ, ಮನೆಯಲ್ಲಿ ಯಾರದ್ದಾದರೂ ಆರೋಗ್ಯ ಹದಗೆಟ್ಟರೆ ಹಿಮಾಲಯಕ್ಕೆ ತೆರಳುತ್ತಾರೆ. ಅಲ್ಲಿ ಕೆಲ ಕಾಲ ಪ್ರಾರ್ಥನೆ ಮಾಡಿ ವಾಪಸ್ಸಾಗುತ್ತಾರೆ.

ರಜನೀಕಾಂತ್ ಆತ್ಮೀಯ ಗೆಳೆಯ ರಾಜ್ ಬಹದ್ಧೂರ್
ಇನ್ನು ರಜನೀಕಾಂತ್ ಹಾಗೂ ರಾಜ್ ಬಹದ್ಧೂರ್ ಅವರದ್ದು ಮಾದರಿ ಸ್ನೇಹ. ರಜನೀಕಾಂತ್ ಬಿಟಿಎಸ್ (ಈಗಿನ ಬಿಎಂಟಿಸಿ)ಯಲ್ಲಿ ಕಂಡಕ್ಟರ್ ಆಗಿದ್ದಾಗ ರಾಜ್ ಬಹದ್ಧೂರ್ ಆ ಬಸ್ಗೆ ಡ್ರೈವರ್ ಆಗಿದ್ದರು. ರಜನೀಕಾಂತ್ರ ಅಭಿನಯ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಹಣಕಾಸು ಸಹಾಯ ಮಾಡಿ ಸಿನಿಮಾ ರಂಗದಲ್ಲಿ ತೊಡಗಿಕೊಳ್ಳಲು ಚೆನ್ನೈಗೆ ಕಳಿಸಿದ್ದು ರಾಜ್ ಬಹದ್ಧೂರ್. ಹಾಗಾಗಿ ರಜನೀಕಾಂತ್ಗೆ ರಾಜ್ ಬಹದ್ಧೂರ್ ಎಂದರೆ ಬಲು ಪ್ರೀತಿ. ಇತ್ತೀಚೆಗೆ ರಜನೀಕಾಂತ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಾಗ ಅದನ್ನು ಅವರು ತಮ್ಮ ಗೆಳೆಯ ರಾಜ್ ಬಹದ್ಧೂರ್ಗೆ ಅರ್ಪಣೆ ಮಾಡಿದರು.


Click it and Unblock the Notifications











