ಜೂ ಎನ್ಟಿಆರ್ ಬಳಿಕ ತೆಲುಗಿನ ಮತ್ತೊಬ್ಬ ಸ್ಟಾರ್ ಭೇಟಿಯಾಗಲಿರುವ ಅಮಿತ್ ಶಾ
ಕೆಲ ವಾರಗಳ ಹಿಂದಷ್ಟೆ ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ ಎನ್ಟಿಆರ್ ಬಿಜೆಪಿ ಮುಖಂಡ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಇದು ತೆಲುಗು ರಾಜ್ಯಗಳ ರಾಜಕೀಯ ವಲಯದಲ್ಲಿ ಚರ್ಚೆ ಎಬ್ಬಿಸಿತ್ತು.
ಸ್ವತಃ ಟಿಡಿಪಿ ಪಕ್ಷದ ಸದಸ್ಯರಾಗಿರುವ ಜೂ ಎನ್ಟಿಆರ್ ತಮ್ಮ ಪಕ್ಷ ಮೈತ್ರಿ ಮುರಿದುಕೊಂಡು ವಿರೋಧಿಸುತ್ತಾ ಬಂದಿರುವ ಬಿಜೆಪಿಯ ಉನ್ನತ ಸ್ಥಾಯಿಯ ಮುಖಂಡನನ್ನು ಭೇಟಿಯಾಗಿದ್ದು ಟಿಡಿಪಿ ಪಕ್ಷದ ನಾಯಕರಿಗೆ ಅಸಮಾಧಾನ ಉಂಟು ಮಾಡಿತ್ತು. ಆದರೆ ಇದೊಂದು ಸೌಹಾರ್ಧಯುತ ಭೇಟಿಯೆಂದು ಜೂ ಎನ್ಟಿಆರ್ ಹೇಳಿದರು.
ಅದಕ್ಕೂ ಮುನ್ನ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ನಿತಿನ್ ಅನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿದ್ದರು. ನಿತಿನ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಆಗ ಕೇಳಿಬಂದಿದ್ದವು. ಆದರೆ ಇದೊಂದು ಸೌಹಾರ್ದಯುತ ಭೇಟಿಯೆಂದು ನಿತಿನ್ ಹೇಳಿದರಾದರೂ, ಅನುಮಾನುಗಳು ಈಗಲೂ ಉಳಿದಿವೆ.

ಇದೀಗ ಅಮಿತ್ ಶಾ, ತೆಲುಗು ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟನ ಭೇಟಿಗೆ ಖುದ್ದು ತಾವೇ ಹೈದರಾಬಾದ್ಗೆ ಆಗಮಿಸುತ್ತಿದ್ದಾರೆ. ಆದರೆ ಈ ಬಾರಿಯದ್ದು ಸೌಹಾರ್ಧಯುತ ಭೇಟಿಯಲ್ಲ, ರಾಜಕೀಯ ಭೇಟಿಯೂ ಅಲ್ಲ.
ಇತ್ತೀಚೆಗಷ್ಟೆ ನಟ, ನಿರ್ಮಾಪಕ ಕೃಷ್ಣಂರಾಜು ನಿಧನ ಹೊಂದಿದ್ದು, ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ತಿಳಿಸಲೆಂದು ಸೆಪ್ಟೆಂಬರ್ 16 ರಂದು ಅಮಿತ್ ಶಾ ಬರಲಿದ್ದಾರೆ. ಈ ವೇಳೆ ನಟ ಪ್ರಭಾಸ್ ಅವರನ್ನು ಸಹ ಅಮಿತ್ ಶಾ ಭೇಟಿಯಾಗಲಿದ್ದಾರೆ.
