ನಟ ಸಿದ್ಧಾಂತ್ ಗೆ ಕೈಕೊಟ್ಟರು ಪೂಜಾ, ಇನ್ಯಾರು?
ತೆಲುಗು ಸೂಪರ್ ಹಿಟ್ ಚಿತ್ರ ಛತ್ರಪತಿ ರೀಮೇಕ್ ಕನ್ನಡದ ಛತ್ರಪತಿಯಲ್ಲಿ ನಟಿಸಲು ಓಕೆ ಅಂದಿದ್ದ ನಟಿ ಪೂಜಾವರ್ಮ ಈ ಚಿತ್ರದಿಂದ ಔಟ್ ಆಗಿದ್ದಾರೆ. ಕಾರಣ ಡೇಟ್ ಸಮಸ್ಯೆ. ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ಈಕೆ, ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ 'ಎಕೆ 56' ಚಿತ್ರದ ನಾಯಕ ಸಿದ್ಧಾಂತ್ ಅವರ ಮುಂದಿನ ಚಿತ್ರ ಛತ್ರಪತಿಗೆ ಆಯ್ಕೆಯಾಗಿದ್ದರು.
ಇದೀಗ ಔಟ್ ಆಗಿರುವ ಪೂಜಾ ಜಾಗಕ್ಕೆ ಮುಂಬೈ ಹುಡುಗಿಯಬ್ಬಳನ್ನು ತಂದು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಅಂದಹಾಗೆ, ಛತ್ರಪತಿ ಚಿತ್ರದ ಶೇ. 70 ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಹೈದ್ರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸತತ ಚಿತ್ರೀಕರಣ ನಡೆಯುತ್ತಿದೆ. ಇದೀಗ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು ಬಾಕಿ ಉಳಿದಿರುವುದು ನಾಯಕಿ ಭಾಗದ ಚಿತ್ರೀಕರಣ ಮಾತ್ರ ಎನ್ನಲಾಗಿದೆ. ಈ ಚಿತ್ರದ ನಿರ್ದೇಶಕರು ದಿನೇಶ್ ಗಾಂಧಿ.
ಈ ಮೊದಲು ಛತ್ರಪತಿ ಚಿತ್ರಕ್ಕೆ ನಾಯಕಿ ರಮ್ಯಾ ಎಂದು ಹೇಳಲಾಗಿತ್ತಾದರೂ ರಮ್ಯಾ ಆಗಲಿಲ್ಲ. ನಂತರ ಶ್ರೇಯಾ ಎಂದಿದ್ದರಾದರೂ ಅದೂ ನಡೆಯಲಿಲ್ಲ. ರಾಗಿಣಿ ನಾಯಕಿ ಎಂದುಕೊಂಡ ಚಿತ್ರತಂಡಕ್ಕೆ ಅವರು ಕೇಳಿದ ಸಂಭಾವನೆ ಸರಿಹೋಗಲಿಲ್ಲ. ನಂತರ ಬಂದು ಅಡ್ವಾನ್ಸ್ ಕೂಡ ಪಡೆದುಕೊಂಡು ಇದೀಗ ಜಾಗ ಖಾಲಿ ಮಾಡಿದ ಪೂಜಾ ಕೂಡ ದಕ್ಕಲಿಲ್ಲ. ಮುಂದೆ ಯಾರಾಗುತ್ತಾರೋ ಗೊತ್ತಿಲ್ಲ. ಆದರೆ ಯಾಕೆ ಹೀಗಾಯ್ತು? ಚಿತ್ರತಂಡಕ್ಕೇ ಗೊತ್ತು... (ಒನ್ ಇಂಡಿಯಾ ಕನ್ನಡ )


Click it and Unblock the Notifications











