ನಟ ನಿತಿನ್ ನಂಬಿಕೆ ದ್ರೋಹಿ, ಅವನಿಗೆ ದುರಹಂಕಾರ: ನಿರ್ದೇಶಕ ವಾಗ್ದಾಳಿ
ಸ್ಟಾರ್ ನಟರನ್ನು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳಲು ಹಾತೊರೆಯುವ ತಂಡಗಳು ಪ್ರತಿ ಚಿತ್ರರಂಗದಲ್ಲೂ ಇರುತ್ತವೆ. ಯಾವುದೋ ಒಂದು ಸಿನಿಮಾದಲ್ಲಿ ನಟರೊಟ್ಟಿಗೆ ಯಾವುದಾದರು ಒಂದು ವಿಭಾಗದಲ್ಲಿ ಕೆಲಸ ಮಾಡಿದ್ದರ ಮುಲಾಜು ಇಟ್ಟುಕೊಂಡು ನಟರನ್ನು ತಮ್ಮ ಸಿನಿಮಾಗಳ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು, ತಮ್ಮ ಮಕ್ಕಳ ಸಿನಿಮಾ ಲಾಂಚ್ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು, ಇತರೆ ತಮ್ಮ ಲಾಭದ ಕಾರ್ಯಗಳಿಗೆ ಸ್ಟಾರ್ ನಟರನ್ನು ಬಳಸಿಕೊಳ್ಳುವುದು ಇಂಥಹವರ ಕೆಲಸ.
ಕನ್ನಡ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಇದು ನಡೆದೇ ಇದೆ. ಇದೀಗ ತೆಲುಗಿನ ಸ್ಟಾರ್ ನಟ ನಿತಿನ್ ಇಂಥಹುದೇ ಕಾರಣಕ್ಕೆ ನಿರ್ದೇಶಕರೊಬ್ಬರಿಂದ ದೂಷಣೆಗೆ ಒಳಗಾಗಿದ್ದಾರೆ.
'ಜಯಂ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಿತಿನ್, ಸ್ವಂತ ಬಲದಿಂದ ಸ್ಟಾರ್ ಆಗಿ ಬೆಳೆದವರು. ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದ ನಿತಿನ್ ಇಂದು ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ಆದರೆ ಇಂಥಹಾ ನಿತಿನ್ ಬಗ್ಗೆ ನಿರ್ದೇಶಕನೊಬ್ಬ ದುರಹಂಕಾರದ ಮಾತುಗಳನ್ನಾಡಿರುವುದಲ್ಲದೆ, ನಿತಿನ್ಗೆ ದುರಹಂಕಾರ ಎಂದು ವೇದಿಕೆ ಮೇಲೆ ನಿಂತು ಮಾಧ್ಯಮಮಗಳ ಮುಂದೆ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ನಿತಿನ್ ಬಗ್ಗೆ ಮೂದಲಿಕೆ
ಅಮ್ಮಾ ರಾಜಶೇಖರ್ ಹಲವು ವರ್ಷಗಳಿಂದ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಹಾಗೂ ತೆಲುಗಿನ ಕೆಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿದ್ದಾರೆ. ಅವರು ಇದೀಗ ಸಿನಿಮಾ ಒಂದನ್ನು ನಿರ್ದೇಶಿಸಿದ್ದು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ನಿತಿನ್ ಅನ್ನು ಆಹ್ವಾನಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ನಟ ನಿತಿನ್ಗೆ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಇದರಿಂದ ಸಿಟ್ಟಾಗಿರುವ ಅಮ್ಮಾ ರಾಜಶೇಖರ್, ಕಾರ್ಯಕ್ರಮದ ವೇದಿಕೆಯಿಂದ ನಿತಿನ್ ಅನ್ನು ಮೂದಲಿಸಿದ್ದಾರೆ.

ನಿತಿನ್ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ನಾನು: ರಾಜಶೇಖರ್
ತಮ್ಮ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮ್ಮಾ ರಾಜಶೇಖರ್, ''ನಿತಿನ್ಗೆ ಡ್ಯಾನ್ಸ್ ಬರುತ್ತಿರಲಿಲ್ಲ. ನಿತಿನ್ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ನಾನು. ನಾನು ಅವನಿಗೆ ಗುರುವಾಗಿದ್ದೆ. ಅದೇ ಗೌರವದಿಂದ ನನ್ನ ಸಿನಿಮಾ ಕಾರ್ಯಕ್ರಮಕ್ಕೆ ನಿತಿನ್ ಬರುತ್ತಾನೆ ಎಂದುಕೊಂಡಿದ್ದೆ. ಆದರೆ ಬರಲಿಲ್ಲ. ಅವನಿಗೆ ಶೂಟಿಂಗ್ ಏನೂ ಇಲ್ಲ, ಮನೆಯಲ್ಲೇ ಇದ್ದಾನೆ. ಇಲ್ಲಿಗೆ ಬರುವುದಿರಲಿ, ನಮ್ಮ ಸಿನಿಮಾ ಬಗ್ಗೆ ಬೈಟ್ ಸಹ ಆತ ಕೊಡಲಿಲ್ಲ'' ಎಂದಿದ್ದಾರೆ.

