ನಟನೆ ಬಿಟ್ಟು ದಿನಸಿ ಅಂಗಡಿ ಇಟ್ಟುಕೊ: ನಟ ನಾನಿಗೆ ರೋಜಾ ಸಲಹೆ
ತೆಲುಗಿನ ನಾಯಕ ನಟ ನಾನಿ ಆಂಧ್ರ ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆ ತೀವ್ರ ಚರ್ಚೆ ಹುಟ್ಟುಹಾಕಿದೆ. ನಾನಿ ಹೇಳಿಕೆಗೆ ಕೆಂಡವಾಗಿರುವ ಜಗನ್ ಸರ್ಕಾರದ ಸಚಿವರು, ಶಾಸಕರುಗಳು ನಾನಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ನಾನಿ ನಟನೆಯ 'ಶ್ಯಾಮ ಸಿಂಘ ರಾಯ್' ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಗೆ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ನಾನಿ ಆಂಧ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು.
ಆಂಧ್ರದಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ಇಳಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ನಟ ನಾನಿ, ''ಆಂಧ್ರದಲ್ಲಿ ಚಿತ್ರಮಂದಿರಗಳಿಗಿಂತಲೂ ದಿನಸಿ ಅಂಗಡಿಗಳು ಹೆಚ್ಚು ಲಾಭ ಮಾಡುತ್ತಿವೆ. ಟಿಕೆಟ್ ದರ ಇಳಿಸುವ ವಿಚಾರ ಸರ್ಕಾರದ ಬುದ್ಧಿಹೀನ ಹಾಗೂ ತರ್ಕರಹಿತ ನಿರ್ಧಾರ. ಟಿಕೆಟ್ ದರ ಇಳಿಸಿರುವುದು ಪ್ರೇಕ್ಷಕರಿಗೆ ಮಾಡಿದ ಅಪಮಾನ'' ಎಂದಿದ್ದರು.

ನಾನಿ ಹೇಳಿಕೆಗೆ ನಟಿ, ವೈಎಸ್ಆರ್ ಕಾಂಗ್ರೆಸ್ ಶಾಸಕಿ ರೋಜಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ''ಚಿತ್ರಮಂದಿರದಲ್ಲಿ ಹೆಚ್ಚು ಲಾಭವಿಲ್ಲವಾದರೆ ನಾನಿ ಸಿನಿಮಾದಲ್ಲಿ ನಟಿಸುವುದು ಬಿಟ್ಟ ದಿನಸಿ ಅಂಗಡಿ ಇಟ್ಟುಕೊಳ್ಳಲಿ'' ಎಂದಿದ್ದಾರೆ.
''ಸರ್ಕಾರ ನೇಮಿಸಿರುವ ಸಮಿತಿಯು ಎಲ್ಲವನ್ನೂ ಪರಿಶೀಲನೆ ಮಾಡಿಯೇ ಚಿತ್ರಮಂದಿರಗಳ ಟಿಕೆಟ್ ದರ ನಿಗದಿ ಪಡಿಸಿದೆ. ನಾನಿ ಅಂಥಹಾ ನಟರು ಸ್ವಾರ್ಥಿಗಳು. ಅವರ ತಮ್ಮ ಸಿನಿಮಾಗಳು, ದೊಡ್ಡ ಸಿನಿಮಾಗಳ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತಾರೆ. ಸಣ್ಣ ಸಿನಿಮಾಗಳ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ'' ಎಂದರು.
ಸಿನಿಮಾ ರಂಗದ ಮಂದಿ ಲಾಭಕೋರರಾಗಿದ್ದಾರೆ. ಇತ್ತೀಚೆಗೆ ನಡೆದ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆ ಇದಕ್ಕೆ ಸಾಕ್ಷಿ. ವಿಧಾನಸಭೆ ಚುನಾವಣೆಗಿಂತಲೂ ಜೋರಾಗಿ ಚುನಾವಣೆ ನಡೆದಿದೆ. ಅಧಿಕಾರಕ್ಕಾಗಿ ಒಬ್ಬರ ಮೇಲೆ ಒಬ್ಬರು ಕೆಟ್ಟದಾಗಿ ಮಾತನಾಡಿದ್ದಾರೆ, ಹಲವು ಆಮಿಷಗಳನ್ನು ಒಡ್ಡಿದ್ದಾರೆ. ಇಂಥಹವರು ಈಗ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ'' ಎಂದು ಒಟ್ಟಾರೆ ತೆಲುಗು ಚಿತ್ರರಂಗವನ್ನೇ ಟೀಕಿಸಿದ್ದಾರೆ ರೋಜಾ.
''ಚಿತ್ರರಂಗದಲ್ಲಿ ಕೆಲವರಿಗೆ ಬಾಯಿ ಚಪಲ ಹೆಚ್ಚು. ಸಿನಿಮಾದ ಹೊರಗೂ ನಾಯಕರಾಗುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗಾಗಿ ಇಂದು ಈ ಸ್ಥಿತಿ ತಲುಪಿದ್ದಾರೆ'' ಎಂದು ಪರೋಕ್ಷವಾಗಿ ಪವನ್ ಕಲ್ಯಾಣ್ ಅನ್ನು ಟೀಕಿಸಿರುವ ರೋಜಾ, ಸರ್ಕಾರ ಸಹ ದ್ವೇಷ ರಾಜಕಾರಣದ ಭಾಗವಾಗಿಯೇ ಟಿಕೆಟ್ ರೇಟು ತಗ್ಗಿಸಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.


Click it and Unblock the Notifications











