ನಿನ್ನ ಬಾಯಿ ಕಸದ ಗುಂಡಿ: ಆಂಧ್ರ ಸಚಿವೆ ವಿರುದ್ಧ ಚಿರು ಸಹೋದರ ಫೈರ್
ರಾಜಕೀಯದಲ್ಲಿ ಕೆಸರೆರಚಾಟ ಸಾಮಾನ್ಯ. ಆದರೆ ಆಂಧ್ರ ರಾಜಕೀಯದಲ್ಲಿ ತುಸು ಹೆಚ್ಚಾಗಿಯೇ ಕೆಸರೆರಚಾಟ ನಡೆಯುತ್ತಿದೆ. ಅದರಲ್ಲಿಯೂ ಆಂಧ್ರದ ಆಡಳಿತ ಪಕ್ಷದ ಸದಸ್ಯರು ಪವನ್ ಕಲ್ಯಾಣ್ ವಿರುದ್ಧ ಮುಗಿಬಿದ್ದಿದ್ದಾರೆ. ಕೆಲವರಂತೂ ನೀಚ ಹೇಳಿಕೆಗಳಿಗೂ ಇಳಿದಿದ್ದಾರೆ. ಹಾಗೆಂದು ಪವನ್ ಹಾಗೂ ಅವರ ಬಳಗವೂ ಸುಬಗರೇನೂ ಅಲ್ಲ.
ಅದರಲ್ಲೂ ನಟಿ, ಹಾಲಿ ಸಚಿವೆ ರೋಜಾ ಅಂತೂ ಪವನ್ ಕಲ್ಯಾಣ್ ವಿರುದ್ಧ ಹಾಗೂ ಅವರ ಕುಟುಂಬದ ವಿರುದ್ಧ ಸರಣಿ ಆರೋಪಗಳನ್ನು ನಿಂದನೆಗಳನ್ನು ಮಾಡುತ್ತಲೇ ಬಂದಿದ್ದಾರೆ.
ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಬಳಿ ಪ್ಯಾಕೇಜ್ ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ, ಮೂರು ಮದುವೆಯಾಗಿದ್ದಾರೆ, ಅವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ. ಆತನೊಬ್ಬ ರೌಡಿ ಇನ್ನಿತರೆ ಹೇಳಿಕೆಗಳನ್ನು ರೋಜಾ ನೀಡಿದ್ದರು. ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯದಿಂದ ದೂರ ಉಳಿದಿರುವ ನಟ ಮೆಗಾಸ್ಟಾರ್ ಚಿರಂಜೀವಿಯನ್ನೂ ಟೀಕಿಸಿದ್ದರು.

ಮೆಗಾ ಸಹೋದರರನ್ನು ಟೀಕಿಸಿದ್ದ ರೋಜಾ
''ಪವನ್ ಕಲ್ಯಾಣ್, ನಾಗಬಾಬು ಹಾಗೂ ಚಿರಂಜೀವಿ ತಮಗೆ ಜೀವನ ಕೊಟ್ಟ ಪ್ರಜೆಗಳಿಗೆ ತುಸುವೂ ಸಹಾಯ ಮಾಡಿಲ್ಲ. ಅವರು ಸಹಾಯ ಮಾಡಿದ್ದಿದ್ದರೆ ಜನ ಅವರನ್ನು ಸೋಲಿಸುತ್ತಿರಲಿಲ್ಲ. ಎನ್ಟಿಆರ್, ಎಂಜಿಆರ್, ಜಯಲಲಿತಾ ಅಂಥಹಾ ಸ್ಟಾರ್ ನಟರು ತಮಗೆ ಜನಪ್ರಿಯತೆ ಗಳಿಸಿಕೊಟ್ಟ ಜನರ ಸೇವೆ ಮಾಡಿದರು ಅಂಥಹವರು ನಿಜವಾದ ನಾಯಕರು ಈ ಸಹೋದರರಲ್ಲ'' ಎಂದಿದ್ದಾರೆ.

