ಸೂಪರ್ ಸ್ಟಾರ್ ಕೃಷ್ಣ ನಿಧನ: ಸಿನಿ ತಾರೆಯರು ವಿದಾಯ ಹೇಳಿದ್ದು ಹೀಗೆ
ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ತೆಲುಗು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಕೃಷ್ಣ ಅವರು ತೆಲುಗು ಚಿತ್ರರಂಗದ ಕಟ್ಟಿದ ಮಹನೀಯರಲ್ಲಿ ಒಬ್ಬರು ಎನ್ನಲಾಗುತ್ತದೆ. ಹಲವು ಹೊಸತನಗಳನ್ನು ಕೃಷ್ಣ ಅವರು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಡೇರಿಂಗ್-ಡ್ಯಾಶಿಂಗ್ ಹೀರೋ ಎಂದೇ ಪರಿಚಿತರಾಗಿದ್ದ ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ತೆಲುಗಿನ ಸ್ಟಾರ್ ನಟ-ನಟಿಯರು ಮಾತ್ರವೇ ಅಲ್ಲದೆ, ಹಲವು ರಾಜಕಾರಣಿಗಳು. ನೆರೆ ಚಿತ್ರರಂಗದ ಸ್ಟಾರ್ ನಟರು ಕೇಂದ್ರದ ಮಂತ್ರಿಗಳು ಕೆಲವರು ಸಹ ಟ್ವೀಟ್ ಮಾಡಿ ವಿದಾಯ ಹೇಳಿದ್ದಾರೆ.

ಮಾತಿಗೆ ನಿಲುಕದ ವಿಷಾದವಿದು: ಚಿರಂಜೀವಿ
ಕೃಷ್ಣ ಅವರನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ, ''ಮಾತಿಗೆ ನಿಲುಕದ ವಿಷಾದವಿದು. ಸೂಪರ್ ಸ್ಟಾರ್ ಕೃಷ್ಣ ನಮ್ಮನ್ನು ಅಗಲಿ ಹೋಗಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಅವರದ್ದು ಹಿಮಾಲಯದೆತ್ತರದ ಉತ್ತಮ ಮನಸ್ಸು, ಸಾಹಸವೇ ಅವರ ಜೀವವಾಯು, ಧೈರ್ಯ ಎಂಬ ಪದಕ್ಕೆ ಅವರು ಅನ್ವರ್ಥ. ಶ್ರಮ, ಹಠ, ಮಾನವೀಯತೆ, ಮನುಷ್ಯತ್ವಗಳ ಮೂಟೆಯಾಗಿದ್ದರು ಕೃಷ್ಣ. ಈ ರೀತಿಯ ಮಹಾವ್ಯಕ್ತಿತ್ವ ತೆಲುಗು ಚಿತ್ರೋದ್ಯಮದಲ್ಲಿ ಮಾತ್ರವಲ್ಲ, ಭಾರತದಲ್ಲಿಯೇ ಯಾರೂ ಇಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ನನ್ನ ಸಹೋದರ ಮಹೇಶ್ ಬಾಬು ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದೇನೆ'' ಎಂದಿದ್ದಾರೆ.

ಸಾಹಸಕ್ಕೆ ಮತ್ತೊಂದು ಹೆಸರೇ ಕೃಷ್ಣ: ಜೂ ಎನ್ಟಿಆರ್
ನಟ ಜೂ ಎನ್ಟಿಆರ್ ಸಹ ಟ್ವೀಟ್ ಮಾಡಿದ್ದು, ''ಸಾಹಸಕ್ಕೆ ಮತ್ತೊಂದು ಹೆಸರೇ ಸೂಪರ್ ಸ್ಟಾರ್ ಕೃಷ್ಣ. ಎಷ್ಟೋಂದು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ. ಹಲವು ಭಿನ್ನ-ಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಅದು ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗಕ್ಕೆ ಹಲವು ಹೊಸ ತಂತ್ರಜ್ಞಾನವನ್ನು ತೆಗೆದುಕೊಂಡು ಬಂದರು. ತೆಲುಗು ಚಿತ್ರರಂಗಕ್ಕೆ ಕೃಷ್ಣ ಅವರ ಕೊಡಗು ಸದಾ ಸ್ಮರಣೀಯ. ಈ ಸಂದರ್ಭದಲ್ಲಿ ನನ್ನ ಸಹೋದರ ಮಹೇಶ್ ಬಾಬು ಹಾಗೂ ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದು ಹೀಗೆ
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಹ ಕೃಷ್ಣ ಅವರ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು, ''ಜನಪ್ರಿಯ ನಟರಾಗಿ, ಸೂಪರ್ ಸ್ಟಾರ್ ಆಗಿ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಘಟ್ಟಮನೇನಿ ಕೃಷ್ಣ ಅಗಲಿರುವುದು ಬಹಳ ದುಃಖದ ಸಂಗತಿ. ಅವರು ನಟಿಸಿದ ಪಾತ್ರಗಳು ಯುವ ಶಕ್ತಿಯ ಪ್ರತೀಕಗಳಾಗಿದ್ದವು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ತಮ್ಮ ಸಿನಿಮಾಗಳಲ್ಲಿ ಪ್ರಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕೃಷ್ಣ, ತೆಲುಗು ಚಿತ್ರರಂಗಕ್ಕೆ ಹಲವು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದರು. ವರ್ಷಕ್ಕೆ ಸರಾಸರಿ ಹತ್ತು ಚಿತ್ರಗಳನ್ನು ತ್ವರಿತವಾಗಿ ಪೂರ್ಣಗೊಳಿಸಿರುವುದು ಅವರಿದ್ದ ಬದ್ಧತೆಗೆ ಸಾಕ್ಷಿ'' ಎಂದಿದ್ದಾರೆ.

