ತಮಿಳಿನಲ್ಲಿ 'ಕೆಜಿಎಫ್' ಮಾಡುತ್ತಿದ್ದೇನೆ, ಸಿನಿಮಾಕ್ಕೆ ಆಸ್ಕರ್ ಗ್ಯಾರೆಂಟಿ: ವಿಕ್ರಂ ಘೋಷಣೆ
'ಕೆಜಿಎಫ್' ಸಿನಿಮಾ ಭಾರತದಾದ್ಯಂತ ತನ್ನದೇ ಆದ ಅಭಿಮಾನಿ ವರ್ಗವನ್ನು ಹುಟ್ಟುಹಾಕಿಕೊಂಡಿದೆ. ಈ ವರ್ಷದ ದೇಶದಲ್ಲಿ ಅತಿ ಹೆಚ್ಚು ಮಂದಿ ನೋಡಿದ ಸಿನಿಮಾದಲ್ಲಿ ಒಂದು 'ಕೆಜಿಎಫ್ 2'. ಮತ್ತೊಮ್ಮೆ 'ಕೆಜಿಎಫ್' ಸಿನಿಮಾವನ್ನು ಮಾಡಲು ಸಾಧ್ಯವಿಲ್ಲ. ಸ್ವತಃ ಪ್ರಶಾಂತ್ ನೀಲ್ ಅವರಿಂದಲೂ ಅಂಥಹದ್ದೊಂದು ಸಿನಿಮಾ ಮಾಡಲು ಸಾಧ್ಯವಿಲ್ಲವೇನೋ.
ಆದರೆ ತಮಿಳಿನಲ್ಲಿ ಅಂಥಹದ್ದೊಂದು ಪ್ರಯತ್ನ ಪ್ರಾರಂಭವಾಗಿದೆ. ತಮಿಲಿನ ಪ್ರತಿಭಾವಂತ, ಸೂಕ್ಷ್ಮ ನಿರ್ದೇಶಕ ಪಾ ರಂಜಿತ್ 'ಕೆಜಿಎಫ್' ಕತೆಯನ್ನು ಮತ್ತೆ ತೆರೆಯ ಮೇಲೆ ಹೇಳಲು ಸಿದ್ಧರಾಗಿದ್ದಾರೆ. ಆ ಸಿನಿಮಾಕ್ಕೆ ನಾಯಕನಾಗಿ ನಟಿಸಲಿರುವುದು ಖ್ಯಾತ ನಟ ಚಿಯಾನ್ ವಿಕ್ರಮ್.
ಈ ವಿಷಯವನ್ನು ಸ್ವತಃ ಚಿಯಾನ್ ವಿಕ್ರಮ್ ಅವರೆ ಹೇಳಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾದಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿಕೊಂಡಿರುವುದು ಮಾತ್ರವೇ ಅಲ್ಲದೆ ಆ ಸಿನಿಮಾಕ್ಕೆ ಆಸ್ಕರ್ ಧಕ್ಕಿದರೂ ಧಕ್ಕಬಹುದು ಎಂಬ ಭರವಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಪಾ ರಂಜಿತ್ ಜೊತೆಗೆ ವಿಕ್ರಂ ಸಿನಿಮಾ
ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ವಿಕ್ರಂ, ಪಾ ರಂಜಿತ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡುತ್ತಾ, ಪಾ ರಂಜಿತ್ ಜೊತೆಗೆ ಮಾಡುತ್ತಿರುವ ಸಿನಿಮಾಕ್ಕೆ ಆಸ್ಕರ್ ಬಂದರೆ ಆಶ್ಚರ್ಯವಿಲ್ಲ. ನಾನು ಉತ್ರ್ಪೇಕ್ಷೆಯಿಂದ ಈ ಮಾತನ್ನು ಹೇಳುತ್ತಿಲ್ಲ. ಆ ಸಿನಿಮಾವನ್ನು ಸರಿಯಾಗಿ ಮಾಡಿದರೆ ಖಂಡಿತ ಆಸ್ಕರ್ ಪಡೆದುಕೊಳ್ಳುತ್ತದೆ. ನಟನಾಗಿ ನನಗೆ ಅಲ್ಲದಿದ್ದರೂ, ಸಿನಿಮಾಕ್ಕೆ ಅಥವಾ ನಿರ್ದೇಶನಕ್ಕೆ ಆಸ್ಕರ್ ಖಚಿತವಾಗಿ ಬರಲಿದೆ. ಆ ಕತೆ ಹಾಗಿದೆ'' ಎಂದಿದ್ದಾರೆ ವಿಕ್ರಂ.