ಆಂಧ್ರವನ್ನು ಕೊನೆಯ ಸ್ಥಾನಕ್ಕೆ ತಳ್ಳಿರುವೆ ಎಂದ ನಾಗಬಾಬು
ರೋಜಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೆಗಾ ಸಹೋದರರಲ್ಲಿ ಒಬ್ಬರಾದ ನಾಗಬಾಬು, ರೋಜಾಗೆ ಖಡಕ್ ಪ್ರತಿಕ್ರಿಯೆ ನೀಡಿದ್ದು, ''ರೋಜಾ, ಭಾರತದ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿವು, ಅಸ್ಸಾಂ, ಗುಜರಾತ್ ಇದೆ. ಈ ಪಟ್ಟಿಯ ಕೊನೆಯಲ್ಲಿ ಆಂಧ್ರ ಪ್ರದೇಶವಿದೆ. 20 ರಾಜ್ಯಗಳ ಈ ಪಟ್ಟಿಯಲ್ಲಿ 18 ಸ್ಥಾನದಲ್ಲಿ ಆಂಧ್ರ ಪ್ರದೇಶವಿದೆ. ರೋಜಾ ಅವರೇ ಪ್ರವಾಸೋದ್ಯಮ ಮಂತ್ರಿಯಾಗಿ ಮುಂದುವರೆದರೆ ರಾಜ್ಯವನ್ನು 20 ನೇ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ'' ಎಂದಿದ್ದಾರೆ.

'ನೀನು ಪ್ರವಾಸ ಮಾಡುವುದಲ್ಲ, ಇಲಾಖೆ ಅಭಿವೃದ್ಧಿ ಮಾಡು'
''ರೋಜಾ ಸಚಿವೆಯಾಗಿ ತನ್ನ ಜವಾಬ್ದಾರಿಗಳನ್ನು ಮರೆತು ಹುಚ್ಚು-ಹುಚ್ಚಾಗಿ ಮಾತನಾಡುವುದನ್ನು ಮುಂದುವರೆಸಿದರೆ ಶೀಘ್ರವೇ ಆಂಧ್ರ ಪ್ರದೇಶವು ಕೊನೆಯ ಸ್ಥಾನಕ್ಕೆ ನೂಕಲ್ಪಡುತ್ತದೆ. ಆಂಧ್ರ ಪ್ರವಾಸೋದ್ಯಮ ಇಲಾಖೆ ಮೇಲೆ ಸಾವಿರಾರು ಮಂದಿ ಜನರು ನಿರ್ಭರರವಾಗಿದ್ದಾರೆ ಅವರ ಜೀವನಗಳ ಬಗ್ಗೆ ಯೋಚಿಸು. ಹೀಗೆ ಹುಚ್ಚು-ಹುಚ್ಚಾಗಿ ಮಾತನಾಡುವುದು ಮುಂದುವರೆಸಿದರೆ ಅವರ ಜೀವನ ಇನ್ನಷ್ಟು ಧಾರುಣವಾಗುತ್ತದೆ. ಪ್ರವಾಸೋದ್ಯಮ ಮಂತ್ರಿಯಾಗಿ ನಿನ್ನ ಜವಾಬ್ದಾರಿ ಏನು ಎಂಬುದನ್ನು ಅರಿತುಕೋ, ಪ್ರವಾಸೋದ್ಯಮ ಸಚಿವೆ ಎಂದರೆ ನೀನು ಪ್ರವಾಸ ಮಾಡುವುದು ಎಂದಲ್ಲ. ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಎಂದರ್ಥ'' ಎಂದಿದ್ದಾರೆ ನಾಗಬಾಬು.

ನಿನ್ನ ಬಾಯಿ ಮುನ್ಸಿಪಾಲಿಟಿ ತೊಟ್ಟಿ ಎಂದ ನಾಗಬಾಬು
ಮುಂದುವರೆದು, ''ಇಷ್ಟು ದಿನ ನೀನು, ಪವನ್ ಕಲ್ಯಾಣ್, ಚಿರಂಜೀವಿ ಹಾಗೂ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೂ ಸಹ ನಾನು ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ ಅದಕ್ಕೆ ಕಾರಣವೆಂದರೆ, ನಿನ್ನ ಬಾಯಿಗೂ ಮುನ್ಸಿಪಾಲಿಟಿ ಕಸದ ತೊಟ್ಟಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ನಿನ್ನ ಮೆದುಳು ಸಹ ಕಸದ ಗುಂಡಿಗಿಂತಲೂ ಕೆಟ್ಟದಾಗಿದೆ. ಈಗಲಾದರೂ ಬುದ್ಧಿ ಕಲಿತುಕೊಂಡು ನಿನಗೆ ನೀಡಲಾಗಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸು'' ಎಂದಿದ್ದಾರೆ ನಾಗಬಾಬು.


Click it and Unblock the Notifications











