Vishal : ಪುನೀತ್ ಹುಟ್ಟುಹಬ್ಬಕ್ಕೆ ಹೆಮ್ಮೆ ಪಡುವ ಕಾರ್ಯ ಮಾಡಿದ ತಮಿಳು ನಟ ವಿಶಾಲ್
ಪುನೀತ್ ರಾಜ್ಕುಮಾರ್ಗೆ ಸಾಮಾನ್ಯ ಜನರಷ್ಟೆ ಅಭಿಮಾನಿಗಳಲ್ಲ, ಸ್ಟಾರ್ ನಟ-ನಟಿಯರು ಸಹ ಅವರ ಅಭಿಮಾನಿಗಳಾಗಿದ್ದರು.
Recommended Video
ಅಪ್ಪು ತೀರಿಕೊಂಡ ವಿವಿಧ ಚಿತ್ರರಂಗಗಳಿಂದ ಹಲವು ಸ್ಟಾರ್ ನಟರು ಆಗಮಿಸಿ ಅಪ್ಪು ಸಮಾಧಿ ಮುಂದೆ ಕಣ್ಣೀರು ಗರೆದು ಹೋಗಿದ್ದರು. ಕೇವಲ ಕಣ್ಣೀರು ಗರೆದು ಹೋಗಿದ್ದಲ್ಲ ಬದಲಿಗೆ ಅಪ್ಪು ಆದರ್ಶನಗಳನ್ನು ಕೆಲವಾದರೂ ಪಾಲಿಸುತ್ತಿದ್ದಾರೆ ಎಂಬುದಕ್ಕೆ ತಮಿಳು ನಟ ವಿಶಾಲ್ ಉದಾಹರಣೆ.
ಅಪ್ಪು ತೀರಿಕೊಂಡಾಗ ತಮಿಳು ನಟ ವಿಶಾಲ್ ಬೆಂಗಳೂರಿಗೆ ಆಗಮಿಸಿದ್ದರು. ಪುನೀತ್ರ ಆತ್ಮೀಯ ಸ್ನೇಹಿತರಾಗಿದ್ದ ವಿಶಾಲ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದಲ್ಲದೆ, ಅಪ್ಪು ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಿದ್ದರು. ಕೆಲ ದಿನಗಳ ಬಳಿಕ ನಡೆದ 'ಅಪ್ಪು ನಮನ' ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಅಪ್ಪುಗೆ ನಮನ ಸಲ್ಲಿಸಿದ್ದರು. ಅಷ್ಟು ಮಾಡಿ ಅಪ್ಪುವನ್ನು ಮರೆತುಬಿಟ್ಟಿಲ್ಲ ವಿಶಾಲ್, ಅಪ್ಪು ಅವರ ಆದರ್ಶಗಳನ್ನು ಪಾಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಪ್ಪು ಹುಟ್ಟುಹಬ್ಬಕ್ಕೆ ವಿಶಾಲ್ ಸಮಾಜ ಸೇವೆ
ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಇದೇ ಶುಭ ಸಂದರ್ಭದಲ್ಲಿ ನಟ ವಿಶಾಲ್ ಅವರ ತಂಡ ಪುನೀತ್ ರಾಜ್ಕುಮಾರ್ ಹೆಸರಲ್ಲಿ ತಮಿಳುನಾಡಿನ ವೃದ್ಧಾಶ್ರಮಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದಾರೆ. ಈ ವಿಡಿಯೋಗಳನ್ನು ವಿಶಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೃದ್ಧರು ಪುನೀತ್ ಭಾವ ಚಿತ್ರಕ್ಕೆ ನಮನ ಸಲ್ಲಿಸುತ್ತಿರುವ ದೃಶ್ಯ ಅಪ್ಪು ಅಭಿಮಾನಿಗಳನ್ನು ಭಾವುಕಗೊಳಿಸದೇ ಇರದು.

