'ರಾಬರ್ಟ್' ವಿಲನ್ ಜಗಪತಿ ಬಾಬು ಸರಳತೆಗೆ ಸಾಕ್ಷಿ ಈ ಚಿತ್ರ
ದುರ್ಗುಣ ಸಂಪನ್ನರಂತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಎಷ್ಟೋ ಮಂದಿ ವಿಲನ್ಗಳು ನಿಜ ಜೀವನದಲ್ಲಿ ಅಪ್ಪಟ ಚಿನ್ನದಂಥ ಹೃದಯ ಹೊಂದಿದವರಾಗಿರುತ್ತಾರೆ. ವಜ್ರಮುನಿ, ತೂಗುದೀಪ ಶ್ರೀನಿವಾಸ್ ಆದಿಯಿಂದ ಈಗಿನ ನಟ ಕಿಶೋರ್, ಶೋಭರಾಜ್, ರವಿ ಶಂಕರ್ ಹೀಗೆ ಹಲವು ಉದಾಹರಣೆಗಳು ಸಿಗುತ್ತವೆ.
ನಟ ಸೋನು ಸೂದ್ ಅಂತೂ ತೆರೆಯ ವಿಲನ್ ಪಾತ್ರದಲ್ಲಿ ನಟಿಸುವ ನಟರು ನಿಜ ಜೀವನದಲ್ಲಿ ಹೇಗೆ ಭಿನ್ನವಾಗಿರುತ್ತಾರೆ ಎಂಬುದಕ್ಕೆ ಅತ್ಯಂತ ತಾಜಾ ಉದಾಹರಣೆ. ಇದೇ ಪಟ್ಟಿಗೆ ನಟ ಜಗಪತಿ ಬಾಬು ಸಹ ಸೇರಿದ್ದಾರೆ.
ನಾಯಕ ನಟನಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿ ನಂತರ ಇತ್ತೀಚಿನ ಕೆಲವು ವರ್ಷಗಳಿಂದ ವಿಲನ್ ಪಾತ್ರಗಳ ಕಡೆಗೆ ವಾಲಿಸುವ ಜಗಪತಿ ಬಾಬು ತೆರೆಯ ಮೇಲಷ್ಟೆ ವಿಲನ್ ನಿಜ ಜೀವನದಲ್ಲಿ ಅಪ್ಪಟ ಸರಳ, ಮಾನವೀಯತೆಯುಳ್ಳ ವ್ಯಕ್ತಿ. ಜಗಪತಿ ಬಾಬು ಸರಳತೆಗೆ ಸಾಕ್ಷಿ ಎಂಬಂತೆ ಚಿತ್ರವೊಂದು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ.

ಡ್ರೈವರ್, ಸಹಾಯಕನ ಜೊತೆ ಭೋಜನ
ಜಗಪತಿ ಬಾಬು ತನ್ನ ಡ್ರೈವರ್, ಸಹಾಯಕನ ಜೊತೆಗೆ ಕುಳಿತು ಹೋಟೆಲ್ನಲ್ಲಿ ಊಟ ಮಾಡುತ್ತಿರುವ ಚಿತ್ರ ಬಹಳ ವೈರಲ್ ಆಗಿದೆ. ತನ್ನ ಚಾಲಕ, ಸಹಾಯಕನನ್ನೂ ತನ್ನಂತೆಯೇ ಕಾಣುವ ಮಾನವೀಯ ಗುಣ ಜಗಪತಿ ಬಾಬು ಅವರದ್ದು ಎಂಬುದಕ್ಕೆ ಈ ಚಿತ್ರ ಸಾಕ್ಷಿ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ಸಖತ್ ವೈರಲ್ ಆಗುತ್ತಿದೆ.

ಕನ್ನಡದ ಸ್ಟಾರ್ ನಟರು ಮಾದರಿ
ಬಹುತೇಕ ಎಲ್ಲ ಸೆಲೆಬ್ರಿಟಿಗಳಿಗೂ ಡ್ರೈವರ್ಗಳು, ಸಹಾಯಕರು ಇದ್ದಾರೆ ಆದರೆ ಅವರುಗಳನ್ನು ತಮ್ಮ ಸಮಾನರಾಗಿ ನೋಡುವ ಸೆಲೆಬ್ರಿಟಿಗಳು ಕಡಿಮೆಯೇ. ಕನ್ನಡದ ಸ್ಟಾರ್ ನಟರು ಸಾಮಾನ್ಯವಾಗಿ ತಮ್ಮ ಡ್ರೈವರ್ಗಳು, ಅಂಗರಕ್ಷಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ತೆಲುಗಿನ ಕೆಲವು ನಟರು ಸಹ ತಮ್ಮ ಡ್ರೈವರ್ಗಳ, ಅಂಗರಕ್ಷಕರ ಹುಟ್ಟುಹಬ್ಬ ಆಚರಿಸಿ ಉಡುಗೊರೆ ನೀಡುವ ಪರಿಪಾಠ ಹೊಂದಿದ್ದಾರೆ.

ನಿರ್ಮಾಪಕರಿಗೆ ಹೊರೆ ಆಗದ ನಟ ಜಗಪತಿ ಬಾಬು
ಇನ್ನು ನಟ ಜಗಪತಿ ಬಾಬು ಮೊದಲಿನಿಂದಲೂ ತಮ್ಮ ಸರಳತೆಗೆ, ಮಾನವೀಯತೆಗೆ ಖ್ಯಾತರು. ಚಿತ್ರೀಕರಣ ಸಂದರ್ಭದಲ್ಲಿಯೂ ಬಹಳ ಸರಳವಾಗಿಯೇ ಇರಲು ಇಚ್ಛೆಪಡುವ ಜಗಪತಿ ಬಾಬು ನಿರ್ಮಾಪಕರ ಮೇಲೆ ಹೆಚ್ಚಿನ ಹೊರೆ ಆಗದಂತೆ ಇರುತ್ತಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಅಷ್ಟೆ ಅವರು ಬಹಳ ಮಿತ ಭಾಷಿ.

ಕನ್ನಡದ ಮತ್ತೊಂದು ಸಿನಿಮಾದಲ್ಲಿ ಜಗಪತಿ ಬಾಬು
ಕನ್ನಡದ 'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಎದುರು ವಿಲನ್ ಆಗಿ ಅಬ್ಬರಿಸಿರುವ ಜಗಪತಿ ಬಾಬು, ಮುರಳಿ ನಟಿಸಿರುವ 'ಮದಗಜ' ಸಿನಿಮಾದಲ್ಲಿ ವಿಲನ್ ಆಗಿದ್ದಾರೆ. 'ಪುಷ್ಪ', 'ಟಕ್ ಜಗದೀಶ್', 'ಮಹಾ ಸಮುದ್ರಂ', 'ಲಕ್ಷ್ಯ', 'ರಾಧೆ-ಶ್ಯಾಮ್', 'ಅನ್ನಾತೆ', 'ಗುಡ್ ಲಕ್ ಶಶಿ', 'ರುಧಿರಂ', 'ಜಗತ್ ಜೆಂತ್ರಿ' ಇನ್ನೂ ಹಲವು ಸಿನಿಮಾಗಳಲ್ಲಿ ಜಗಪತಿ ಬಾಬು ನಟಿಸುತ್ತಿದ್ದಾರೆ.


Click it and Unblock the Notifications