ಬಂಗಾರದ ಯುಗ ಅಂತ್ಯ: ನಾಯ್ಡು
ತೆಲುಗು ಚಿತ್ರರಂಗ ಕಂಡ ಅದ್ಭುತ ಮನುಷ್ಯ, ನಿರ್ಮಾಪಕರ ನಾಯಕ ನಟ, ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದ ನಟ ಹಾಗೂ ಮಾಜಿ ಸಂಸದ ಕೃಷ್ಣ ಅವರ ನಿಧನ ನನಗೆ ಆಘಾತ ತಂದಿದೆ. ತೆಲುಗು ಚಿತ್ರರಂಗಕ್ಕೆ ತಂತ್ರಜ್ಞಾನವನ್ನು ಪರಿಚಯಿಸಿದ ನಟ, ನಿರ್ದೇಶಕ ಆಗಿದ್ದ ಕೃಷ್ಣ ಅವರನ್ನು ಸಾಹಸಿ ಎಂದೇ ಗುರುತಿಸಲಾಗುತ್ತದೆ ಎಂದಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ''ಕೃಷ್ಣ ಅವರ ನಿಧನದೊಂದಿಗೆ ತೆಲುಗು ಚಿತ್ರರಂಗದ ಬಂಗಾರದ ಯುಗ ಅಂತ್ಯವಾಗಿದೆ. ಇತ್ತೀಚೆಗಷ್ಟೇ ತಾಯಿ ಈಗ ತಂದೆಯನ್ನು ಕಳೆದುಕೊಂಡಿರುವ ಮಹೇಶ್ ಬಾಬು ದುಃಖದಲ್ಲಿದ್ದಾರೆ. ಈ ನೋವಿನಿಂದ ಅವರು ಬೇಗ ಚೇತರಿಸಿಕೊಳ್ಳಲು ದೇವರು ಅವರಿಗೆ ಧೈರ್ಯ ನೀಡಲಿ ಎಂದು ಹಾರೈಸುತ್ತೇನೆ. ಅವರ ಕುಟುಂಬ ಸದಸ್ಯರಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಸ್ವರ್ಗದಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾರೆ ಎಂದ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಕೃಷ್ಣ ಅಗಲಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಕೃಷ್ಣ ಅವರ ಸೂಪರ್ ಹಿಟ್ ಸಿನಿಮಾ 'ಮೋಸಗಾಳ್ಳಕು, ಮೋಸಗಾಡು' ಸಿನಿಮಾದ ಹಾಡೊಂದನ್ನು ಟ್ವೀಟ್ ಮಾಡಿ, ''ಯಾರೂ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಕೃಷ್ಣ ಹಾಗೂ ವಿಜಯನಿರ್ಮಲ ಅವರು ಸ್ವರ್ಗದಲ್ಲಿ ಹಾಡುತ್ತಾ-ಕುಣಿಯುತ್ತಾ ಆರಾಮವಾಗಿರುತ್ತಾರೆ'' ಎಂದಿದ್ದಾರೆ. ವಿಜಯನಿರ್ಮಲ, ಕೃಷ್ಣ ಅವರ ಎರಡನೇ ಹೆಂಡತಿ, ನಟ ನರೇಶ್ರ ತಾಯಿ ಸಹ. ವಿಜಯನಿರ್ಮಲ ಅವರು 2019 ರಲ್ಲಿ ನಿಧನ ಹೊಂದಿದರು. ಕೃಷ್ಣ ಅವರ ಮೊದಲ ಹೆಂಡತಿ, ಮಹೇಶ್ ಬಾಬು ಅವರ ತಾಯಿ ಕಳೆದ ತಿಂಗಳಷ್ಟೆ ನಿಧನ ಹೊಂದಿದ್ದರು.


Click it and Unblock the Notifications