ಕೆಜಿಎಫ್ ಸಿನಿಮಾ ಮಾಡುತ್ತಿದ್ದೇವೆ: ವಿಕ್ರಂ
ಪಾ ರಂಜಿತ್ ಮಾಡುತ್ತಿರುವುದು ಕೆಜಿಎಫ್ ಸಿನಿಮಾ. ನಿಮ್ಮ (ಕನ್ನಡ) ಕೆಜಿಎಫ್ ನ ರೀಮೇಕ್ ಅಲ್ಲ. ಅದೇ ಕೆಜಿಎಫ್ ಕತೆಯನ್ನೇ ಬೇರೆ ವಿಧಾನದಲ್ಲಿ ಪಾ ರಂಜಿತ್ ಹೇಳಲು ಹೊರಟಿದ್ದಾರೆ. ಅದೇ ಕಾರಣಕ್ಕೆ ನಾನು ಹೀಗೆ ಗಡ್ಡ ಬಿಟ್ಟು ವಿಚಿತ್ರವಾಗಿ ಕಾಣುತ್ತಿದ್ದೇನೆ. ಕೆಜಿಎಫ್ ನಲ್ಲಿ ಬಹಳ ಹಿಂದೆ ಏನಾಗಿತ್ತು, ಸಮುದಾಯಗಳ ನಡುವೆ ನಡೆದ ಘರ್ಷಣೆಗಳು, ಅಲ್ಲಿನ ಪ್ರಾದೇಶಿಕ ರಾಜಕೀಯ ವಿಷಯಗಳ ಕುರಿತಾಗಿ ಕತೆ ಇರಲಿದೆ'' ಎಂದು ವಿವರಿಸಿದ್ದಾರೆ ವಿಕ್ರಂ.

ನಮಗೆ ಆಸ್ಕರ್ ಲಭಿಸಲಿದೆ: ವಿಕ್ರಂ
''ಬಾಹುಬಲಿ', 'ಕೆಜಿಎಫ್', 'RRR' ಅಂಥಹಾ ಸಿನಿಮಾಗಳು ನಮಗೆ ದೊಡ್ಡದಾಗಿ ಯೋಚಿಸಲು ಕಲಿಸಿವೆ. ನಾವಿಂದು ಇಲ್ಲಿ ಮಾಡುವ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿವೆ. ವಿಶ್ವದಾದ್ಯಂತ ಜನ ನೋಡುತ್ತಿದ್ದಾರೆ. ಹಾಗೆಯೇ ಮುಂದೊಂದು ದಿನ ಬರುತ್ತದೆ ನಾವು ಇಲ್ಲಿ ಮಾಡುವ ಸಿನಿಮಾಕ್ಕೆ ವಿಶ್ವದಾದ್ಯಂತ ಪ್ರಶಸ್ತಿ ಸಿಗುತ್ತದೆ. ಆಸ್ಕರ್ ಸಹ ಲಭಿಸುತ್ತದೆ. ಈಗಾಗಲೇ ರೆಹಮಾನ್ ಸರ್ಗೆ ಲಭಿಸಿದೆ. ನಾಳೆ ಈ ನಟಿಗೂ ಲಭಿಸಬಹುದು, ನನಗೂ ಲಭಿಸಬಹುದು, ನನಗಲ್ಲದಿದ್ದರೆ ನನ್ನ ಸಿನಿಮಾಕ್ಕೆ ಲಭಿಸಬಹುದು'' ಎಂದಿದ್ದಾರೆ ವಿಕ್ರಂ.

'ಕೋಬ್ರಾ' ಸಿನಿಮಾ ಬಿಡುಗಡೆ ಆಗಿದೆ
'ವಿಕ್ರಂ' ನಟನೆಯ 'ಕೋಬ್ರಾ' ಸಿನಿಮಾ ಇದೇ ಬುಧವಾರ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಗಣಿತಜ್ಞನಾಗಿ, ಅಪಾಯಕಾರಿ ಕೊಲೆಗಾರನ ಪಾತ್ರದಲ್ಲಿ ವಿಕ್ರಂ ಮಿಂಚಿದ್ದಾರೆ. ಹಲವು ವೇಷಗಳನ್ನು ವಿಕ್ರಂ ಈ ಸಿನಿಮಾದಲ್ಲಿ ತೊಟ್ಟಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ಶ್ರೀನಿಧಿ ಶೆಟ್ಟಿ ಸಹ ನಟಿಸಿದ್ದಾರೆ. ಸಿನಿಮಾವನ್ನು ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಎಸ್ಎಸ್ ಲಲಿತ್ ಕುಮಾರ್. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.


Click it and Unblock the Notifications