ನಟರು, ತಂತ್ರಜ್ಞರನ್ನು ತಿಂದು ಮುಗಿಸುತ್ತಾರೆ
''ನಿತಿನ್ ಬೇರೆಯವರ ಕಾರ್ಯಕ್ರಮಗಳಿಗೆ ಹೋಗುತ್ತಾನೆ, ಆದರೆ ನನ್ನ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಕರೆ ಮಾಡಿದಾಗ ಬರುತ್ತೀನಿ ಎಂದು ಹೇಳಿದ್ದ, ಅದಕ್ಕಾಗಿ ನಾನು ವಿಡಿಯೋ ಸಹ ಮಾಡಿದ್ದೆ. ಆದರೆ ಆತ ನನಗೆ ಮೋಸ ಮಾಡಿದ. ತಂತ್ರಜ್ಞರು ಹಣ್ಣಿನಂತೆ, ಅವರನ್ನು ಕಲಾವಿದರು ತಿಂದುಬಿಡುತ್ತಾರೆ, ಬೀಜವನ್ನು ಬಿಸಾಡುತ್ತಾರೆ. ಆದರೆ ನೆಲಕ್ಕೆ ಬಿದ್ದ ಬೀಜ ಬೇರು ಬಿಡುತ್ತದೆ. ಮರವಾಗುತ್ತದೆ, ಸಾವಿರಾರು ಹಣ್ಣನ್ನು ಮತ್ತೆ ಬಿಡುತ್ತದೆ'' ಎಂದು ಡೈಲಾಗ್ ಹೊಡೆದಿದ್ದಾರೆ ಅಮ್ಮಾ ರಾಜಶೇಖರ್.

ತಾಯಿಯನ್ನು, ಗುರುವನ್ನು ಮರೆಯಬಾರದು: ಅಮ್ಮಾ ರಾಜಶೇಖರ್
''ಜೀವನದಲ್ಲಿ ಹೇಗೆ ಬೆಳೆದಿದ್ದೇವೆ, ಅದಕ್ಕೆ ಕಾರಣ ಯಾರು ಎಂಬುದನ್ನು ಮರೆಯಬಾರದು. ನಿತಿನ್ಗೆ ಮಾತ್ರವಲ್ಲ ಇದನ್ನು ಎಲ್ಲ ನಟರಿಗೆ ಹೇಳುತ್ತಿದ್ದೇನೆ, ಡ್ಯಾನ್ಸ್ ಮಾಸ್ಟರ್ ಆಗಿರಬಹುದು, ನಿರ್ದೇಶಕ ಆಗಿರಬಹುದು, ಯಾರೇ ಆಗಲಿ ತಾಯಿಯನ್ನು, ಗುರುವನ್ನು ಮರೆಯಬಾರದು. ಇಂದು ನಿತಿನ್ ಬರದೇ ಇರುವುದಕ್ಕೆ ಬಹಳ ಬೇಸರವಾಗಿದೆ. ನನ್ನ ಮೊದಲ ಪ್ರೊಡಕ್ಷನ್ ಆದರೆ ಇದಕ್ಕೆ ನನ್ನ ಗೆಳೆಯ ನಿತಿನ್ ಬರಲಿಲ್ಲ. ಬರುತ್ತೀನಿ ಎಂದು ಹೇಳಿ ಬರದೇ ಹೋಗಿ ನನಗೆ ನಿತಿನ್ ಅವಮಾನ ಮಾಡಿದ್ದಾರೆ. ನನಗೆ ತೀವ್ರ ಬೇಸರವಾಗಿದೆ. ಆದರೆ ನಿತಿನ್, ಮತ್ತೆ ಮುಖಾ-ಮುಖಿ ಆಗೋಣ, ಆಗ ನಿನ್ನನ್ನು ನೋಡಿಕೊಳ್ಳುತ್ತೇನೆ'' ಎಂದಿದ್ದಾರೆ ಅಮ್ಮಾ ರಾಜಶೇಖರ್.


Click it and Unblock the Notifications











