ಮಾ ಚುನಾವಣೆಯಲ್ಲಿ 'ಲಂಚ್, ಡಿನ್ನರ್, ಪಾರ್ಟಿ' ರಾಜಕೀಯ
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆ ಮುಂದಿನ ಅಕ್ಟೋಬರ್ ಹತ್ತಕ್ಕೆ ನಿಗದಿಯಾಗಿದೆ. ಈ ಬಾರಿಯ ಚುನಾವಣೆಗೆ ಹಿಂದಿಗಿಂತ ಹೆಚ್ಚಿನ ಹೋರಾಟ ಕಂಡುಬರುತ್ತಿದೆ. ಅದರಲ್ಲೂ ಚಿರಂಜೀವಿ ಬೆಂಬಲ ಪಡೆದಿರುವ ನಟ ಪ್ರಕಾಶ್ ರಾಜ್ ( ಪ್ರಕಾಶ್ ರೈ) ಪ್ಯಾನಲ್ ಒಂದಡೆಯಾದರೆ, ಇದರ ವಿರುದ್ಧ ತೊಡೆತಟ್ಟಿ ನಿಂತಿರುವುದು ಸದಾ ಚಿರಂಜೀವಿ ವಿರುದ್ಧ ಕಿಡಿ ಕಾಡುವ ಹಿರಿಯ ನಟ ಮೋಹನ್ ಬಾಬು, ಮಗ ಮಂಚು
ವಿಷ್ಣುವರ್ಧನ್ ನೇತೃತ್ವದ ಮತ್ತೊಂದು ಬಣ. ಇಬ್ಬರ ಮಧ್ಯೆ ಇಂದ ತೀವ್ರ ಸ್ಪರ್ಧೆ ಎದುರಾಗಿದೆ. ಎರಡು ಬಣಗಳು ಗೆಲ್ಲುವುದಕ್ಕಾಗಿ ನಾನಾತರದ ಕಸರತ್ತುಗಳನ್ನು ಆರಂಭಿಸಿವೆ.
ಇದು ಯಾವುದೇ ರಾಜಕೀಯ ಚುನಾವಣೆಯಲ್ಲ, ಲೋಕಸಭಾ, ವಿಧಾನಸಭಾ,ಮುನ್ಸಿಪಾಲಿಟಿ ಅಥವಾ ಗ್ರಾಮ ಪಂಚಾಯತಿ ಎಲೆಕ್ಷನ್ ಗಿಂತ ದೊಡ್ಡಪ್ರಮಾಣದಲ್ಲಿ ಕೇವಲ ಸಾವಿರದಷ್ಟು ಸದಸ್ಯರನ್ನು ಹೊಂದಿರುವ ಕಲಾವಿದರ ಸಂಘಕ್ಕೆ ನಡೆಯುತ್ತಿರುವ ಚುನಾವಣೆಗೆ ಇನ್ನಿಲ್ಲದ ಪ್ರಚಾರ, ನಿತ್ಯ ಪತ್ರಿಕಾಗೋಷ್ಠಿ ಗಳು ಹೀಗೆ ಚುನಾವಣೆಯನ್ನು ತಾರಕಕ್ಕೆ ಎರಡು ಬಣಗಳು ತೆಗೆದುಕೊಂಡು ಹೋಗುತ್ತಿವೆ.

