ಚಿತ್ರರಂಗದಲ್ಲಿ ಯಾರೂ ಗೆಳೆಯರಿಲ್ಲ, ಇರುವುದು ಒಬ್ಬನೇ ಗೆಳೆಯ: ಜಗಪತಿ ಬಾಬು
ದಕ್ಷಿಣ ಭಾರತದ ಬಹಳ ಬ್ಯುಸಿ ಖಳ ಮತ್ತು ಪೋಷಕ ನಟ ಜಗಪತಿ ಬಾಬು. ಕಳೆದ 30 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಜಗಪತಿ ಬಾಬು ನಾಯಕ ನಟನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಅವಕಾಶಗಳಿಗೆ ಅನುಗುಣವಾಗಿ ಪಾತ್ರದ ಆಯ್ಕೆಯನ್ನು ಬದಲಾಯಿಸುತ್ತಾ ಬರುತ್ತಿದ್ದಾರೆ. ಹಾಗಾಗಿಯೇ ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.
ಈಗಂತೂ ದಕ್ಷಿಣದ ಎಲ್ಲ ಭಾಷೆಗಳಲ್ಲಿಯೂ ಜಗಪತಿ ಬಾಬು ವಿಲನ್ ಪಾತ್ರದಲ್ಲಿ ನಟಿಸಿ ಆಗಿದೆ. 'ರಾಬರ್ಟ್' ಹಾಗೂ 'ಮದಗಜ' ಜಗಪತಿ ಬಾಬು ಇತ್ತೀಚೆಗೆ ನಟಿಸಿದ ಕನ್ನಡ ಸಿನಿಮಾಗಳು.
ಕಳೆದ ಮೂವತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದರೂ ಜಗಪತಿ ಬಾಬುಗೆ ಚಿತ್ರರಂಗದಲ್ಲಿ ಯಾರೂ ಗೆಳೆಯರಿಲ್ಲವಂತೆ. ಹೀಗೆಂದು ಸ್ವತಃ ಜಗಪತಿ ಬಾಬು ಹೇಳಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಜಗಪತಿ ಬಾಬುಗೆ ಇರುವುದು ಒಬ್ಬರೇ ನಟ ಅದೂ ಕರ್ನಾಟಕ ಮೂಲದವರು!

ಹಣ ಇಲ್ಲದಿದ್ದರೆ ಗುಡ್ ಬೈ ಹೇಳುತ್ತಾರೆ: ಜಗಪತಿ ಬಾಬು
ಸಿನಿಮಾ ರಂಗದ ಸ್ನೇಹಿತರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಗಪತಿ ಬಾಬು, ನನ್ನ 30 ವರ್ಷಗಳ ಸಿನಿಮಾ ಪಯಣದಲ್ಲಿ ಚಿತ್ರರಂಗದ ಒಬ್ಬೇ ಒಬ್ಬರು ಸಹ ಸರಿಯಾದ ಸ್ನೇಹಿತರಿಲ್ಲ. ಎಲ್ಲರೂ ಮೇಲಷ್ಟೆ ತೋರಿಕೆಗೆ ಚೆನ್ನಾಗಿ ಮಾತನಾಡುತ್ತಾರೆ, ಆದರೆ ನಿಜವಾದ ಸ್ನೇಹಬಂಧ ಯಾರಿಗೂ ಇಲ್ಲ. ಹಣವಿದ್ದರಷ್ಟೆ ನಿಮ್ಮ ಹತ್ತಿರಕ್ಕೆ ಸುಳಿಯುತ್ತಾರೆ. ಇಲ್ಲವಾದರೆ ಗುಡ್ ಬೈ ಹೇಳುತ್ತಾರೆ ಎಂದಿದ್ದಾರೆ ಜಗಪತಿ ಬಾಬು.

