ಅಬ್ದುಲ್ ಕಲಾಂ ಕೊಟ್ಟ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊರಟ ವಿವೇಕ್
ಹೃದಯಾಘಾತದಿಂದಾಗಿ ಇಂದು (ಏಪ್ರಿಲ್ 17) ಬೆಳಿಗ್ಗೆ ನಿಧನರಾದ ತಮಿಳಿನ ಹಾಸ್ಯ ನಟ ವಿವೇಕ್, ಪ್ರೇಕ್ಷಕರನ್ನು ನಗಿಸಲು ತೆರೆಯ ಮೇಲೆ ಪೆದ್ದನಂತೆ, ಚಿತ್ರ-ವಿಚಿತ್ರ ಮ್ಯಾನರಿಸಂಗಳನ್ನು ಪ್ರದರ್ಶಿಸಿ ನಟಿಸಿದ್ದುಂಟು ಆದರೆ ನಿಜಜೀವನದಲ್ಲಿ ಅವರೊಬ್ಬ ಗಂಭೀರ, ಜ್ಞಾನ ಮೋಹಿ ವ್ಯಕ್ತಿಯಾಗಿದ್ದರು.
ರಾಜಕೀಯದಿಂದ ದೂರ ಉಳಿದು ಸಮಾಜ ಸೇವೆಯನ್ನು ವ್ರತದಂತೆ ಮಾಡುತ್ತಿದ್ದ ವಿವೇಕ್ ಉತ್ತಮ ಅಧ್ಯಯನಶೀಲರಾಗಿದ್ದರು. ಅದೇ ಕಾರಣಕ್ಕೆ ಹಲವು ವಿದ್ವಾಂಸರು, ಸಾಹಿತಿಗಳು, ರಾಜಕಾರಣಿಗಳ ಆಪ್ತ ಪರಿಚಯ ವಿವೇಕ್ಗೆ ಇತ್ತು. ಎಲ್ಲದ್ದಕ್ಕೂ ಕಳಶವಿಟ್ಟುಂತೆ ಮಾಜಿ ರಾಷ್ಟ್ರಪತಿ ಭಾರತದ ಹೆಮ್ಮೆಯ ವಿಜ್ಞಾನಿ ಅಬ್ದುಲ್ ಕಲಾಂ ಅವರೊಟ್ಟಿಗೆ ಆಪ್ತ ಬಾಂಧವ್ಯವಿತ್ತು ವಿವೇಕ್ಗೆ.
ಅಬ್ದುಲ್ ಕಲಾಂ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ವಿವೇಕ್, ಕಲಾಂ ಅವರ ಹತ್ತಿರದ ಗೆಳೆಯರಂತೆ. ಕಲಾಂ ಅವರ ಪ್ರಿಯ ಗೆಳೆಯ ಹಾಗೂ ಶಿಷ್ಯ ಎರಡೂ ಆಗಿದ್ದ ವಿವೇಕ್ ತನ್ನ ಪ್ರೀತಿಯ ಗುರು ಹೇಳಿದ್ದ ಕೆಲಸವೊಂದನ್ನು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ.

ವಿವೇಕ್ಗೆ ಜವಾಬ್ದಾರಿ ವಹಿಸಿದ್ದ ಅಬ್ದುಲ್ ಕಲಾಂ
ಅಬ್ದುಲ್ ಕಲಾಂ ಅವರು ವಿವೇಕ್ ಅವರಿಗೆ ಒಂದು ಜವಾಬ್ದಾರಿವಹಿಸಿದ್ದರು. 'ನೀನು 10,00,000 ಮರಗಳನ್ನು ನೆಡಬೇಕು' ಎಂದು ಕಲಾಂ ಅವರು ವಿವೇಕ್ಗೆ ಸೂಚಿಸಿದ್ದರು. ಅಂತೆಯೇ ವಿವೇಕ್ ಅವರು 2010 ರಲ್ಲಿ 'ಗ್ರೀನ್ ಕಲಾಂ' ಹೆಸರಿನಲ್ಲಿ ಅಭಿಯಾನ ಆರಂಭಿಸಿ ಮರ ನೆಡಲು ಆರಂಭಿಸಿದರು. ಶಾರುಖ್, ಅಮೀರ್, ಸಲ್ಮಾನ್, ರಜನೀಕಾಂತ್ ಅಂಥ ದೊಡ್ಡ ನಟರು ಇದ್ದಾಗ್ಯೂ ಕಲಾಂ ಅವರು ಗಿಡ ನೆಡುವ ಕೆಲಸವನ್ನು ತಮಗೇ ಹೇಳಿದ್ದರ ಬಗ್ಗೆ ಹಲವು ಬಾರಿ ಹೆಮ್ಮೆಯಿಂದ ಮಾತನಾಡಿದ್ದರು ವಿವೇಕ್.