ಜಿದ್ದಾ-ಜಿದ್ದಿನ ಹೋರಾಟ
ಎರಡು ಬಣಗಳು ಚುನಾವಣೆಯನ್ನು ಅತ್ಯಂತ ಪ್ರತಿಷ್ಠಾಪಕವಾಗಿ ತೆಗೆದುಕೊಂಡಿವೆ. ಒಂದಡೆ ಮಾಧ್ಯಮವನ್ನು ಬಳಸಿಕೊಂಡು ಪರಸ್ಪರ ಪತ್ರಿಕಾಗೋಷ್ಠಿಗಳ ಮೂಲಕ ವಿರೋಧಿ ಬಣದ ಮೇಲೆ ಕೆಸರೆರಚಾಟ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೊಂದಡೆ ಮತದಾರರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಲಂಚ್- ಡಿನ್ನರ್ ಮತ್ತು ನೈಟ್ ಪಾರ್ಟಿಗಳ ಆಯೋಜನೆ ಕೂಡ ಮೊದಲಗಳಿಸಿದ್ದಾರೆ. ಒಂದು ಬಣ ಲಂಚ್ ಪಾರ್ಟಿ ಆಯೋಜಿಸಿದರೆ ಅದೇ ರಾತ್ರಿಗೆ ಇನ್ನೊಂದು ಬಣ ಅದೇ ಸದಸ್ಯರಿಗೆ ಡಿನ್ನರ್ ಗೆ ಆಹ್ವಾನ ಕೊಡುತ್ತಿದೆ. ಜೊತೆಗೆ ಎರಡೂ ಕಡೆಯವರಿಂದ ಜೋರಾಗಿ ನೈಟ್ ಪಾರ್ಟಿಗಳ ಆಯೋಜನೆ ಕೂಡ ನಡೆದಿದೆ. ಒಂದೊಂದು ಮತವನ್ನು ಕೂಡ ಸೆಳೆಯಲು ನಾನಾ ಕಸರತ್ತುಗಳನ್ನು ಎರಡು ಕಡೆಯವರು ಮಾಡುತ್ತಿದ್ದಾರೆ.

ಡಿನ್ನರ್ ಪಾರ್ಟಿ ಆಯೋಜಿಸಿದ ಪ್ರಕಾಶ್ ರಾಜ್
ಮಂಚು ವಿಷ್ಣು ಬಣಕ್ಕೆ ಬೆಂಬಲ ಘೋಷಿಸಿರುವ ಪ್ರಸ್ತುತ ಅಧ್ಯಕ್ಷ ನರೇಶ್ ಶನಿವಾರ ಒಂದು ಲಂಚ್ ಪಾರ್ಟಿ ಆಯೋಜಿಸಿದ್ದೆ ತಡ, ಭಾನುವಾರ ರಾತ್ರಿ ಪ್ರಕಾಶ್ ರಾಜ್ ದಿಡೀರಾಗಿ ನೈಟ್ ಡಿನ್ನರ್ ಪಾರ್ಟಿ
ಆಯೋಜಿಸಿದ್ದರು. 'ಕುಳಿತು ಮಾತನಾಡಿ ಕೊಳ್ಳೋಣ. ತಮ್ಮ ಗುರಿಗಳನ್ನು ಚರ್ಚಿಸೋಣ, ಒಟ್ಟಿಗೆ ಕೂತು ಊಟ ಮಾಡೋಣ' ಅನ್ನುವ ಸಂದೇಶದೊಂದಿಗೆ ಸದಸ್ಯರುಗಳನ್ನು ಊಟಕ್ಕೆ ಆಹ್ವಾನಿಸಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದು ಅಲ್ಲದೆ ಅಸಂತೃಪ್ತರನ್ನು ತನ್ನಡೆಗೆ ಸೆಳೆದುಕೊಳ್ಳುವ ಜಾಣ ನಡೆಯನ್ನು ಪ್ರದರ್ಶಿಸಿದ್ದಾರೆ.

ಹಾಗಂತ ವಿರೋಧಿ ಬಣವೇನು ಸುಮ್ಮನೆ ಕೂತಿಲ್ಲ!
