ಚಿರಂಜೀವಿಯನ್ನು ಚಿಲ್ಲರೆ ವ್ಯಕ್ತಿ, ಬ್ರೋಕರ್ ಎಂದ ರಾಜಕಾರಣಿ, ಮಂಡಿಯೂರುವಂತೆ ಮಾಡಿದ ಅಭಿಮಾನಿಗಳು!
ಚಿರಂಜೀವಿ ತೆಲುಗು ರಾಜ್ಯಗಳ ಟಾಪ್ ನಟ. ಎರಡೂ ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ನಟ ಚಿರಂಜೀವಿ.
ರಾಜಕಾರಣಿ ಸಿಪಿಐ ನಾರಾಯಣ ಎಂಬುವರು ಇತ್ತೀಚೆಗೆ ಚಿರಂಜೀವಿ ಬಗ್ಗೆ ಬಹಿರಂಗವಾಗಿ ನಿಂದನಾತ್ಮಕವಾಗಿ ಮಾಡಿದ್ದು ಚಿರಂಜೀವಿ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟುಮಾಡಿದ್ದು, ರಾಜ್ಯದ ಹಲೆವೆಡೆ ಚಿರು ಅಭಿಮಾನಿಗಳು ಸಿಪಿಐ ನಾರಾಯಣ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಸಿಪಿಐ ನಾರಾಯಣ ಹೋದಲ್ಲೆಲ್ಲ ಚಿರಂಜೀವಿ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ನಾರಾಯಣ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಭಿಮಾನಿಗಳು ಒತ್ತಾಯಕ್ಕೆ ಮಣಿದಿರುವ ಸಿಪಿಐ ನಾರಾಯಣ ಧೈನ್ಯವಾಗಿ ಕ್ಷಮಾಪಣೆ ಕೇಳಿದ್ದಾರೆ.

ಮೋದಿ, ಜಗನ್ ಜೊತೆ ಚಿರಂಜೀವಿ ಭಾಗಿ
ಜುಲೈ ಮೊದಲ ವಾರದಲ್ಲಿ ತೆಲುಗು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ವಿಗ್ರಹದ ಉದ್ಘಾಟನಾ ಕಾರ್ಯಕ್ರಮ ಆಂಧ್ರದ ಭೀಮವರಂನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಆಂಧ್ರ ಸಿಎಂ ಜಗನ್ ಭಾಗವಹಿಸಿದ್ದರು. ನಟ ಚಿರಂಜೀವಿ ಅವರಿಗೂ ಆತ್ಮೀಯ ಆಹ್ವಾನವಿತ್ತು. ಅಂತೆಯೇ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರಿಗೆ ಬಹಳ ಒಳ್ಳೆಯ ಸ್ವಾಗತ ಸಹ ಸಿಕ್ಕಿತ್ತು.

ಚಿಲ್ಲರೆ ಚೌಕಾಶಿ ಮಾಡುವ ಬ್ರೋಕರ್ ಆತ: ನಾರಾಯಣ
ಈ ಬಗ್ಗೆ ಇತ್ತೀಚೆಗೆ ತಿರುಪತಿಯಲ್ಲಿ ಮಾತನಾಡಿದ್ದ ಸಿಪಿಐ ನಾರಾಯಣ, ''ಚಿರಂಜೀವಿಯನ್ನು ಆ ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ಆತನೊಬ್ಬ ಚಿಲ್ಲರೆ ಚೌಕಾಶಿ ಮಾಡುವ ವ್ಯಕ್ತಿ, ಆತನೊಬ್ಬ ಬ್ರೋಕರ್. ಪವನ್ ಕಲ್ಯಾಣ್ ಸಹ ಆಟಂ ಬಾಂಬ್ ಇದ್ದಂತೆ ಯಾವಾಗ ಸಿಡಿಯುತ್ತಾನೊ, ಯಾವಾಗ ಸುಮ್ಮನಿರುತ್ತಾನೊ ಗೊತ್ತಾವುದಿಲ್ಲ ಎಂದಿದ್ದರು. ಆಂಧ್ರ ಸಿಪಿಐ ಕಾರ್ಯದರ್ಶಿ ನಾರಾಯಣ ಅವರ ಈ ಹೇಳಿಕೆ ಆಂಧ್ರ, ತೆಲಂಗಾಣ ಎರಡೂ ರಾಜ್ಯಗಳ ಚಿರು ಅಭಿಮಾನಿಗಳಿಗೆ ಆಕ್ರೋಶ ತರಿಸಿತ್ತು.