ಪ್ರಭಾಸ್ ತಮ್ಮನ್ನು ತಾವು ರಾಜಕೀಯದಿಂದ ಗಾವುದ ದೂರ ಇರಿಸಿಕೊಂಡಿದ್ದಾರೆ. ಹಾಗಾಗಿ ಅಮಿತ್ ಶಾ, ಪ್ರಭಾಸ್ ಅನ್ನು ಭೇಟಿಯಾದರೂ ಅದಕ್ಕೆ ರಾಜಕೀಯ ಬಣ್ಣ ಬರುವ ಸಾಧ್ಯತೆ ಬಹುತೇಕ ಶೂನ್ಯ. ಅಲ್ಲದೆ, ಅಮಿತ್ ಶಾ ಸಹ ಕೃಷ್ಣಂರಾಜು ನಿಧನಕ್ಕೆ ಸಂತಾಪ ಸೂಚಿಸಲು ಆಗಮಿಸುತ್ತಿದ್ದಾರೆಯೇ ಹೊರತು, ಇದು ರಾಜಕೀಯ ಭೇಟಿಯಲ್ಲ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎರಡೂ ರಾಜ್ಯಗಳಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಈ ಮೊದಲು ಬಿಜೆಪಿಯ ಮೈತ್ರಿ ಪಕ್ಷವಾಗಿತ್ತಾದರೂ ಬಳಿಕ ಮೈತ್ರಿ ಮುರಿದುಕೊಂಡಿತು. ತೆಲಂಗಾಣದ ಆಡಳಿತ ಪಕ್ಷ ಟಿಆರ್ಎಸ್ ಸಹ ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ. ಹಾಗಾಗಿ ಬಿಜೆಪಿಯು ತೆಲುಗು ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಅಲ್ಲಿನ ಜನಪ್ರಿಯ ನಟರನ್ನು ತನ್ನತ್ತ ಸೆಳೆಯುವ ಯತ್ನ ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಈಗಾಗಲೇ ಪವನ್ ಕಲ್ಯಾಣ್ ಜೊತೆ ಮೈತ್ರಿ ಸಾಧಿಸಿಕೊಂಡಿದ್ದು, ಇನ್ನಷ್ಟು ಜನಪ್ರಿಯ ವ್ಯಕ್ತಿಗಳನ್ನು ಸೆಳೆಯುವ ಯತ್ನದಲ್ಲಿದೆ.
ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರ (ಅವಿಭಜಿತ) ಹಾಗೂ ತಮಿಳಿನಾಡಿನಲ್ಲಿ ರಾಜಕೀಯದ ಮೇಲೆ ಸಿನಿಮಾ ಪ್ರಭಾವ ಹೆಚ್ಚು. ಅವಿಭಜಿತ ಆಂಧ್ರ ಪ್ರದೇಶದಲ್ಲಿ ಸಿನಿಮಾ ತಾರೆಯಾಗಿ ಮೇರುಮಟ್ಟದಲ್ಲಿ ಮಿನುಗಿದ ಎನ್ಟಿಆರ್ ಮೂರು ಬಾರಿ ಸಿಎಂ ಸಹ ಆಗಿದ್ದರು. ಅವರು ಮಾತ್ರವೇ ಅಲ್ಲದೆ ಹಲವು ಜನಪ್ರಿಯ ನಟ-ನಟಿಯರು ತೆಲುಗು ರಾಜ್ಯದಲ್ಲಿ ರಾಜಕಾರಣಿಗಳಾಗಿ ಉತ್ತಮ ಪದವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಸಲ್ಲಿಸುತ್ತಲಿದ್ದಾರೆ. ನಟ ಮೆಗಾಸ್ಟಾರ್ ಚಿರಂಜೀವಿ ಸಹ ಸಂಸದರಾಗಿ, ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಪವನ್ ಕಲ್ಯಾಣ್ ಸಹ ತಮ್ಮದೇ ಪಕ್ಷ ಸ್ಥಾಪಿಸಿ ಆಂಧ್ರದಲ್ಲಿ ನಿಧಾನಕ್ಕೆ ಪ್ರಬಲರಾಗುತ್ತಿದ್ದಾರೆ.


Click it and Unblock the Notifications