ಹೀಗೆ ಪ್ರಕಾಶ್ ರೈ ಪ್ಯಾನಲ್ ಪಕ್ಕ ಪ್ಲಾನಿಂಗ್ ನೊಂದಿಗೆ ಗೆಲುವಿಗೆ ಬೇಕಾದ ಯೋಜನೆಗಳನ್ನು ರೂಪಿಸುತ್ತಿದೆ. ಅತ್ತ ವಿರೋಧಿ ಬಣ ಕೂಡ ಅಷ್ಟೇ ಸಕ್ರಿಯವಾಗಿದೆ. ನನ್ನ ಬೆಂಬಲಕ್ಕೆ ನಿಂತಿರುವ ಸದಸ್ಯರು ಯಾವುದೇ ಕಾರಣಕ್ಕೂ ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಬೆಂಬಲಕ್ಕೆ ನಿಂತಿರುವ ಮಾಜಿ ಅಧ್ಯಕ್ಷ ನರೇಶ್ ಅವರ ಬೆಂಬಲದ ನೂರಾರು ಸದಸ್ಯರನ್ನು ಕೂಡ ಪ್ರಕಾಶ್ ರೈ ಬಣದೊಳಗೆ ಸೇರದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಜಾತಿ ಆಧಾರಿತವಾಗಿ ಚುನಾವಣೆ?
ಇದೇ ಮೊದಲ ಬಾರಿಗೆ ಮಾ ಚುನಾವಣೆಯಲ್ಲಿ ಜಾತಿಯ ಫ್ಯಾಕ್ಟರ್ ಕೂಡ ಕೆಲಸ ಮಾಡಲು ಆರಂಭಿಸಿದೆ. ಪ್ರಕಾಶ್ ರೈ ಮೂಲತಃ ತೆಲುಗು ನಟನಲ್ಲ ಎಂಬುವುದು ಕೆಲವು ನಟರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಪ್ರಕಾಶ ರೈ ಅವರಿಗೆ ಚಿರಂಜೀವಿ ಕುಟುಂಬದ ಪೂರ್ಣ ಬೆಂಬಲ ದೊರೆತಿರುವುದು ಅನೇಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇದೆಲ್ಲದರ ಪರಿಣಾಮ ಈಗ ನಿಧಾನವಾಗಿ ಜಾತಿಯ ಅಸ್ತ್ರವನ್ನು ಕೂಡ ಪ್ರಯೋಗಿಸಲಾಗುತ್ತಿದೆ. ಎರಡು ಪ್ಯಾನಲ್ ನಲ್ಲಿರುವ ಅಭ್ಯರ್ಥಿಗಳಿಗೆ ಅವರವರ ಸಾಮಾಜಿಕ ವರ್ಗದ ಮತಗಳು ನೇರವಾಗಿ ವರ್ಗಾವಣೆಯಾಗಲಿದೆ. ಹಿಂದೆ ಜಾತಿಯ ಬಗ್ಗೆ ಮಾತನಾಡದೆ ಇದ್ದವರು ಕೂಡ ಈಗ ಅದರ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುತ್ತಿದ್ದಾರೆ. ಹಿಂದಿನಿಂದಲೂ ತೆಲುಗು ಸಿನಿಮಾ ರಂಗದಲ್ಲಿ ಜಾತಿಯ ಪ್ರಭಾವ ದಟ್ಟವಾಗಿತ್ತು. ಆದರೆ ಅದು ನೇರವಾಗಿ ಕಾಣಿಸುತ್ತಿರಲಿಲ್ಲ.ಆದರೆ ಕಲಾವಿದರ ಆಯ್ಕೆ, ತಂತ್ರಜ್ಞರ ಆಯ್ಕೆಯಲ್ಲಿ ಮಾತ್ರ ಜಾತಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಲೇ ಬಂದಿದೆ. ಚುನಾವಣೆಯಲ್ಲೂ ಈಗ ಅದರ ಬಿಸಿ ತಟ್ಟಿದ್ದು, ಎಲ್ಲದಕ್ಕೂ ಉತ್ತರ ಅಕ್ಟೋಬರ್ 10 ರಂದು ಮಾ ಸದಸ್ಯರು ಚುನಾವಣೆಯ ಮೂಲಕ ನೀಡಲಿದ್ದಾರೆ.


Click it and Unblock the Notifications