ಸಿನಿಮಾರಂಗದಲ್ಲಿ ಇರುವುದು ಒಬ್ಬನೇ ಸ್ನೇಹಿತ: ಜಗಪತಿ ಬಾಬು
ತಮಗೆ ಈ ಸಿನಿಮಾ ರಂಗದಲ್ಲಿ ಇರುವುದು ಒಬ್ಬನೇ ಸ್ನೇಹಿತ ಅದು ಅರ್ಜುನ್ ಸರ್ಜಾ ಎಂದಿದ್ದಾರೆ ಜಗಪತಿ ಬಾಬು. ನಾನು ಅರ್ಜುನ್ ಜೊತೆಗೂ ಹಲವು ಬಾರಿ ಜಗಳ ಮಾಡಿದ್ದೇನೆ. ಸ್ನೇಹದಲ್ಲಿ ಜಗಳ ಮಾಮೂಲು, ಆ ಜಗಳ ನಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿ ಮಾಡಿದೆ ಎಂದಿದ್ದಾರೆ ಜಗಪತಿ ಬಾಬು. ಈ ಹಿಂದಿನ ಕೆಲವು ಸಂದರ್ಶನದಲ್ಲಿ ಸಹ ನಟ ಜಗಪತಿ ಬಾಬು ಅರ್ಜುನ್ ಸರ್ಜಾ ನನ್ನ ಆತ್ಮೀಯ ಗೆಳೆಯ ಎಂದು ಹೇಳಿದ್ದರು.

ಕನ್ನಡದಲ್ಲಿ ಸಿಕ್ಕ ಗೌರವ ತೆಲುಗಿನಲ್ಲೂ ಸಿಕ್ಕಿಲ್ಲ ಎಂದಿದ್ದ ಜಗಪತಿ ಬಾಬು
'ರಾಬರ್ಟ್' ಸಿನಿಮಾದಲ್ಲಿ ನಟಿಸಿದ್ದ ಜಗಪತಿ ಬಾಬು, ಹೈದರಾಬಾದ್ನಲ್ಲಿ ಸಿನಿಮಾದ ಕಾರ್ಯಕ್ರಮ ನಡೆದಾಗ, 'ರಾಬರ್ಟ್' ಚಿತ್ರತಂಡ ತನ್ನನ್ನು ವಿಶೇಷವಾಗಿ ನೋಡಿಕೊಂಡಿತು. ಸಾಕಷ್ಟು ಪ್ರೀತಿ ನೀಡಿದರು. ತೆಲುಗು ಚಿತ್ರರಂಗದಲ್ಲಿಯೂ ನನಗೆ ಅಷ್ಟು ಗೌರವ ಧಕ್ಕಿರಲಿಲ್ಲ ಎಂದು ಹೇಳಿದ್ದರು. ನನ್ನನ್ನು ತಮ್ಮ ಮನೆಯ ಅತಿಥಿಯಾಗಿ ನೋಡಿಕೊಂಡರು ಎಂದಿದ್ದರು. ದರ್ಶನ್ ಅನ್ನು ರಿಯಲ್ ಹೀರೋ ಎಂದಿದ್ದ ಜಗಪತಿ ಬಾಬು, ''ದರ್ಶನ್ ಬಹಳ ವಿನಯವಂತ, ಸ್ಟಾರ್ ಆಗಿದ್ದರೂ ಸದಾ ನೆಲದ ಮೇಲೆಯೇ ಇರುತ್ತಾರೆ. ಯಾರು ಏನೇ ಸಹಾಯ ಕೇಳಿದರೂ ಇಲ್ಲವೆನ್ನದೇ ಮಾಡುತ್ತಾರೆ. ಅವರೊಬ್ಬ ರಿಯಲ್ ಹೀರೋ'' ಎಂದಿದ್ದರು.

ಕನ್ನಡದ ಕೆಲವು ಸಿನಿಮಾಗಳಲ್ಲಿ ನಟನೆ
ಜಗಪತಿ ಬಾಬು ಕನ್ನಡದಲ್ಲಿ ನಾಲ್ಕು ಸಿನಿಮಾಗಳಲ್ಲಿ ಈವರೆಗೂ ನಟಿಸಿದ್ದಾರೆ. ಸುದೀಪ್ ನಟನೆಯ 'ಬಚ್ಚನ್', ನಿಖಿಲ್ ಕುಮಾರಸ್ವಾಮಿ ನಟನೆಯ 'ಜಾಗ್ವಾರ್', ದರ್ಶನ್ ನಟನೆಯ 'ರಾಬರ್ಟ್', ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಇದೀಗ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ಗುಡ್ ಲಕ್ ಸಖಿ', ಪ್ರಭಾಸ್ ಜೊತೆಗೆ 'ಸಲಾರ್', 'ರಾಧೆ-ಶ್ಯಾಮ್' ವರುಣ್ ತೇಜ್, ಉಪೇಂದ್ರ ನಟಿಸಿರುವ 'ಗನಿ' ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳು ಬಿಡುಗಡೆ ಆಗಬೇಕಿವೆ.


Click it and Unblock the Notifications