ಕಸ ತಿನ್ನುವ ನಾರಾಯಣಗೆ ಅನ್ನ ತಿನ್ನಿಸಿ ಎಂದಿದ್ದ ನಾಗಬಾಬು
ಇದಕ್ಕೆ ತಕ್ಕಂತೆ, ಚಿರಂಜೀವಿ, ಪವನ್ ಕಲ್ಯಾಣ್ ಸಹೋದರ ನಾಗಬಾಬು ಮಾತನಾಡಿ, ''ಸಿಪಿಐ ನಾರಾಯಣ ಎನ್ನುವ ವ್ಯಕ್ತಿ ಬಹಳ ಕಾಲದಿಂದ ಕಸ, ಕಡ್ಡಿಗಳನ್ನೇ ತಿನ್ನುತ್ತಿದ್ದಾರಂತೆ, ಹಾಗಾಗಿ ಆತನ ಬುದ್ಧಿ ಸ್ಥಿಮಿತ ಕಳೆದುಕೊಂಡಿದೆ ನಾನು ಮೆಗಾ ಅಭಿಮಾನಿಗಳಲ್ಲಿ ಮಾಡುವ ಮನವಿಯೆಂದರೆ ದಯವಿಟ್ಟು ಆತನಿಗೆ ಸ್ವಲ್ಪ ಅನ್ನ ತಿನ್ನಿಸಿ, ಬುದ್ಧಿ ಕಲಿಸಿಕೊಡಿ ಎಂದಿದ್ದರು. ಚಿರಂಜೀವಿ ಅಭಿಮಾನಿಗಳು ಸಿಪಿಐ ನಾರಾಯಣ ಎಲ್ಲಿ ಹೋದರೆ ಅಲ್ಲೆಲ್ಲ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಜೊತೆಗೆ ಕಾಪು ಸಮುದಾಯದ ಸದಸ್ಯರು ಸಹ ನಾರಾಯಣ ವಿರುದ್ಧ ತಿರುಗಿ ಬಿದ್ದಿದ್ದರು.

ಕ್ಷಮೆ ಕೇಳಿದ ನಾರಾಯಣ
ಕೊನೆಗೆ ತನ್ನ ತಪ್ಪು ಅರ್ಥೈಸಿಕೊಂಡ ಸಿಪಿಐ ನಾರಾಯಣ ಕ್ಷಮೆ ಕೇಳಿದ್ದಾರೆ. ಚಿರಂಜೀವಿ, ಮೆಗಾ ಫ್ಯಾಮಿಲಿಗೆ, ಮೆಗಾ ಅಭಿಮಾನಿಗಳಿಗೆ ಬೇಷರತ್ ಕ್ಷಮೆ ಕೇಳಿರುವ ನಾರಾಯಣ, ನಾನು ಆಡಿರುವ ಮಾತುಗಳನ್ನು ಹಿಂದಕ್ಕೆ ಪಡೆಯುತ್ತೇನೆ. ನಾನು ಆಡಿದ ಮಾತುಗಳನ್ನು ಭಾಷಾ ದೋಷವೆಂದು ಭಾವಿಸಬೇಕು. ನಾನು ಆಡಿದ ಮಾತುಗಳಿಂದಾಗಿ ನಾನು ಬೇಸರ ವ್ಯಕ್ತಪಡಿಸುತ್ತಿದ್ದೇನೆ'' ಎಂದು ಕೈಮುಗಿದಿದ್ದಾರೆ. ನಾರಾಯಣ ಕ್ಷಮೆ ಸ್ವೀಕರಿಸಿರುವ ನಾಗಬಾಬು, ''ಕ್ಷಮೆ ಕೇಳಿದ ಮೇಲೆ ಕ್ಷಮಿಸುವುದು ಮೆಗಾ ಕುಟುಂಬ ಪಾಲಿಸಿಕೊಂಡು ಬಂದಿರುವ ಧರ್ಮ. ನಾರಾಯಣ ಅವರ ವಯಸ್ಸು ಗೌರವಿಸಿ ಅವರ ವಿರುದ್ಧ ಪ್ರತಿಭಟನೆ, ಟ್ರೋಲಿಂಗ್ ಕೈಬಿಡಿ'' ಎಂದು ಮನವಿ ಮಾಡಿದ್ದಾರೆ.


Click it and Unblock the Notifications











