ಕೊರೊನಾ ಕಾರಣಕ್ಕೆ ವಿಜಯ್ ಸೇತುಪತಿ ಮೇಲೆ ಸಿಟ್ಟಾದ ಶ್ರುತಿ ಹಾಸನ್
ನಟಿ ಶ್ರುತಿ ಹಾಸನ್ ಸಿಟ್ಟಾಗಿದ್ದಾರೆ. ತಮ್ಮ ಟ್ವಿಟ್ಟರ್ನಲ್ಲಿ ತಮ್ಮ ಸಿಟ್ಟನ್ನೆಲ್ಲಾ ಹೊರಹಾಕಿದ್ದಾರೆ. ತಾವು ಯಾರ ಮೇಲೆ ಸಿಟ್ಟಾಗಿದ್ದಾರೆ ಎಂಬುದನ್ನು ಅವರು ಟ್ವಿಟ್ಟರ್ನಲ್ಲಿ ಹೇಳಿಲ್ಲವಾದರೂ, ಟ್ವೀಟ್ ಬಾಣ ಬಿಟ್ಟಿರುವುದು ವಿಜಯ್ ಸೇತುಪತಿ ಮೇಲೆಯೇ ಎನ್ನಲಾಗುತ್ತಿದೆ.
ಶ್ರುತಿ ಹಾಸನ್ ಹಾಗೂ ವಿಜಯ್ ಸೇತುಪತಿ ಒಟ್ಟಾಗಿ ಲಾಭಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೆ ಶ್ರುತಿ ಹಾಸನ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಚಿತ್ರೀಕರಣದ ಸೆಟ್ನಲ್ಲಿ ವಿಜಯ್ ಸೇತುಪತಿ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ಶ್ರುತಿ ಹಾಸನ್ ಸಿಟ್ಟಾಗಿದ್ದಾರೆ. ಈ ಬಗ್ಗೆ ವಿಜಯ್ ಸೇತುಪತಿ ಹೆಸರು ಉಲ್ಲೇಖಿಸದೆ ಟ್ವಿಟ್ಟರ್ನಲ್ಲಿ ಸಿಟ್ಟು ಹೊರಹಾಕಿದ್ದಾರೆ ಶ್ರುತಿ ಹಾಸನ್.

ಅಭಿಮಾನಿಗಳ ಕೈಕುಲುಕಿದ ವಿಜಯ್ ಸೇತುಪತಿ
'ಲಾಭಂ' ಸಿನಿಮಾದ ಚಿತ್ರೀಕರಣ ಹೊರಾಂಗಣದಲ್ಲಿ ನಡೆಯುತ್ತಿದ್ದು, ವಿಜಯ್ ಸೇತುಪತಿಯನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅಭಿಮಾನಿಗಳನ್ನು ವಿಜಯ್ ಸೇತುಪತಿ ಭೇಟಿ ಮಾಡಿದ್ದಾರೆ, ಅವರ ಕೈ ಕುಲುಕುವುದು, ತಬ್ಬಿಕೊಳ್ಳುವುದು ಮಾಡಿದ್ದಾರೆ ಇದು ಶ್ರುತಿ ಹಾಸನ್ ಗೆ ಸಿಟ್ಟು ತರಿಸಿದೆ.

ನನ್ನ ಆರೋಗ್ಯ ಕಾಪಾಡಿಕೊಳ್ಳುವ ಹಕ್ಕು ನನಗಿದೆ: ಶ್ರುತಿ ಹಾಸನ್
ಈ ಬಗ್ಗೆ ಸೆಟ್ನಲ್ಲಿ ಸಹ ಶ್ರುತಿ ಹಾಸನ್ ಪ್ರಶ್ನೆ ಎತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲೂ ಬರೆದುಕೊಂಡಿರುವ ಶ್ರುತಿ ಹಾಸನ್, 'ಕೊರೊನಾ ಮುಗಿದುಹೋಗಿಲ್ಲ, ನಾನು ಒಬ್ಬ ವ್ಯಕ್ತಿ ಹಾಗೂ ನಟಿಯಾಗಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಎಚ್ಚರಿಕೆ ವಹಿಸುವ ಹಕ್ಕು ನನಗಿದೆ' ಎಂದು ಬರೆದುಕೊಂಡಿದ್ದಾರೆ.

ಚಿತ್ರೀಕರಣ ಸೆಟ್ಬಿಟ್ಟು ಹೊರನಡೆದ ಶ್ರುತಿ ಹಾಸನ್
ವಿಜಯ್ ಸೇತುಪತಿ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿಗಳೊಡನೆ ಮುಂಜಾಗೃತೆ ವಹಿಸದೆ ಭೇಟಿಯಾಗಿದ್ದು ಕಂಡು ಸಿಟ್ಟಾದ ಶ್ರುತಿ ಹಾಸನ್ ಚಿತ್ರೀಕರಣ ಬಿಟ್ಟು ತೆರಳಿದ್ದಾರೆ ಎನ್ನಲಾಗುತ್ತಿದೆ. ಚಿತ್ರೀಕರಣ ಸೆಟ್ನಲ್ಲಿ ಗರಂ ಸಹ ಆಗಿದ್ದರಂತೆ ಶ್ರುತಿ ಹಾಸನ್.
Recommended Video

ಕೃಷ್ಣಗಿರಿಯಲ್ಲಿ ಹಾಡಿನ ಚಿತ್ರೀಕರಣ
ಕೃಷ್ಣಗಿರಿಯಲ್ಲಿ ವಿಜಯ್ ಸೇತುಪತಿ ಹಾಗೂ ಶ್ರುತಿ ಹಾಸನ್ ನಡುವೆ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಲಾಭಂ ಸಿನಿಮಾವನ್ನು ಎಸ್ಪಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ರಮೇಶ್ ತಿಲಕ್ ಸಹ ಮುಖ್ಯ ಭೂಮಿಕೆಯಲ್ಲಿದ್ದಾರೆ.


Click it and Unblock the Notifications