20 ಲಕ್ಷ ಸಸಿ ನೆಟ್ಟಿದ್ದ ವಿವೇಕ್
ಆದರೆ ಕಲಾಂ ಅವರಿಗೆ ಅಭಿಯಾನದ ಹೆಸರು'ಗ್ರೀನ್ ಕಲಾಂ' ಎಂದಿರುವುದು ಇಷ್ಟವಾಗಲಿಲ್ಲ. ತಮ್ಮ ಹೆಸರಲ್ಲಿ ಅಭಿಯಾನ ನಡೆಯುವುದು ಬೇಡ ಹೆಸರು ಬದಲಾಯಿಸು ಎಂದು ಸೂಚಿಸಿದರು. ಅಂತೆಯೇ ಅಭಿಯಾನಕ್ಕೆ 'ಗ್ರೀನ್ ಗ್ಲೋಬ್' ಎಂದು ಹೆಸರು ಬದಲಾಯಿಸಿ ಕೆಲವೇ ವರ್ಷಗಳಲ್ಲಿ 20,00,000 ಕ್ಕೂ ಹೆಚ್ಚು ಮರಗಳನ್ನು ವಿವೇಕ್ ನೆಟ್ಟುಬಿಟ್ಟರು.

33 ಲಕ್ಷ ಸಸಿಗಳನ್ನು ನೆಟ್ಟಿರುವ ವಿವೇಕ್
ಆದರೆ ಕಲಾಂ ಅವರು ನಿಧನ ಹೊಂದುವ ಮುನ್ನಾ ಮತ್ತೆ ವಿವೇಕ್ಗೆ ಹೊಸ ಜವಾಬ್ದಾರಿ ನೀಡಿದ ಕಲಾಂ, ಅಭಿಯಾನವನ್ನು ಮುಂದುವರೆಸಿ ಒಂದು ಕೋಟಿ ಗಿಡ ನೆಡು ಎಂದಿದ್ದರಂತೆ. ಅಂತೆಯೆ ವಿವೇಕ್ ಸಾಯುವ ಮುನ್ನ 33,00,000 ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ. ವಿವೇಕ್ ಅವರು ಇನ್ನೊಂದು ಆರು-ಏಳು ವರ್ಷ ಬದುಕಿದ್ದಿದ್ದರೆ ಕಲಾಂ ಆಸೆ ಈಡೇರಿಸಿಬಿಟ್ಟಿರುತ್ತಿದ್ದರೇನೋ. ಆದರೆ ಅವರು ಈಗಿಲ್ಲ, ಅವರು ಪ್ರಾರಂಭಿಸಿದ ಅಭಿಯಾನವನ್ನು ಪೂರ್ಣಗೊಳಿಸಬೇಕಿದೆ.

ಪರಿಸರ ಸಂಬಂಧಿ ಅಭಿಯಾನಗಳಿಗೆ ರಾಯಭಾರಿ
ವಿವೇಕ್ ಅವರು ಪರಿಸರ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿ ಸಹ ಆಯ್ಕೆ ಆಗಿದ್ದರು. ತಮಿಳುನಾಡು ಸರ್ಕಾರವು ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ನಟ ಸೂರ್ಯ, ಕಾರ್ತಿ, ಜೋತಿಕ ಜೊತೆಗೆ ವಿವೇಕ್ ಅವರನ್ನೂ ರಾಯಭಾರಿಯನ್ನಾಗಿ ಮಾಡಿತ್ತು. ಸಮುದ್ರ ತೀರಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಸೇರಿದಂತೆ ಹಲವು ಪರಿಸರ ಸಂಬಂಧಿ ಅಭಿಯಾನಗಳಲ್ಲಿ ವಿವೇಕ್ ಪಾಲ್ಗೊಂಡಿದ್ದರು.


Click it and Unblock the Notifications











