ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಚಿರಂಜೀವಿ: ಜೊತೆ ನಿಲ್ಲುವಂತೆ ಅಭಿಮಾನಿಗಳಿಗೆ ಕರೆ
ಮೆಗಾಸ್ಟಾರ್ ಚಿರಂಜೀವಿ ರಾಜಕೀಯಕ್ಕೆ ಬರುವ ಮುಂಚೆಯಿಂದಲೂ ಸಮಾಜ ಸೇವೆಯೆಡೆಗೆ ತುಡಿಯುತ್ತಿದ್ದ ವ್ಯಕ್ತಿ. ಈಗ ಕೊರೊನಾ ಸಂಕಷ್ಟದ ಸಮಯದಲ್ಲೂ ಸಹ ದೇಣಿಗೆ ನೀಡುವ ಜೊತೆಗೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Recommended Video
ಇದರ ನಡುವೆಯೇ ಚಿರಂಜೀವಿ ಅವರು ಅತ್ಯಂತ ಮಹತ್ವದ ಸೇವೆಯೊಂದಕ್ಕೆ ಚಾಲನೆ ನೀಡಿದ್ದು, ಅದನ್ನು ಅಭಿಯಾನದ ರೂಪದಲ್ಲಿ ಬದಲಾಯಿಸುವಂತೆ ತಮ್ಮ ಅಭಿಮಾನಿಗಳಿಗೆ, ನಾಗರೀಕರಿಗೆ ಕರೆ ನೀಡಿದ್ದಾರೆ.
ಕೊರೊನಾ ಲಾಕ್ಡೌನ್ ಆದ ನಂತರ ರಕ್ತದಾನ ಮಾಡುವವರ ಸಂಖ್ಯೆ ತೀವ್ರವಾಗಿ ಕುಸಿದಿರುವ ಕಾರಣ, ಬಹುತೇಕ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ದಾಸ್ತಾನು ಇಲ್ಲವಾಗಿದೆ.
ಇಂಥಹಾ ಸಮಯದಲ್ಲಿ ನಟ ಚಿರಂಜೀವಿ ಅವರು ರಕ್ತದಾನ ಮಾಡಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಅಭಿಮಾನಿಗಳು, ನಾಗರೀಕರು ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ರಕ್ತದಾನ ಮಾಡಿ ಮಾದರಿಯಾದ ಚಿರಂಜೀವಿ
64 ವರ್ಷ ವಯಸ್ಸಿನ ನಟ ಚಿರಂಜೀವಿ ಅವರು ಇಂದು ಆಸ್ಪತ್ರೆಯೊಂದರಲ್ಲಿ ರಕ್ತದಾನ ಮಾಡಿದ್ದಾರೆ. ಅವರೊಂದಿಗೆ ತೆಲುಗಿನ ಮತ್ತೊಬ್ಬ ಹಿರಿಯ ನಟ ಶ್ರೀಕಾಂತ್, ಅವರ ಮಗ ರೋಷನ್ ಸಹ ರಕ್ತದಾನ ಮಾಡಿದ್ದಾರೆ.

ದಯವಿಟ್ಟು ಎಲ್ಲರೂ ರಕ್ತದಾನ ಮಾಡಿ: ಚಿರಂಜೀವಿ ಕರೆ
ರಕ್ತದಾನದ ನಂತರ ಮಾತನಾಡಿರುವ ಚಿರಂಜೀವಿ, ದಯವಿಟ್ಟು ಎಲ್ಲರೂ ರಕ್ತದಾನ ಮಾಡಿ, ಜೀವ ಉಳಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.
''ಪೊಲೀಸರ ಭಯ ಭೇಡ ಅನುಮತಿ ಪಡೆದು ರಕ್ತದಾನ ಮಾಡಿ''
ರಕ್ತದಾನ ಮಾಡಲು ಹೊರಗೆ ಹೋಗಲು ಪೊಲೀಸ್ ಸಮಸ್ಯೆ ಆಗುವುದಿಲ್ಲ ಎಂದು ಹೇಳಿರುವ ಅವರು, ಸಮೀಪದ ಬ್ಲಡ್ ಬ್ಯಾಂಕ್, ಆಸ್ಪತ್ರೆಯನ್ನು ಫೋನ್ ಮೂಲಕ ಸಂಪರ್ಕಿಸಿ ರಕ್ತದಾನ ಮಾಡುವುದಾಗಿ ಬರುವುದಾಗಿ ಹೇಳಿದರೆ, ಆಸ್ಪತ್ರೆಯವರು ಮೊಬೈಲ್ಗೆ ವಾಟ್ಸ್ಅಪ್ ಮೂಲಕ ಅನುಮತಿ ಪತ್ರ ಕಳುಹಿಸುತ್ತಾರೆ, ಅದನ್ನು ಪೊಲೀಸರಿಗೆ ತೋರಿಸಿ ಆಸ್ಪತ್ರೆಗೆ ಧಾವಿಸಬಹುದು ಎಂದು ಅವರು ಹೇಳಿದ್ದಾರೆ.

ಪೊಲೀಸರೇ ಬಂದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ: ಚಿರಂಜೀವಿ
ಅಷ್ಟೆ ಅಲ್ಲದೆ ಪೊಲೀಸರು ಸಹ ಇದಕ್ಕೆ ಬೆಂಬಲವಾಗಿ ನಿಂತಿದ್ದು, ಪೊಲೀಸರೇ ಮೊಬೈಲ್ ಸಂಖ್ಯೆ ಕೊಟ್ಟಿದ್ದು, ಆ ಸಂಖ್ಯೆಗೆ ಕರೆ ಮಾಡಿದರೆ ಅವರೇ ಬಂದು ರಕ್ತದಾನ ಮಾಡಲಿಚ್ಛಿಸುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು, ವಾಪಸ್ ತಂದು ಮನೆಗೆ ಸೇರಿಸುತ್ತಾರೆ ಎಂದು ಚಿರಂಜೀವಿ ಮಾಹಿತಿ ನೀಡಿದ್ದಾರೆ.

ಹಲವು ರಕ್ತ, ನೇತ್ರದಾನ ಕೇಂದ್ರ ನಡೆಸುತ್ತಿದ್ದಾರೆ ಚಿರು
ಚಿರಂಜೀವಿ ಅವರು ರಾಜಕೀಯಕ್ಕೆ ಬರುವ ಬಹಳಾ ಮೊದಲಿನಿಂದಲೂ ರಕ್ತದಾನ ಮತ್ತು ನೇತ್ರದಾನದ ಬಗ್ಗೆ ಅಭಿಯಾನ ನಡೆಸಿದ್ದರು. ಅವರದ್ದೇ ಹೆಸರಿನಲ್ಲಿ ಆಂಧ್ರ, ತೆಲಂಗಾಣದಲ್ಲಿ ಹಲವಾರು ರಕ್ತ ಮತ್ತು ಕಣ್ಣು ಡೊನೇಶನ್ ಕೇಂದ್ರಗಳಿವೆ.


Click it and Unblock the Notifications