''ಇಂಥಹಾ ಕೆಲಸ ಮಾಡುವುದರಿಂದ ಅಪ್ಪುಗೆ ಖುಷಿಯಾಗುತ್ತದೆ''
''ನನ್ನ ಗೆಳೆಯ ಪುನೀತ್ ರಾಜ್ಕುಮಾರ್ ಅವರನ್ನು ಸಂತಸಗೊಳಿಸಲು, ಅವರಿಗೆ ಹೆಮ್ಮೆ ಪಡುವಂತೆ ಮಾಡಲು ಮಾಡಬೇಕಾದ ಕೆಲಸವೆಂದರೆ ಪುನೀತ್ ಅವರು ಬಹುವಾಗಿ ಕಾಳಜಿ ಹೊಂದಿದ್ದ ಇಂಥಹಾ ವ್ಯಕ್ತಿಗಳಿಗೆ ಸಹಾಯ ಮಾಡುವುದೇ ಆಗಿದೆ. ಈ ಹಿರಿಯ ಜೀವಗಳು ಪುನೀತ್ಗೆ ಆಶೀರ್ವಾದ ಮಾಡುವುದನ್ನು ನೋಡುವುದು ಮನಸಿಗೆ ಖುಷಿ ನೀಡುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ ವಿಶಾಲ್.
ಭಾವುಕ ವಿಡಿಯೋ ಹಂಚಿಕೊಂಡ ವಿಶಾಲ್
ನಟ ವಿಶಾಲ್ರ ತಂಡ ಹಲವಾರು ವೃದ್ಧಾಶ್ರಮಗಳಿಗೆ ತೆರಳಿ ಭೋಜನ ವ್ಯವಸ್ಥೆ ಮಾಡಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ಜನರಿಗೆ ಭೋಜನ ವ್ಯವಸ್ಥೆಯನ್ನು ವಿಶಾಲ್ ತಂಡ ಮಾಡಿದೆ. ಎಲ್ಲ ವೃದ್ಧಾಶ್ರಮಗಳಲ್ಲಿಯೂ ಪುನೀತ್ ಚಿತ್ರವನ್ನು ಇಟ್ಟು ಅವರಿಗೆ ಕೈಮುಗಿದು ನಮಿಸಲಾಗಿದೆ. ಕೆಲವೆಡೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ. ಕೆಲವೆಡೆ ವೃದ್ಧಾಶ್ರಮ ವಾಸಿಗಳಿಗೆ ಪುನೀತ್ ಹಿರಿಮೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿದ್ದು, ಭಾವುಕ ವಿಡಿಯೋ ಇದಾಗಿದೆ.

ಅಪ್ಪು ಮಾಡುತ್ತಿದ್ದ ಸೇವೆ ಮುಂದುವರೆಸುವುದಾಗಿ ಹೇಳಿದ್ದ ವಿಶಾಲ್
ಪುನೀತ್ ಅಗಲಿದ ಸಂದರ್ಭದಲ್ಲಿ ನಟ ವಿಶಾಲ್ ಭಾವುಕರಾಗಿಬಿಟ್ಟಿದ್ದರು. ಪುನೀತ್ ಬಗ್ಗೆ ಅತೀವ ಪ್ರತಿ ಇರಿಸಿಕೊಂಡಿದ್ದ ವಿಶಾಲ್, ಪುನೀತ್ ರಾಜ್ಕುಮಾರ್ ಬದುಕಿದ್ದಾಗ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯವನ್ನು ತಾವು ಮುಂದುವರೆಸಿಕೊಂಡು ಹೋಗುವುದಾಗಿ ಘೋಷಿಸಿದ್ದರು. ಅವಕಾಶ ಸಿಕ್ಕರೆ ಶಕ್ತಿಧಾಮದ ಜವಾಬ್ದಾರಿಯನ್ನೂ ತಾವೇ ನಿರ್ವಹಿಸುವುದಾಗಿಯೂ ವಿಶಾಲ್ ಹೇಳಿದ್ದರು. ಈ ಬಗ್ಗೆ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದರು. ಆದರೆ ದೊಡ್ಮನೆ ಕುಟುಂಬಕ್ಕೆ ಶಕ್ತಿಧಾಮ ಎನ್ನುವುದು ಕೇವಲ ಸೇವೆಯಲ್ಲ ಅದೂ ಸಹ ಕುಟುಂಬವೇ ಆದ್ದರಿಂದ ಅದರ ಜವಾಬ್ದಾರಿಯನ್ನು ಅವರು ಬಿಟ್ಟುಕೊಡಲಿಲ್ಲ. ಆದರೆ ಇದರಿಂದ ಇನ್ನಷ್ಟು ಪ್ರೇರಣೆಗೊಂಡ ವಿಶಾಲ್, ಇದೀಗ ಅಪ್ಪು ಹುಟ್ಟುಹಬ್ಬಕ್ಕೆ ತಮಿಳುನಾಡಿನಲ್ಲಿಯೇ ವೃದ್ಧರ ಸೇವೆ ಮಾಡುತ್ತಿದ್ದಾರೆ.


Click it and Unblock the Notifications











