ತಮ್ಮದೇ ನಿರ್ದೇಶನದ ಅತ್ಯುತ್ತಮ ಸಿನಿಮಾ ಬಿಡುಗಡೆ ಆದ ದಿನವೇ ಕಣ್ಣು ಮುಚ್ಚಿದ ಕೆ ವಿಶ್ವನಾಥ್!
ತೆಲುಗು ಚಿತ್ರರಂಗದ ಪರಿಚಯವಿದ್ದವರಿಗೆ ಕೆ ವಿಶ್ವನಾಥ್ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ತೆಲುಗು ಚಿತ್ರರಂಕ್ಕೆ ಕೆಲವು ಅತ್ಯದ್ಭುತ ಸಿನಿಮಾಗಳನ್ನು ನೀಡಿದ ಖ್ಯಾತಿ ವಿಶ್ವನಾಥ್ ಅವರದ್ದು. ಮಾತ್ರವೇ ಅಲ್ಲದೆ ಕೆಲವು ಅತ್ಯುತ್ತಮ ನಟರನ್ನು ಚಿತ್ರರಂಗಕ್ಕೆ ತಂದ ಖ್ಯಾತಿಯೂ ಇವರಿಗೆ ಸೇರುತ್ತದೆ.
ಚಿತ್ರರಂಗದಲ್ಲಿ ಬರೋಬ್ಬರಿ 72 ವರ್ಷಗಳನ್ನು ಕಳೆದಿರುವ ಕೆ ವಿಶ್ವನಾಥ್ ಅವರು ನಿನ್ನೆ (ಫೆಬ್ರವರಿ 02) ನಿಧನ ಹೊಂದಿದ್ದಾರೆ. ತೆಲುಗು ಚಿತ್ರರಂಗ ಮಾತ್ರವೇ ಅಲ್ಲದೆ ಬೇರೆ ಇತರ ಚಿತ್ರರಂಗಗಳ ಗಣ್ಯರು ಸಹ ವಿಶ್ವನಾಥ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
1951 ರಲ್ಲಿ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ವಿಶ್ವನಾಥ್, ನಿರ್ದೇಶಕನಾಗಲು ಹದಿನಾಲ್ಕು ವರ್ಷ ಸಮಯ ಹಿಡಿಯಿತು. ಆದರೆ ಒಮ್ಮೆ ನಿರ್ದೇಶಕನ ಟೋಪಿ ತೊಟ್ಟ ಮೇಲೆ ತಮ್ಮದೇ ಆದ ಹೊಸ ಅಲೆಯನ್ನೇ ತೆಲುಗು ಚಿತ್ರರಂಗದಲ್ಲಿ ಎಬ್ಬಿಸಿದರು ವಿಶ್ವನಾಥ್.

ಕಮಲ್ ಹಾಸನ್ ನಾಯಕನಾಗಿ ನಟಿಸಿದ್ದ 'ಸಾಗರ ಸಂಗಮಂ', 'ಸ್ವಾತಿ ಮುತ್ಯಂ' ಸಿನಿಮಾಗಳನ್ನು ಯಾರಾದರೂ ಮರೆಯಲು ಸಾಧ್ಯವೇ! ಅದು ಮಾತ್ರವೇ ಅಲ್ಲ, ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂದು ಹೆಸರಾಗಿರುವ ಶಂಕರಾಭರಣಂ ಸಿನಿಮಾವನ್ನು ನಿರ್ದೇಶಿಸಿದ್ದು ಸಹ ಇದೇ ವಿಶ್ವನಾಥ್. ವಿಪರ್ಯಾಸವೆಂದರೆ ತಮ್ಮ ಅತ್ಯುತ್ತಮ ಸಿನಿಮಾ ಆದ 'ಶಂಕರಾಭರಣಂ' ಬಿಡುಗಡೆ ಆದ ದಿನವೇ ವಿಶ್ವನಾಥ್ ಕಣ್ಣು ಮುಚ್ಚಿದ್ದಾರೆ.
ವಿಶ್ವನಾಥ್ ಅವರ 'ಶಂಕರಾಭರಣಂ' ಸಿನಿಮಾ ಮಾಡಿದ್ದ ಮೋಡಿ ಅಂತಿಂಥಹದ್ದಲ್ಲ. 1980 ರ ಫೆಬ್ರವರಿ 02 ರಂದು ಬಿಡುಗಡೆ ಆಗಿತ್ತು. ಸಿನಿಮಾವು ಸಮಾಜದ ಕಟ್ಟುಪಾಡುಗಳ ಬಗೆಗಿನ ಕತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಹೇಳಿತ್ತು. ಸಿನಿಮಾ ಬಿಡುಗಡೆ ಆದ ಕೆಲವು ದಿನ ಚಿತ್ರಮಂದಿರಗಳು ಖಾಲಿ ಹೊಡೆದವು. ಸಿನಿಮಾ ಅಟ್ಟರ್ ಫ್ಲಾಪ್ ಎನ್ನಲಾಯಿತು. ಆದರೆ ಜನರಿಂದ ಜನರಿಗೆ ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ಹರಡಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಿನಿಮಾಕ್ಕೆ ಪ್ರಶಸ್ತಿಗಳು ಅರಸಿ ಬಂದವು.
ಹೈದರಾಬಾದ್ ಮಾತ್ರವೇ ಅಲ್ಲದೆ ಕೆಲವು ಚಿತ್ರಮಂದಿರಗಳಲ್ಲಿ 200 ಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿತು ಈ ಸಿನಿಮಾ. ಪ್ರೇಕ್ಷಕರು ಚಪ್ಪಲಿಯನ್ನು ಹೊರಗೆ ಬಿಟ್ಟು ಬಂದು ಸಿನಿಮಾ ನೋಡುತ್ತಿದ್ದರಂತೆ. ಸಿನಿಮಾ ಪ್ರದರ್ಶನಕ್ಕೆ ಮುನ್ನ ಪರದೆಗೆ ಜನರೇ ಪೂಜೆ ಮಾಡುತ್ತಿದ್ದರಂತೆ. ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಕೆ ವಿಶ್ವನಾಥ್ಗೆ 'ಶಂಕರಾಭರಣಂ' ಸಿನಿಮಾ ಬಹಳ ವಿಶೇಷವಾಗಿತ್ತು. ವಿಶ್ವನಾಥ್ಗೆ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗಕ್ಕೂ ನಿರ್ದಿಷ್ಟ ದಿಕ್ಕು ಹಾಕಿಕೊಟ್ಟಿದ್ದ ಸಿನಿಮಾ ಅದಾಗಿತ್ತು. ಅಂಥಹಾ ಸಿನಿಮಾದ ಬಿಡುಗಡೆಯ ದಿನದಂದೇ ವಿಶ್ವನಾಥ್ ನಿಧನ ಹೊಂದಿದ್ದಾರೆ.


Click it and Unblock the Notifications











